ಉಪೇಂದ್ರ ರಾಜಕೀಯ ಪ್ರವೇಶವೇ ಓಳು ಬರೀ ಓಳು!
ಬೆಂಗಳೂರು, ಏಪ್ರಿಲ್ 20 : ರಿಯಲ್ ಸ್ಟಾರ್ ಆಗುವುದಕ್ಕಿಂತ ಮೊದಲು ಉಪೇಂದ್ರ ನಟಿಸಿ ನಿರ್ದೇಶಿಸಿದ್ದ 'ಎ' ಚಿತ್ರದ ಹಾಡು ನೆನಪಿದೆಯಾ? ಎಂಟಿವಿ ಸುಬ್ಬುಲಕ್ಷ್ಮಿಗೆ ಓಳು ಬರಿ ಓಳು, ಜೀಟಿವಿ ಮಾದೇಗೌಡ್ರಿಗೆ ಓಳು ಬರಿ ಓಳು!
ಈಗ ಅದೇ ಹಾಡನ್ನು ಅವರಿಗಾಗಿಯೇ ಹಾಡುವಂತಾಗಿದ್ದು ಮಾತ್ರ ವಿಪರ್ಯಾಸ. ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ಕೊನೆಗೆ, ವಿಧಾನಸಭಾ ಚುನಾವಣೆಯಿಂದಲೇ ಹಿಂದೆ ಸರಿಯುವ ಸಾಧ್ಯತೆಗಳು ಗೋಚರಿಸುತ್ತಿವೆ. ಅವರ ಆಶ್ವಾಸನೆಗಳು, ರಂಗುರಂಗಿನ ಮಾತುಗಳು ಓಳು ಬರಿ ಓಳು ಅಂತಾಗಿವೆ.
ಕೆಪಿಜೆಪಿ ಪಕ್ಷ ಸ್ಥಾಪಿಸಿ ರಾಜ್ಯದ ರಾಜಕಾರಣದಲ್ಲಿ ಹೊಸ ಅಲೆ ಸೃಷ್ಟಿಸುವುದಾಗಿ ಘೋಷಿಸಿದ್ದ ಉಪೇಂದ್ರ ಕೊನೆಗೆ ಅದೇ ಪಕ್ಷದಿಂದ ಹೊರಬಿದ್ದು ಇದೀಗ ಪ್ರಜಾಕೀಯ ಎಂಬ ಮತ್ತೊಂದು ರಾಜಕೀಯ ಪಕ್ಷ ಸಂಘಟಿಸಲು ಮುಂದಾಗಿದ್ದರು. ಆದರೆ ಆ ಪಕ್ಷ ಇನ್ನೂ ನೋಂದಣಿಯಾಗದ ಕಾರಣ ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದೇ ಅನುಮಾನ ಎನ್ನಲಾಗುತ್ತಿದೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಈ ಕುರಿತು ಶುಕ್ರವಾರ ಬೆಂಗಳೂರಿನಲ್ಲಿ ಹೇಳಿಕೆ ನೀಡಿರುವ ಅವರ ತಾಯಿ ಅನುಸೂಯ, ಈ ಬಾರಿ ಪಕ್ಷೇತರರಾಗಿ ರಿಯಲ್ ಸ್ಟಾರ್ ಉಪೇಂದ್ರ ಸ್ಪರ್ಧಿಸುವುದು ಅನುಮಾನ, ಮುಂದಿನ ಚುನವಣೆಯಲ್ಲಿ ಉಪೇಂದ್ರ ಸ್ಪರ್ಧಿಸಬಹುದು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.

ಜತೆಗೆ ಸದ್ಯ ಪ್ರಚಾರಕ್ಕೆಲ್ಲ ಸಮಯವಿಲ್ಲ, ಸದ್ಯ ಹೋಮ್ ಮಿನಿಸ್ಟರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಅನುಸೂಯ ಅವರು ತಿಳಿಸಿದ್ದಾರೆ. ಹಾಗಿದ್ರೆ, ಅವರನ್ನು ನಂಬಿ ಅವರಿಗೆ ಭಾರೀ ಬೆಂಬಲ ನೀಡಿದ್ದವರ, ಖಾಲಿ ದಿರಿಸು ತೊಟ್ಟ ಆಟೋ ಚಾಲಕರ ಆಕಾಂಕ್ಷೆಗಳಿಗೆ ಬೆಲೆಯೇ ಇಲ್ಲವೆ?
ರಾಜಕೀಯವನ್ನು ತಿರುಗಾ ಮುರುಗಾ ಮಾಡುತ್ತೇನೆ, ಪ್ರಜೆಗಳನ್ನು ನಾಯಕರನ್ನಾಗಿ, ನಾಯಕರನ್ನು ಸೇವಕರನ್ನಾಗಿಸಿ ಆಡಳಿತ ಮಾಡುತ್ತೇನೆ ಎಂದು ಅಬ್ಬರಿಸಿ ಬೊಬ್ಬಿರಿದಿದ್ದ ಉಪೇಂದ್ರ, ಚುನಾವಣೆ ಸಮಯ ಹತ್ತಿರ ಬಂದಾಗ ಸಡನ್ನಾಗಿ ಕಣ್ ತಪ್ಪಿಸಿಕೊಂಡಿದ್ದಾರೆ. ತಾವೇ ಮುಂದೆ ನಿಂತು ಕಟ್ಟಿದ್ದ ಕೆಪಿಜೆಪಿ ಪಕ್ಷದಿಂದ ಹೊರಬಂದಿದ್ದಾರೆ.
ಕಾರ್ಮಿಕರು, ರೈತರು, ಬಡವರು ಹಾಗೂ ಶೋಷಿತರ ಪರವಾಗಿ ಹೋರಾಡಲು ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದ ಉಪೇಂದ್ರ ಕೊನೆಗೆ ಆ ಪಕ್ಷದಿಂದ ತಾವೇ ಹೊರಬಂದು ಜನರಲ್ಲಿ ಮೂಡಿಸಿದ್ದ ನಂಬಿಕೆಯನ್ನು ಹುಸಿಗೊಳಿಸಿದ್ದಾರೆ.












Click it and Unblock the Notifications