ಬೆಂಗಳೂರು: ಬಾಕಿ ಇರುವ 1,051 ರಸ್ತೆಗುಂಡಿ ತ್ವರಿತವಾಗಿ ಮುಚ್ಚುವಂತೆ ರಾಕೇಶ್ ಸಿಂಗ್ ಸೂಚನೆ
ಬೆಂಗಳೂರು, ಸೆಪ್ಟಂಬರ್ 29: ನಗರದ ಪ್ರಮುಖ ರಸ್ತೆಗಳು ಹಾಗೂ ಉಪ ರಸ್ತೆಗಳಲ್ಲಿ ಸಂಚಾರಿ ಪೊಲೀಸರು ಗುರುತಿಸಿದ್ದ ರಸ್ತೆಗುಂಡಿಗಳ ಪೈಕಿ ಬಾಕಿ ಇರುವ 1,051 ರಸ್ತೆಗುಂಡಿಗಳನ್ನು ತ್ವರಿತವಾಗಿ ಮುಚ್ಚುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಸೂಚಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿದಂತೆ ಒಳಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅಧ್ಯಕ್ಷತೆಯಲ್ಲಿ ಸಮನ್ವಯ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಅವರು, ನಗರದ ಪ್ರಮುಖ ರಸ್ತೆಗಳು ಹಾಗೂ ಉಪರಸ್ತೆಗಳಲ್ಲಿ ಸಂಚಾರಿ ಪೊಲೀಸ್ ಇಲಾಖೆಯಿಂದ 4,545 ರಸ್ತೆಗುಂಡಿಗಳನ್ನು ಗುರುತಿಸಲಾಗಿತ್ತು. ಅದರಲ್ಲಿ ಮುಚ್ಚಿ ಬಾಕಿ 1,051 ರಸ್ತೆ ಗುಂಡಿ ಮುಚ್ಚುವುದು ಬಾಕಿ ಇದೆ. ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬಾಕಿ ಉಳಿದ ರಸ್ತೆ ಗುಂಡಿ ಮುಚ್ಚುವಂತೆ ಹೇಳಿದರು.
ನಗರದಲ್ಲಿ ಸಂಚಾರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಸಾಕಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸದರಿ ಸಮನ್ವಯ ಸಭೆಗೆ ವಿವಿಧ ಇಲಾಖೆಗಳು ಹಾಜರಾಗುತ್ತಿವೆ. ಮುಂದಿನ ಸಭೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಅಧಿಕಾರಿಗಳನ್ನು ಆಹ್ವಾನಿಸಿ ಎಂದು ತಿಳಿಸಿದರು.
8 ಜಂಕ್ಷನ್ಗಳ ಸಂಚಾರ ದಟ್ಟಣೆಗೆ ಕ್ರಮ ವಹಿಸಿ
ನಗರದಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುವ ಪ್ರಮುಖ 8 ಜಂಕ್ಷನ್ಗಳಾದ ಸಿಲ್ಕ್ ಬೋರ್ಡ್ ಜಂಕ್ಷನ್, ಜಯದೇವ ಜಂಕ್ಷನ್, ಎಂ.ಎಂ.ಟೆಂಪಲ್ ಜಂಕ್ಷನ್ (ಟಿನ್ ಪ್ಯಾಕ್ಟರಿ), ಹೆಬ್ಬಾಳ ಜಂಕ್ಷನ್, ಗೊರಗುಂಟೆಪಾಳ್ಯ ಜಂಕ್ಷನ್, ಸಾರಕ್ಕಿ ಜಂಕ್ಷನ್, ಕೆ.ಎಸ್.ಲೇಔಟ್ ಜಂಕ್ಷನ್, ಬನಶಂಕರಿ ಜಂಕ್ಷನ್ಗಳಲ್ಲಿ ಟ್ರಾಫಿಕ್ ಕಡಿಮೆ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿತ್ತು. ಮುಂದುವರಿದು ಬಾಕಿ ಕ್ರಮ ಗಳನ್ನು ಶೀಘ್ರವೇ ಎಲ್ಲ ಕ್ರಮ ಕೈಗೊಳ್ಳಿ ಎಂದರು.
