ಸಿಡಿ ಸ್ಫೋಟ ಪ್ರಕರಣ: ಮೇ. 31 ಕ್ಕೆ ಎಸ್ಐಟಿಯಿಂದ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಕೆ!
ಬೆಂಗಳೂರು, ಮೇ. 27: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದ ತನಿಖೆ ತಾರ್ಕಿಕ ಅಂತ್ಯಕ್ಕೆ ಬಂದು ತಲುಪಿದೆ. ರಮೇಶ್ ಜಾರಕಿಹೊಳಿ ಹೇಳಿಕೆಯಿಂದ ಸಂತ್ರಸ್ತ ಯುವತಿ ದಾಖಲಿಸಿದ್ದ ಅತ್ಯಾಚಾರ ಪ್ರಕರಣ "ಹನಿಟ್ರ್ಯಾಪ್- ಬ್ಲಾಕ್ ಮೇಲ್ " ಸ್ವರೂಪಕ್ಕೆ ತಿರುಗಿಕೊಂಡಿದೆ. ಇನ್ನೊಂದಡೆ ಸಂತ್ರಸ್ತ ಯುವತಿ ದಾಖಲಿಸಿದ್ದ ಪ್ರಕರಣದ ಅಂತಿಮ ವರದಿಯನ್ನು ಮೇ. 31 ರೊಳಗೆ ಸಲ್ಲಿಸಬೇಕಿದೆ.
ಅಶ್ಲೀಲ ಸಿಡಿ ತನಿಖಾ ತಂಡದ ಮುಖಸ್ಯರಾದ ಸೌಮೇಂದು ಮುಖರ್ಜಿ ಅವರು ಕಳೆದ 20 ದಿನಗಳಿಂದ ರಜೆ ಮೇಲೆ ತೆರಳಿದ್ದಾರೆ. ಕಾನೂನು ಪರಿಪಾಲನೆಗೆ ಹೆಸರುವಾಸಿಯಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಸೌಮೇಂದು ಮುಖರ್ಜಿ ಅವರೇ ಅನಿವಾರ್ಯ ಕಾರಣದಿಂದ ರಜೆ ಮೇಲೆ ತೆರಳಿದರಾ? ಇಲ್ಲವೇ ಸರ್ಕಾರವೇ ಅವರನ್ನು ಬಲವಂತದಿಂದ ರಜೆ ಮೇಲೆ ತೆರಳಲು ಸೂಚಿಸಿತಾ? ಮನೆಯಲ್ಲಿರಲು ಒಂದು ದಿನವೂ ಇಷ್ಟ ಪಡದ ಸೌಮೇಂದು ಮುಖರ್ಜಿ ಕಳೆದ 20 ದಿನಗಳಿಂದ ರಜೆ ಮೇಲೆ ಮನೆಯಲ್ಲಿರುವುದು ಭಾರೀ ಚರ್ಚೆಗೆ ನಾಂದಿ ಹಾಡಿದೆ.
ರಮೇಶ್ ಜಾರಕಿಹೊಳಿ ಕುರಿತು ಸಿಡಿ ಸ್ಫೋಟ ಪ್ರಕರಣ ಬಳಿಕ ನಾನಾ ಆಯಾಮ ಪಡೆದುಕೊಂಡಿತು. ಜಲ ಸಂಪನ್ಮೂಲ ಸಚಿವ ಸಂತ್ರಸ್ತ ಯುವತಿಗೆ ಕೆಲಸದ ಅಮಿಷೆ ತೋರಿಸಿ ಮೋಸ ಮಾಡಿದ್ದಾರೆ ಎನ್ನುವ ವಾದ. ಮತ್ತೊಂದಡೆ ಇದು ಪಕ್ಕಾ ಹನಿಟ್ರ್ಯಾಪ್ ಹಾಗೂ ಬ್ಲಾಕ್ ಮೇಲ್ ಎಂಬ ಗುಮಾನಿಗೆ ಕಾರಣವಾಯಿತು. ದಿನಕ್ಕೊಂದು ತಿರುವು ಪಡೆದ ಪ್ರಕರಣದ ತನಿಖೆಗೆ ಸರ್ಕಾರ ವಿಶೇಷ ತನಿಖಾ ತಂಡ ರಚನೆ ಮಾಡಿತು, ಮುಂದೆ ಓದಿ...

