ರಾಮರಾಜ್ಯ ನಿರ್ಮಿಸುತ್ತೇವೆ ಎಂದು ಹೊರಟವರ ಸರ್ಕಾರ ಇದೇನಾ?: ಎಚ್ಡಿಕೆ
ಬೆಂಗಳೂರು, ಮಾರ್ಚ್ 03: ರಾಜ್ಯದಲ್ಲಿ ಇಷ್ಟು ದಿನ ರಾಕ್ಷಸ ಸರ್ಕಾರವಿತ್ತು, ರಾಮ ರಾಜ್ಯ ನಿರ್ಮಾಣ ಮಾಡುತ್ತೇವೆ ಎಂದು ಹೊರಟ ಸರ್ಕಾರ ಇದೇನಾ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರಮೇಶ್ ಜಾರಕಿಹೊಳಿ 'ಸಿಡಿ' ಪ್ರಕರಣದ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ರಾಕ್ಷಸಿ ಸರ್ಕಾರವಿದೆ ಎಂದು ಹೇಳಿ ನಮ್ಮ ಸರ್ಕಾರವನ್ನು ಕೆಳಗಿಳಿಸಿ ಬಾಂಬೆಗೆ ಹೋಗಿ ರಾಮ ರಾಜ್ಯ ತಂದಿದ್ದೇವೆ ಎಂದು ಹೇಳಿದ್ದಾರಲ್ಲಾ, ಎಂಥಾ ರಾಮ ರಾಜ್ಯ ತಂದಿದ್ದಾರೆ ಎಂದು ಎಲ್ಲರೂ ಕುಳಿತು ಅವಲೋಕನ ಮಾಡಿಕೊಳ್ಳಲಿ ಎಂದರು.
ಇಂತಹ ವಿಚಾರಗಳ ಬಗ್ಗೆ ಮಾತನಾಡುವುದು ಶೋಭೆ ತರುವುದಲ್ಲ, ಈ ವಿಷಗಳಲ್ಲಿ ರಾಜಕೀಯ ಮಾಡಲು ನನಗೆ ಇಷ್ಟವಿಲ್ಲ, ರಾಜಕೀಯ ಮಾಡಲು ಬೇರೆ ಮಾರ್ಗಗಳಿವೆ ಎಂದು ಹೇಳಿದರು.

ಆದರೆ, ಒಂದು ರಾಜಕೀಯ ವ್ಯಕ್ತಿಗಳ ಈ ರೀತಿಯ ನಡವಳಿಕೆಗಳಿಂದ, ಸಮಾಜದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮೇಲೆ ಪರಿಣಾಮ ಬೀರಲಿದೆ. ಎಲ್ಲಾ ಪ್ರಕರಣ ಹಾಗೂ ಎಲ್ಲಾ ಬೆಳವಣಿಗೆಗಳ ಬಗ್ಗೆ ಉತ್ತರ ವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಪಡೆಯುವುದು ಸೂಕ್ತ, ಬಿಜೆಪಿ ನಾಯಕರಿಂದ ಪಡೆಯುವುದು ಸೂಕ್ತ, ವಿಶ್ವನಾಥ್ ಅವರಿಂದ ಪಡೆಯಿರಿ ನಾನು ಏನೂ ಹೇಳಿಕೆ ನೀಡುವುದಿಲ್ಲ ಎಂದು ಹೇಳಿದರು.
ಇನ್ನೊಂದೆಡೆ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾದ ಸಿಡಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಕಾರಣ, ನೈತಿಕ ಹೊಣೆ ಹೊತ್ತು ರಮೇಶ್ ಜಾರಕಿಹೊಳಿ ಇಂದು ರಾಜೀನಾಮೆ ನೀಡಿದ್ದಾರೆ.












Click it and Unblock the Notifications