ಸಿಸಿಬಿ ಧನಾಗಮನಕ್ಕೆ ಬ್ರೇಕ್ ಹಾಕಿದ ಸಿಸಿಬಿ ರಮಣಗುಪ್ತಾ!
ಬೆಂಗಳೂರು, ಫೆ. 23: ಸೆಂಟ್ರಲ್ ಕ್ರೈಂ ಬ್ರಾಂಚ್ ( ಸಿಸಿಬಿ) ನಲ್ಲಿ ವರ್ಷಗಳಿಂದ ಬೇರೂರಿದ್ದ ಪೊಲೀಸ್ ಸಿಬ್ಬಂದಿಯನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡುವ ಮೂಲಕ ನೂತನ ಜಂಟಿ ಪೊಲೀಸ್ ಆಯುಕ್ತ ರಮಣ ಗುಪ್ತಾ ಸಿಸಿಬಿ ಶುದ್ಧೀಕರಣಕ್ಕೆ ನಾಂದಿ ಹಾಡಿದ್ದಾರೆ.
ಸಿಸಿಬಿ ಪೊಲೀಸ್ ಸಿಬ್ಬಂದಿಯ ಸಮೂಹಿಕ ವರ್ಗಾವಣೆ ಆದೇಶ ಹೊರ ಬೀಳುತ್ತಿದ್ದಂತೆ ಪೊಲೀಸ್ ವಲಯದಲ್ಲಿ ಹೊಸ ಮಾತು ಚಾಲ್ತಿಗೆ ಬಂದಿದೆ. " ಸಿಸಿಬಿಯ ಧನಾಗಮನ ಮೂಲಗಳು ಬಂದ್" ಎಂಬ ಮಾತು ಕೇಳಿ ಬರುತ್ತಿವೆ. ಅನೇಕ ವರ್ಷಗಳಿಂದ ಸಿಸಿಬಿಯಲ್ಲಿ ನೆಲೆಯೂರಿದ್ದ ಪೊಲೀಸ್ ಸಿಬ್ಬಂದಿಯನ್ನು ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ. ಮಾತ್ರವಲ್ಲ, ನಿಯೋಜನೆ ಮೇರೆಗೆ ಹೋಗಿದ್ದ ಸಿಬ್ಬಂದಿಯ ಸೇವೆಯನ್ನು ಹಿಂಪಡೆದು ಹೊಸದಾಗಿ ಪೊಲೀಸ್ ಸಿಬ್ಬಂದಿಯ ನೇಮಕ ಮಾಡಿಕೊಳ್ಳಲಾಗುತ್ತದೆ.
ಪ್ರಮುಖ ಪ್ರಕರಣಗಳನ್ನು ಸಿಸಿಬಿ ಪತ್ತೆ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅಲ್ಲಿಗೆ ಹೋಗುವ ಇನ್ಸ್ಪೆಕ್ಟರ್ , ಎಸಿಪಿಗಳು ಒಂದೆರಡು ವರ್ಷಕ್ಕೆ ವರ್ಗಾವಣೆಯಾಗುತ್ತಾರೆ. ಆದರೆ ಸಿಬ್ಬಂದಿ ಮಾತ್ರ ಬದಲಾಗಿರಲಿಲ್ಲ. ಹೀಗಾಗಿ ಸಿಸಿಬಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಕೂಡ ಸಿಸಿಬಿ ಪೊಲೀಸ್ ಸಿಬ್ಬಂದಿ ಅಣತಿ ಮೇರೆಗೆ ನಡೆದುಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿತ್ತು. ಮಾತ್ರವಲ್ಲ, ಹಲವು ವರ್ಷಗಳಿಂದ ತಳವೂರಿದ್ದರಿಂದ ಸಿಸಿಬಿ ಸಿಬ್ಬಂದಿ ಧನಾಗಮನ ಮೂಲಗಳನ್ನು ಹುಡುಕಿಕೊಂಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಸಿಸಿಬಿಗೆ ಹೊಸ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಸಿಬ್ಬಂದಿಯ ವರ್ಗಾವಣೆ ಮೊದಲ ಪ್ರಯತ್ನ ನಡೆದಿದೆ. ಸಿಸಿಬಿ ಕಚೇರಿ, ಮೂಲ ಸೌಕರ್ಯ, ತನಿಖಾ ಪದ್ಧತಿ, ಸಿಸಿಬಿ ಅಧಿಕಾರ ವ್ಯಾಪ್ತಿಯ ಸಿಸಿಬಿ ಪೊಲೀಸ್ ಘಟಕಗಳನ್ನು ಬದಲಾವಣೆ ಮಾಡುತ್ತಾರಾ ಕಾದು ನೋಡಬೇಕಿದೆ.

ನೂತನವಾಗಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಐಪಿಎಸ್ ಅಧಿಕಾರಿ ರಮಣಗುಪ್ತಾ, ಇದೀಗ ಸಿಸಿಬಿಯಲ್ಲಿ ವರ್ಷಗಳಿಂದ ತಳವೂರಿದ್ದವರಿಗೆ ಒಂದೇ ಸಲ ಗೇಟ್ ಪಾಸ್ ನೀಡಿದ್ದಾರೆ. ಹೊಸದಾಗಿ ಪೊಲೀಸ್ ಇಲಾಖೆಗೆ ಸೇರಿರುವ ಪ್ರತಿಭಾವಂತ ಪೊಲೀಸ್ ಸಿಬ್ಬಂದಿಯನ್ನು ಸಿಸಿಬಿಗೆ ನಿಯೋಜಿಸಲು ಹುಡುಕಾಟ ನಡೆಸುತ್ತಿದ್ದಾರೆ. ಸಿಸಿಬಿಗೆ ತನಿಖೆಗೆ ಹೊಸ ರೂಪ ನೀಡಲು ರಮಣ ಗುಪ್ತ ಮಹತ್ವದ ಹೆಜ್ಜೆ ಇಟ್ಟಿದ್ದಾರೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ವರ್ಗಾವಣೆ ಪಟ್ಟಿ ಬಿಡುಗಡೆ: ಸಿಸಿಬಿಯಲ್ಲಿ ವರ್ಷಗಳಿಂದ ತಳವೂರಿದ್ದ ಸಿಸಿಬಿ ಪೊಲೀಸರನ್ನು ವರ್ಗಾವಣೆ ಮಾಡಿದ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಲಾಗಿದೆ. ಸಿಸಿಬಿಯ ಪೊಲೀಸ್ ಸಿಬ್ಬಂದಿಯನ್ನು ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆ ಮಾಡಿ ಆಡಳಿತ ವಿಭಾಗದ ಎಸ್ಪಿ ನಿಶಾ ಜೇಮ್ಸ್ ಆದೇಶ ಹೊರಡಸಿದ್ದು , ಸಿಸಿಬಿ ಪೊಲಿಸ್ ಸಿಬ್ಬಂದಿಯ ಸಾಮೂಹಿಕ ವರ್ಗಾವಣೆ ಪೊಲೀಸ್ ಇಲಾಖೆಯಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.

ವರ್ಗಾವಣೆ ಆದವರ ವಿವರ: ಓಓಡಿ ಆಧಾರದ ಮೇಲೆ ಸಿಸಿಬಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹನ್ನೊಂದು ಹೆಡ್ ಕಾನ್ ಸ್ಟೇಬಲ್ ಗಳನ್ನು ಮಾತೃ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ. ಆರ್. ರೇಣುಕಯ್ಯ, ಹನುಮಂತಪ್ಪ , ಸೋಮಶೇಖರ್ ಬಿ.ಎಚ್. ಅರುಣ್ ಕುಮರ್, ಎಸ್. ರಾಘವೇಂದ್ರ ಎಂ.ಟಿ. ಯೋಗಾನಂದ ಕುಮಾರ್, ಗಜೇಂದ್ರ, ಕೆ. ಅನೀಲ್ ಕುಮಾರ್, ಚಂದ್ರಶೇಖರ್ ಎಂ. ಸುನೀಲ್ ಕುಮಾರ್ ಮಾತೃ ಪೊಲೀಸ್ ಠಾಣೆಗಳಗೆ ವರ್ಗಾವಣೆಯಾದವರು.
ಇನ್ನು ಆಡಳಿತಾತ್ಮಕ ಕಾರಣ ನೀಡಿ ನಾಲ್ಕು ಎಎಸ್ಐ ಸೇರಿದಂತೆ ಹದಿನೈದು ಸಿಬ್ಬಂದಿಗೆ ಸಿಸಿಬಿಯಿಂದ ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ. ಎಂ. ಮಹಾದೇವ್, ಟಿ. ಬಾಲಕೃಷ್ಣ, ಮಹದೇವ ಎಚ್.ಕೆ. ವಿಜಯ ಕುಮಾರ್, ಆರ್. ರವಿ ಕುಮಾರ್, ಶ್ರೀನಿವಾಸ್ ರಾವ್, ಭೈರೇಶ್, ವಿ. ಶ್ರೀನಿವಾಸ್, ಶ್ರೀನಿವಾಸ್ ಎಂ.ವಿ. , ನರಸಿಂಹಮೂರ್ತಿ, ವಿನಯ್, ಗಿರೀ್ ಬಾಬುಗೌಡ ಪಾಟೀಲ್, ಹನುಮೇಶ್ , ಶಶಿಧರ್ ವರ್ಗವಣೆಯಾದವರು.












Click it and Unblock the Notifications