ಸಿದ್ದರಾಮಯ್ಯ ಪುತ್ರ ಕುರಿತು ರೆಡ್ಡಿ ಹೇಳಿಕೆಗೆ ಸರ್ವ ಪಕ್ಷಗಳ ನಾಯಕರ ಛೀಮಾರಿ
ಬೆಂಗಳೂರು, ಅಕ್ಟೋಬರ್ 31: ಜನಾರ್ದನ ರೆಡ್ಡಿಯವರಿಗೆ ಸಂಸ್ಕೃತಿ ಮನುಷ್ಯತ್ವ ಎರಡೂ ಇಲ್ಲ ಹಾಗಾಗಿ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಯಾವ ಅಗತ್ಯವೂ ನನಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗನ ಸಾವಿಗೆ ನಾನು ಮಾಡಿರುವ ಪಾಪಗಳೇ ಕಾರಣ ಎಂದು ಹೇಳುವ ಮೂಲಕ ಜನಾರ್ದನ ರೆಡ್ಡಿ ಅವರ ಸ್ಥಾನ ಅವರ ಗುಣ ಏನೆಂದು ತೋರಿಸಿಕೊಟ್ಟಿದ್ದಾರೆ. ಅವರು ಯಾವಾಗಲೂ ಕ್ರಿಮಿನಲ್ ರೀತಿಯಲ್ಲೇ ಆಲೋಚಿಸುತ್ತಾರೆ ಆದರೆ ಕ್ಷಮಿಸುವುದು ನಮ್ಮ ಸಂಸ್ಕೃತಿ, ರಾಜಕಾರಣದಲ್ಲಿ ಟೀಕೆ ಮಾಡುವುದು ಸಾಮಾನ್ಯ ಆದರೆ ಕುಟುಂಬದ ಬಗ್ಗೆ ಮಾತನಾಡುವುದನ್ನು ನಾನು ಎಂದಿಗೂ ಒಪ್ಪುವುದಿಲ್ಲ ಎಂದು ಹೇಳಿದರು.
ಜನಾರ್ದನ ರೆಡ್ಡಿ ಪಾಪಕ್ಕೆ ಮಕ್ಕಳಿಗೆ ಶಿಕ್ಷೆ ಆಗದಿರಲಿ: ಸಿದ್ದರಾಮಯ್ಯ ಟ್ವೀಟ್
ಜನಾರ್ದನ ರೆಡ್ಡಿಯವರೇನು ರಾಜಮನೆತನದಿಂದ ಬಂದವರಾ, ನಾನು ಮೈಸೂರಿನಲ್ಲಿ ಇರುತ್ತಾ 40 ವರ್ಷಚಾದರೂ ಒಂದು ಸ್ವಂತ ಮನೆಯನ್ನು ಕಟ್ಟುಕೊಳ್ಳಲು ಸಾಧ್ಯವಾಗಿಲ್ಲ ಆದರೆ ಜನಾರ್ದನ ರೆಡ್ಡಿ ಐಷಾರಾಮಿಯಾಗಿ ಜೀವನ ನಡೆಸುತ್ತಿದ್ದಾರೆ ಹಾಗಾದರೆ ಅವರಿಗೆ ಹಣ ಎಲ್ಲಿಂದ ಬಂತು, ಅವರ ಮಗಳ ಮದುವೆಗೆ ಅಷ್ಟೆಲ್ಲಾ ಹಣವನ್ನು ಖರ್ಚು ಮಾಡಿದ್ದಾರೆ ಆದರೆ ಅದನ್ನೆಲ್ಲಾ ಹೇಳುವ ಅಗತ್ಯ ನಮಗಿಲ್ಲ ಎಂದರು.
ಜನಾರ್ದನ ರೆಡ್ಡಿ ಸಿದ್ದರಾಮಯ್ಯ ಅವರ ಪುತ್ರ ಸಾವಿಗೆ ಸಿದ್ದರಾಮಯ್ಯ ಮಾಡಿದ ಪಾಪಕೃತ್ಯಗಳೇ ಕಾರಣ ಎಂದು ಲೇವಡಿ ಮಾಡಿದ್ದರು. ಜನಾರ್ದನ ರೆಡ್ಡಿ ಹೇಳಿಕೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರು ಛೀಮಾರಿ ಹಾಕಿದ್ದಾರೆ.
