ಸಿಡಿ ಪ್ರಕರಣದಲ್ಲಿ ಎಸ್ಐಟಿ ತನಿಖೆ ಬೇಗ ಮುಗಿಯಲಿ: ಬಾಲಚಂದ್ರ ಜಾರಕಿ ಹೋಳಿ
ಬೆಂಗಳೂರು, ಮಾರ್ಚ್ 23 : ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಪ್ರಕರಣ ಕುರಿತು ಕಲಾಪದಲ್ಲಿ ಎರಡು ದಿನ ಚರ್ಚೆ ನಡೆದ ಬೆನ್ನಲ್ಲೇ ಬಾಲಚಂದ್ರ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಸಿಡಿ ಗರ್ಲ್ ವಿಡಿಯೋ ಹೇಳಿಕೆ ಆಧರಿಸಿ ತನಿಖೆ ನಡೆಸಬೇಕೆಂಬ ಸಿದ್ಧರಾಮಯ್ಯ ಅವರ ಮಾತು ಶೋಭೆ ತರುವಂತದ್ದಲ್ಲ. ರಮೇಶ್ ಜಾರಕಿಹೊಳಿ ಮತ್ತು ಪಕ್ಷಕ್ಕೆ ಮುಜುಗರ ತರುವ ವಿಚಾರವಾಗಿ ಅವರು ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಎಸ್ಐಟಿ ಅಧಿಕಾರಿಗಳು ಉತ್ತಮ ತನಿಖೆ ನಡೆಸುತ್ತಿದ್ದಾರೆ. ಆದಷ್ಟು ತ್ವರಿತವಾಗಿ ತನಿಖೆ ಮುಗಿದು ಸತ್ಯ ಹೊರಬರಲಿ ಎಂದು ಬಾಲಚಂಧ್ರ ಜಾರಕಿಹೊಳಿ ಅಭಿಪ್ರಾಯ ಪಟ್ಟಿದ್ದಾರೆ.
ಸಿಡಿ ವಿಚಾರವಾಗಿ ಕಲಾಪದಲ್ಲಿ ಕಾಂಗ್ರೆಸ್ ದೊಡ್ಡ ಗದ್ದಲ ಎಬ್ಬಿಸಿದ ಹಿನ್ನೆಲೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ, ಎಸ್ಐಟಿ ಮಹತ್ವದ ತನಿಖೆ ನಡೆಸುತ್ತಿದೆ. ಹಿರಿಯ ವಕೀಲರು ಮತ್ತು ಸಚಿವರ ಸಲಹೆ ಮೇರೆಗೆ ಈ ಪ್ರಕರಣದ ಬಗ್ಗೆ ಹೆಚ್ಚು ಮಾತನಾಡುವುದು ಸೂಕ್ತವಲ್ಲ. ಪ್ರಕರಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು ಬೇಡ ಎಂದು ಸುಮ್ಮನಿದ್ದೇವೆ. ಯುವತಿ ವಿಡಿಯೋ ಹೇಳಿಕೆ ಬಿಟ್ಟ ನಂತರ ಆಕೆ ಬಂದಿಲ್ಲ. ಆ ನಂತರದ ಬೆಳವಣಿಗೆಗಳು ಎಲ್ಲರಿಗೂ ಗೊತ್ತಿದೆ. ರಕ್ಷಣೆ ಕೊಡ್ತೀವಿ ಎಂದು ಗೃಹ ಸಚಿವರೇ ಹೇಳಿದರೂ ಬಂದಿಲ್ಲ. ಈಗಲೂ ಬರಲಿ. ಏನಿದೆಯೋ ದೂರು ಕೊಡಲಿ. ಎಸ್ಐಟಿ ಎಲ್ಲವನ್ನು ತನಿಖೆ ನಡೆಸುತ್ತದೆ. ಮುಂದಿನ ಚುನಾವಣೆ ಗುರಿಯಲ್ಲಿಟ್ಟುಕೊಂಡು ಪ್ರಕರಣವನ್ನು ವರ್ಷಗಳ ಕಾಲ ಎಳೆಯಲು ನ್ಯಾಯಾಂಗ ತನಿಖೆ ವಹಿಸುವುದು ಸೂಕ್ತವಲ್ಲ. ಎಲ್ಲಾ ಆಯಾಮದಲ್ಲೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದರು.
Recommended Video
ಸಂತ್ರಸ್ತೆ ಎನ್ನಲಾದ ಯುವತಿ ಪೋಷಕರು ನಾಲ್ಕು ವರ್ಷದಿಂದ ಬಾಡಿಗೆ ಮನೆಯಲ್ಲಿದ್ದರು. ಹೀಗಾಗಿ ಅಪಹರಣ ಕುರಿತು ಅವರು ಅಲ್ಲೇ ದೂರು ನೀಡಿದ್ದರು. ಆಕೆಯನ್ನು ಅಪಹರಿಸಿದ್ದಾರೋ, ಒತ್ತೆಯಾಳನ್ನಾಗಿ ಇಟ್ಟುಕೊಂಡಿದ್ದಾರೋ ಆಕೆ ಸಿಕ್ಕ ಮೇಲೆ ಗೊತ್ತಾಗಲಿದೆ. ಅತಿ ಬೇಗ ತನಿಖೆ ಮುಗಿದು ವರದಿಯನ್ನು ಸರ್ಕಾರಕ್ಕೆ ನೀಡಲಿ ಎಂಬುದು ನಮ್ಮ ಮನವಿ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.