ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಶಾಸಕ ರವಿ ಸುಬ್ರಹ್ಮಣ್ಯ ಸ್ಪರ್ಧೆ!?
ಬೆಂಗಳೂರು, ಮಾರ್ಚ್ 26: ಸೋಮವಾರ ಮಧ್ಯರಾತ್ರಿಯ ಸುದ್ದಿ ಪ್ರಕಾರ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹೆಸರೂ ಒಳಗೊಂಡಂತೆ ಹಲವಾರು ಹೆಸರು ಹರಿದಾಡುತ್ತಿರುವುದರಿಂದ ಮಂಗಳವಾರ ನಾಮಪತ್ರ ಸಲ್ಲಿಕೆಗೂ ಮುನ್ನ ಅಧಿಕೃತ ಘೋಷಣೆಯಿಂದಲೇ ಖಾತ್ರಿ ಆಗಬೇಕಿದೆ.
ತೇಜಸ್ವಿನಿ ಅನಂತಕುಮಾರ್, ಶಾಸಕ ಸುರೇಶ್ ಕುಮಾರ್, ಬಿ.ಎಲ್.ಸಂತೋಷ್, ತೇಜಸ್ವಿ ಸೂರ್ಯ, ನಿರ್ಮಲಾ ಸೀತಾರಾಮನ್ ಹೀಗೆ ಹಲವಾರು ಹೆಸರನ್ನು ಬಿಜೆಪಿ ಅಭ್ಯರ್ಥಿಯಾಗಬಹುದು ಎಂಬ ಸಾಲಿನಲ್ಲಿ ತೇಲಿ ಬಿಡಲಾಗಿತ್ತು. ಆದರೆ ಸೋಮವಾರ ರಾತ್ರಿಯ ಹೊತ್ತಿಗೆ ರವಿ ಸುಬ್ರಹ್ಮಣ್ಯ ಅವರ ಹೆಸರು ಸ್ವಲ್ಪ ಜೋರಾಗಿಯೇ ಕೇಳಿಬಂದಿದೆ.
ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಕಾಂಗ್ರೆಸ್ ಟಿಕೆಟ್ ನಿಂದ ಬಿ.ಕೆ.ಹರಿಪ್ರಸಾದ್ ಅಖಾಡದಲ್ಲಿ ಇದ್ದಾರೆ. ಹೀಗೆ ಕೊನೆ ಕ್ಷಣದವರೆಗೆ ಬಿಜೆಪಿಯಿಂದ ಅಭ್ಯರ್ಥಿಯ ಘೋಷಣೆ ಮಾಡದಿರುವುದಕ್ಕೆ ಪಕ್ಷದ ತಂತ್ರವೇ ಕಾರಣ ಎನ್ನಲಾಗುತ್ತಿದೆ. ಏಕೆಂದರೆ, ಕೇಂದ್ರದ ವರಿಷ್ಠರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ತೇಜಸ್ವಿನಿ ಅನಂತಕುಮಾರ್ ಒಬ್ಬರ ಹೆಸರನ್ನು ಮಾತ್ರ ಶಿಫಾರಸು ಮಾಡಲಾಗಿತ್ತು.

ಆದರೆ, ಈ ಆಯ್ಕೆಯ ಹೊರತಾಗಿ ಬೇರೆ ಸಾಧ್ಯತೆಗಳನ್ನು ಕೂಡ ಪಕ್ಷದ ವರಿಷ್ಠರು ಗಮನಿಸಿದ್ದಾರೆ ಎನ್ನುತ್ತವೆ ಮೂಲಗಳು. ಬೆಂಗಳೂರು ದಕ್ಷಿಣವು ಬಿಜೆಪಿ ಪಾಲಿಗೆ ಭದ್ರ ಕೋಟೆ. ಅಲ್ಲಿಂದ ಒಬ್ಬರು ಸಂಸದರನ್ನು ಮಾತ್ರ ಗೆಲ್ಲಿಸಿಕೊಳ್ಳುವುದು ಬಿಜೆಪಿ ಉದ್ದೇಶ ಆಗಬಾರದು. ಕರ್ನಾಟಕದಿಂದ ಒಬ್ಬ ಅದ್ಭುತ ಸಂಸದೀಯ ಪಟು ಸಂಸತ್ ಪ್ರವೇಶಿಸುವಂತಾಗಬೇಕು ಎಂಬುದು ಕೂಡ ಉದ್ದೇಶವಾಗಿದೆ ಎಂಬುದು ಸದ್ಯಕ್ಕೆ ದೊರೆತಿರುವ ಮಾಹಿತಿ.
ಹಾಗಿದ್ದರೆ ಪಕ್ಷದಲ್ಲಿ ಇಷ್ಟೆಲ್ಲ ಗೊಂದಲ ಏಕೆ ಎಂದು ಪ್ರಶ್ನಿಸಿದರೆ, ಗೊಂದಲ ಪಕ್ಷದ ವರಿಷ್ಠರಲ್ಲಿ ಇಲ್ಲ. ಯಾರಿಗೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ಸ್ಪಷ್ಟತೆ ಇದೆ. ಆದರೆ ಜನರು ಹಾಗೂ ಮಾಧ್ಯಮಗಳಲ್ಲಿ ಆ ರೀತಿ ಗೊಂದಲ ಅಷ್ಟೇ ಎಂದು ಬಿಜೆಪಿಯ ಹಿರಿಯ ಕಾರ್ಯಕರ್ತರೊಬ್ಬರು ಉತ್ತರಿಸುತ್ತಾರೆ.












Click it and Unblock the Notifications