20 ದಿನದಿಂದ ರಜೆ ಮೇಲೆ ಇರುವ ಎಸ್ಐಟಿ ಚೀಫ್
ದೇಶದಲ್ಲಿ ಸಂಚಲನ ಮೂಡಿಸಿದ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸರ್ಕಾರ ಮೊದಲು ಆಯ್ಕೆ ಮಾಡಿದ್ದು ಸೌಮೇಂದು ಮುಖರ್ಜಿ ಅವರನ್ನು. ಬ್ಲಾಕ್ ಮೇಲ್ ಹಾಗೂ ಸಂತ್ರಸ್ತ ಯುವತಿ ನೀಡಿದ್ದ ದೂರಿನ ಎರಡು ಆಯಾಮದಲ್ಲಿ ತನಿಖೆಗೆ ಮಾರ್ಗದರ್ಶನ ನೀಡುತ್ತಿದ್ದರು. ಇತ್ತೀಚೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರು. ಆ ಸಿಡಿಯಲ್ಲಿರುವ ವ್ಯಕ್ತಿ ನಾನೇ. ನಾನು ಸಹಮತ ಲೈಂಗಿಕ ಕ್ರಿಯೆ ನಡೆಸಿದ್ದು ನಿಜ. ನನಗೆ ವಿಡಿಯೋ ತೊರಿಸಿ ಬ್ಲಾಕ್ ಮೇಲ್ ಮಾಡಿದ್ದಾರೆ. ಅವರಿಗೆ ದುಡ್ಡು ಕೊಟ್ಟಿದ್ದೇನೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಬೆಳವಣಿಗೆ ನಡುವೆ ಎಸ್ಐಟಿ ಮುಖಸ್ಯರಾದ ಸೌಮೇಂದು ಮುಖರ್ಜಿ ರಜೆ ಮೇಲೆ ತೆರಳಿದ್ದಾರೆ.

ಸೌಮೇಂದು ನಿಷ್ಠ ಹೆಜ್ಜೆ?
ಸೌಮೇಂದು ಮುಖರ್ಜಿ ಅವರ ಪತ್ನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತು. ಹೀಗಾಗಿ ಅವರು ರಜೆ ಮೇಲೆ ಹೋಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಒಂದು ದಿನ ಕೆಲಸಕ್ಕೆ ಗೈರು ಹಾಜರಾಗದ ಮನಸ್ಥಿತಿಯುಳ್ಳ ಅಧಿಕಾರಿ ಸೌಮೇಂದು ಮುಖರ್ಜಿ. ತನಿಖೆ ವಿಚಾರ ಬಂದರೆ, ಕಾನೂನು ಪರಿಪಾಲನೆ, ನೇರಾ ನೇರ ಎಂಬಂಥ ವ್ಯಕ್ತಿತ್ವ. ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿ. ರಾಜಕೀಯ ಪ್ರಭಾವದ ವಿಚಾರದ ಬಗ್ಗೆ ಹೇಳುವುದಾದರೆ, ಯಾರ ಪ್ರಭಾವಕ್ಕೂ ಸೊಪ್ಪು ಹಾಕುವುದಿಲ್ಲ. ಒಂದು ಪ್ರಕರಣದ ತನಿಖೆಗೆ ವಹಿಸಿದರೆ, ತನಿಖೆಯ ಸತ್ಯಾಂಶಗಳನ್ನು ನೇರವಾಗಿ ನ್ಯಾಯಾಲಯಕ್ಕೆ ಸಲ್ಲಿಸುವಂತಹ ಕ್ಷಾಣಾಕ್ಷತೆ. ಇಂತಹ ಅಧಿಕಾರಿ ಪತ್ನಿಗೆ ಕೊರೊನಾ ಸೋಂಕು ಬಂದರೂ ಹದಿನಾಲ್ಕು ದಿನ ರಜೆ ಮುಗಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ, ರಜೆ ಮೇಲೆ ಹೋಗಿ 20 ದಿನ ಆಗಿದೆ ಎನ್ನಲಾಗಿದ್ದು, ಇಷ್ಟು ದಿನ ರಜೆ ಮೇಲೆ ಯಾಕೆ ಹೋಗಿದ್ದಾರೆ ಎಂಬ ವಿಷಯ ಇಲಾಖೆಯಲ್ಲಿ ದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ಸರ್ಕಾರವೇ ಬಲವಂತವಾಗಿ ಮುಖರ್ಜಿ ಅವರನ್ನು ರಜೆ ಮೇಲೆ ಕಳಿಸಿತಾ? ಕಳಸಿದ್ದೇ ಆದಲ್ಲಿ ಯಾಕೆ ಎಂಬ ಪ್ರಶ್ನೆ ಇದೀಗ ಉದ್ಭವಿಸಿವೆ.