ರಸ್ತೆ ಬದಿ ಅವಶೇಷ ತೆರವು ಮಾಡಿ
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಂಗಳೂರು ಜಲಮಂಡಳಿ ಇಲಾಖೆಯಿಂದ ಕಾಮಗಾರಿ ನಡೆಸುವ ಸ್ಥಳದಲ್ಲಿ ಪೈಪ್ಗಳನ್ನು ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗಗಳಲ್ಲಿಯೇ ಹಾಕಲಾಗಿದೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಜಲಮಂಡಳಿ ಇಲಾಖೆಯ ಅಧಿಕಾರಿಗಳಿಗೆ ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ಪೈಪ್ಗಳನ್ನು ಹಾಕದಂತೆ ಸೂಕ್ತ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮರದ ಕೊಂಬೆ ಕಟಾವು, ಪೆಟ್ಟಿಗೆ ಅಂಗಡಿ ತೆರವಿಗೆ ಸೂಚನೆ
ನಗರದ ಪ್ರಮುಖ ರಸ್ತೆಗಳಲ್ಲಿ ಎಲ್ಲೆಲ್ಲಿ ಪೆಟ್ಟಿಗೆ ಅಂಗಡಿಗಳು ಹಾಗೂ ರಸ್ತೆ ಬದಿ ಕಟ್ಟಡ ಭಗ್ನಾವಶೇಷಗಳನ್ನು ಹಾಕುವುದರ ಸಂಚಾರಿ ಪೊಲೀಸ್ ಇಲಾಖೆ ಬಳಿ ಇದೆ. ಆ ಪಟ್ಟಿಯನುಸಾರ ಕೂಡಲೇ ತೆರವುಗೊಳಿಸಬೇಕು.
ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಬದಿ, ಜಂಕ್ಷನ್ ಗಳಲ್ಲಿರುವ ಮರಗಳ ಕೊಂಬೆಗಳು ರಸ್ತೆ ಭಾಗಕ್ಕೆ ಬಂದಿದ್ದು, ಅದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆ ಆಗಲಿದೆ. ಅಲ್ಲದೆ ಬೀದಿ ದೀಪಗಳಿಗೂ ಮರದ ಕೊಂಬೆಗಳು ಅಡ್ಡಿಯಾಗಿರುತ್ತವೆ. ಆದ್ದರಿಂದ ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಗಳ ಜೊತೆ ಸಮನ್ವಯ ಮಾಡಿಕೊಂಡು ಮರದ ಕೊಂಬೆಗಳನ್ನು ಕಟಾವು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
50 ಜಂಕ್ಷನ್ಗಳಲ್ಲಿ ಪಾದಚಾರಿ ಕ್ರಾಸಿಂಗ್ ಮಾರ್ಕಿಂಗ್
ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯು ನಗರದ ಪ್ರಮುಖ 50 ಜಂಕ್ಷನ್ಗಳಲ್ಲಿ ಪಾದಚಾರಿ ಕ್ರಾಸಿಂಗ್ ಮಾಡುವ, ವಾಹ ನಿಲುಗಡೆ ಲೈನ್ ಮಾರ್ಕಿಂಗ್ ಮಾಡುವಂತೆ ಇಳಿಸಲಾಗಿತ್ತು. ಅದರಲ್ಲಿ ಈಗಾಗಲೇ 35 ಜಂಕ್ಷನ್ಗಳಲ್ಲಿ ಮಾರ್ಕಿಂಗ್ ಪೂರ್ಣಗೊಂಡಿದೆ, 7 ಜಂಕ್ಷನ್ ಗಳಲ್ಲಿ ಕೆಲಸ ಪ್ರಗತಿಯಲ್ಲಿದೆ. ಉಳಿದ 8 ಜಂಕ್ಷನ್ ಗಳಲ್ಲಿ ಕೆಲಸ ಪ್ರಾರಂಭಿಸಬೇಕಿದೆ. ತ್ವರಿತವಾಗಿ ಮಾರ್ಕಿಂಗ್ ಕೆಲಸ ಪೂರ್ಣಗೊಳಿಸಬೇಕು ಎಂದರು.
ಬಿಎಂಆರ್ಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಫರ್ವೇಜ್, ಸಂಚಾರಿ ಪೋಲಿಸ್ ಜಂಟಿ ಆಯುಕ್ತ ರವಿಕಾಂತೆಗೌಡ, ವಿಶೇಷ ಆಯುಕ್ತರು (ಯೋಜನೆ) ರವೀಂದ್ರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ), ಬಿಎಂಟಿಸಿ, ಬಿಬಿಎಂಪಿ ಸೇರಿದಂತೆ, ಬೆಂಗಳೂರು ಜಲಮಂಡಳಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.