ಜನಾರ್ದನ ರೆಡ್ಡಿ ಕ್ಷಮೆ ಯಾಚಿಸಬೇಕು
ಸಿದ್ದರಾಮಯ್ಯ ಕುಟುಂಬದ ವಿಚಾರದ ಬಗ್ಗೆ ಜನಾರ್ದನ ರೆಡ್ಡಿ ಮಾತನಾಡಿರುವುದು ತಪ್ಪು, ಇದು ಅವರಿಗೆ ಶೋಭೆ ತರುವಂತದ್ದಲ್ಲ ಕೂಡಲೇ ಸಿದ್ದರಾಮಯ್ಯ ಅವರ ಬಳಿ ಕ್ಷಮೆ ಯಾಚಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ರಾಜಕೀಯದಲ್ಲಿ ಮೌಲ್ಯಯುತ ಚರ್ಚೆ ನಡೆಯಬೇಕು
ರಾಜಕೀಯದಲ್ಲಿ ಮೌಲ್ಯಯುತ ಚರ್ಚೆ ನಡೆಯಬೇಕೇ ಹೊರತು ವೈಯಕ್ತಿಕ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳಬಾರದು, ಜನಾರ್ದನ ರೆಡ್ಡಿ ಸಿದ್ದರಾಮಯ್ಯ ಅವರ ಬಗ್ಗೆ ಹೇಳಿಕೆ ನೀಡಿರುವುದು ತಪ್ಪು ಎಂದು ಆರ್ ಅಶೋಕ್ ಹೇಳಿದ್ದಾರೆ.
ಮಗನ ಸಾವಿನ ಕುರಿತ ಹೇಳಿಕೆಗೆ ಸಿದ್ದರಾಮಯ್ಯ ಮಾರ್ಮಿಕ ಪ್ರತಿಕ್ರಿಯೆ
ರಾಜಕಾರಣದ ಗಣಿಮಿತಿಯಲ್ಲಿ ಟೀಕೆ ಟಿಪ್ಪಣಿ ಇರಬೇಕು
ರಾಜಕಾರಣದ ಗಣಿಮಿತಿಯಲ್ಲಿ ಟೀಕೆ ಟಿಪ್ಪಣಿಗಳು ಇರಬೇಕು, ರಾಜಕಾರಣ ಎಂದಮೇಲೆ ಟೀಕೆ ಟಿಪ್ಪಣಿಗಳು ಸಾಮಾನ್ಯ ಆದರೆ ರಾಜಕಾರಣದಲ್ಲಿ ವೈಯಕ್ತಿಕ ವಿಚಾರಗಳನ್ನು ಎಳೆದು ತರುವುದು ಸೂಕ್ತವಲ್ಲ ಎಂದು ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಬಹಿರಂಗ ಚರ್ಚೆಗೆ ನೀವೇ ಸ್ಥಳ ನಿಗದಿ ಮಾಡಿ ರೆಡ್ಡಿಗೆ ಸಿದ್ದರಾಮಯ್ಯ ಸವಾಲು
ರಾಜಕಾರಣದಲ್ಲಿ ಯಾರೂ ಕೆಳಮಟ್ಟದ ರಾಜಕಾರಣ ಮಾಡಬಾರದು
ಪುತ್ರ ಶೋಕ ಎನ್ನುವುದು ದೊಡ್ಡ ಶೋಕ, ರಾಜಕಾರಣ ಮಾಡಬೇಕು ಆದರೆ ಕೆಳಮಟ್ಟದ ರಾಜಕಾರಣ ಮಾಡಬಾರದ, ಕಾರ್ಯಕ್ರಮಗಳಲ್ಲಿ ಬೇಕಾದರೆ ರಾಜಕಾರಣಿಗಳ ಬಗ್ಗೆ ಮಾತನಾಡಲಿ ಲೋಪದೋಷಗಳನ್ನು ತಿಳಿಸಲಿ ಆದರೆ ವ್ಯಕ್ತಿಗಳ ಚಾರಿತ್ರ್ಯ ಹರಣ ಮಾಡುವುದು, ಕೆಳಮಟ್ಟದ ರಾಜಕಾರಣ ಮಾಡುವುದು ತಪ್ಪು ಎಂದು ಆರ್ವಿ ದೇಶಪಾಂಡೆ ಪ್ರತಿಕ್ರಿಯೆ ನೀಡಿದ್ದಾರೆ.