ಮೇ. 31 ಕ್ಕೆ ಅಂತಿಮ ವರದಿ
ಇನ್ನು ರಮೇಶ್ ಜಾರಕಿಹೊಳಿ ಪ್ರಕರಣ ಎರಡು ರಾಷ್ಟ್ರೀಯ ಪಕ್ಷಗಳ ಪ್ರತಿಷ್ಠೆ ವಿಷಯವಾಗಿ ರೂಪಾಂತರಗೊಂಡಿದೆ. ಇಂತಹ ಸೂಕ್ಷ್ಮ ಪ್ರಕರಣದ ತನಿಖೆ ಮುಗಿಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲು ಮೇ. 31 ಕ್ಕೆ ಗಡುವು ನೀಡಲಾಗಿದೆ. ಸಂತ್ರಸ್ತ ಯುವತಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣ ಸಂಬಂಧ ಎಸ್ಐಟಿ ಪೊಲೀಸರು ಅಂತಿಮ ವರದಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅನುಪಸ್ಥಿತಿಯಲ್ಲಿಯೇ ಅಂತಿಮ ವರದಿ ಸಲ್ಲಿಸಲಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದೆ. ಎಸ್ಐಟಿ ಮುಖ್ಯಸ್ಥರನ್ನು ನೇಮಿಸಿರುವ ಕಾರಣ ತನಿಖಾಧಿಕಾರಿಯ ಕವಿತಾ ಅವರ ವರದಿಯನ್ನು ಪೂರ್ವ ಪರ ಪರಿಶೀಲಿಸಿ, ಕಾನೂನಿನ ಆಯಾಮದ ಬಗ್ಗೆ ಚರ್ಚಿಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ಯಾವ ರೀತಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುತ್ತಾರೆ. ಸೌಮೇಂದು ಅವರ ಅನುಪಸ್ಥಿತಿಯಲ್ಲಿ ಬೇರೆ ಹಿರಿಯ ಪೊಲೀಸ್ ಅಧಿಕಾರಿಯೇ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
Recommended Video

ಮೇ. 29 ನಿರೀಕ್ಷಣಾ ಜಾಮೀನು
ಸಿಡಿ ಪ್ರಕರಣಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಫೋಟಕ ತಿರುವು ನೀಡಿದ್ದಾರೆ. ಈ ಪ್ರಕರಣ ಬ್ಲಾಕ್ ಮೇಲ್ ಸ್ವರೂಪ ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಬ್ಲಾಕ್ ಮೇಲ್ ಮಾಡಿದ್ದಾರೆ ಎನ್ನಲಾದ ಶಂಕಿತ ಆರೋಪಿಗಳಾದ ನರೇಶ್ ಮತ್ತು ಶ್ರವಣ್ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ರಮೇಶ್ ಜಾರಕಿಹೊಳಿ ದಾಖಲಿಸಿರುವ ಬ್ಲಾಕ್ ಮೇಲ್ ಪ್ರಕರಣ ಸಂಬಂಧ ಜಾಮೀನು ಕೋರಿದ್ದಾರೆ. ಕಳೆದ ಎರಡೂವರೆ ತಿಂಗಳಿನಿಂದ ನಾಪತ್ತೆಯಾಗಿರುವ ಶಂಕಿತರ ಜಾಮೀನು ಅರ್ಜಿ ಕೂಡ ಭಾರೀ ಕುತೂಹಲ ಕೆರಳಿಸಿದೆ. ಜಾಮೀನು ಅರ್ಜಿ ವಿಚಾರಣೆ ಮುಗಿದ ಎರಡನೇ ದಿನಕ್ಕೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಸಂತ್ರಸ್ತ ಯುವತಿ ದಾಖಲಿಸಿರುವ ಪ್ರಕರಣದಲ್ಲಿ ಅಂತಿಮ ವರದಿಯೂ ಸಲ್ಲಿಕೆಯಾಗಲಿದ್ದು, ಕ್ಲೈಮ್ಯಾಕ್ಸ್ ರೋಚಕ ಹಂತಕ್ಕೆ ತಲುಪಿದೆ.












Click it and Unblock the Notifications