ಅಂಬರೀಷ್, ಎಸ್ಸೆಂ ಕೃಷ್ಣ ವಿರುದ್ಧ ದೂರಿಲ್ಲ: ರಮ್ಯಾ
ಬೆಂಗಳೂರು, ಮೇ.25: 'ಮಂಡ್ಯದಲ್ಲಿ ನನ್ನ ಸೋಲಿಗೆ ಬೇರೊಬ್ಬರನ್ನು ಹೊಣೆ ಮಾಡಿಲ್ಲ. ಅಂಬರೀಷ್ ಹಾಗೂ ಎಸ್.ಎಂ ಕೃಷ್ಣ ವಿರುದ್ಧ ರಾಹುಲ್ ಗಾಂಧಿಗೆ ದೂರು ನೀಡಿದ್ದೇನೆ ಎಂಬ ವರದಿ ಸುಳ್ಳು ಎಂದು ಮಂಡ್ಯದ ಮಾಜಿ ಸಂಸದೆ ರಮ್ಯಾ ಸ್ಪಷ್ಟಪಡಿಸಿದ್ದಾರೆ.
ಮೇ.19ರಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದು ನಿಜ. ಪಕ್ಷದ ಸೋಲಿನ ಬಗ್ಗೆ ಚರ್ಚೆ ನಡೆದಿದ್ದು ನಿಜ, ಆದರೆ, ನಾನು ಯಾವುದೇ ದೂರು ನೀಡಿಲ್ಲ, ಎಸ್.ಎಂ.ಕೃಷ್ಣ, ಅಂಬರೀಷ್ ವಿರುದ್ಧ ದೂರು ನೀಡಿಲ್ಲ, ರಮ್ಯಾ ಹಾಗೂ ಅಂಬರೀಷ್ ನಡುವಿನ ಭಿನ್ನಾಭಿಪ್ರಾಯ, ಎಸ್.ಎಂ.ಕೃಷ್ಣ ಅವರ ವೈಯಕ್ತಿಕ ಪ್ರತಿಷ್ಠೆಯಿಂದ ಸೋಲುಂಟಾಗಿದೆ ಎಂಬುದು ಮಾಧ್ಯಮ ಸೃಷ್ಟಿ, ಈ ಬಗ್ಗೆ ನಾನು ಯಾರಲ್ಲಿ ದೂರಿಲ್ಲ. ರಾಹುಲ್ ಗಾಂಧಿ ಅವರನ್ನು ಮತ್ತೆ ಭೇಟಿಯಾಗಿಲ್ಲ ಎಂದು ರಮ್ಯಾ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸೋಲು ಕಂಡ ನಟಿ ರಮ್ಯಾ, ವಸತಿ ಸಚಿವ ಅಂಬರೀಶ್ ಸೇರಿದಂತೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡರ ವಿರುದ್ಧ ಪಕ್ಷದ ಹೈಕಮಾಂಡ್ಗೆ ದೂರು ನೀಡಿದ್ದಾರೆ ಎಂಬ ಸುದ್ದಿ ಪ್ರಮುಖ ದಿನಪತ್ರಿಕೆ, ಖಾಸಗಿ ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ಬಗ್ಗೆ ರಮ್ಯಾ ಸ್ಪಷ್ಟನೆ ನೀಡಿದ್ದಾರೆ.

ಅಂಬರೀಷ್, ಅಮರಾವತಿ ಚಂದ್ರ ಶೇಖರ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಲಿಂಗರಾಜು, ಸಿದ್ದರಾಜು, ಎಂ.ಡಿ.ರಮೇಶ್ ರಾಜು, ಬಿ ವಿವೇಕಾನಂದ, ಮಧು ಮಾದೇಗೌಡ, ಎಲ್ ಆರ್ ಶಿವರಾಮೇಗೌಡ ಸೇರಿ ಹಲವು ಮುಖಂಡರ ಹೆಸರುಗಳನ್ನು ರಮ್ಯಾ ದೂರಿನಲ್ಲಿ ನೀಡಿದ್ದಾರೆ.
ಮಂಡ್ಯ ಕ್ಷೇತ್ರದಲ್ಲಿ ತನ್ನ ಸೋಲಿನ ಬಗ್ಗೆ ಕೂಲಂಕಷ ಪರಾಮರ್ಶೆ ನಡೆಸಬೇಕು ಹಾಗೂ ತಮ್ಮ ಸೋಲಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಯವರನ್ನು ಇತ್ತೀಚೆಗೆ ಖುದ್ದು ಭೇಟಿ ಮಾಡಿರುವ ರಮ್ಯಾ ಮನವಿ ಮಾಡಿದ್ದಾರೆ ಎನ್ನಲಾಗಿತ್ತು.
ಲೋಕಸಭೆ ಚುನಾವಣೆ 2014ರಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ರಮ್ಯಾ(5,18,852 ಮತಗಳು) ಅವರನ್ನು ಜೆಡಿಎಸ್ ಅಭ್ಯರ್ಥಿ ಸಿ.ಎಸ್ ಪುಟ್ಟರಾಜು(5.24.370) ಅವರು ಸೋಲಿಸಿದ್ದರು. ನಂತರ ಮಂಡ್ಯ ಕಾಂಗ್ರೆಸ್ ನಲ್ಲಿ ಮತ್ತೊಮ್ಮೆ ಭಿನ್ನಮತ ಸ್ಫೋಟಗೊಂಡಿತ್ತು.












Click it and Unblock the Notifications