ರಾಜ್ಯಸಭೆಗೆ ಎಸ್ಸೆಂ ಕೃಷ್ಣ ಮರು ಆಯ್ಕೆ ಕಷ್ಟ?
ಬೆಂಗಳೂರು, ಜೂ.8: ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಎಸ್.ಎಂ ಕೃಷ್ಣ ಅವರು ರಾಜ್ಯಸಭೆಗೆ ಮರು ಆಯ್ಕೆಯಾಗುವುದು ಕಷ್ಟಕರ ಎಂದು ಎಐಸಿಸಿ ಮೂಲಗಳು ಹೇಳಿವೆ. ಹಿರಿತನದಿಂದ ಸಚಿವ ಸ್ಥಾನ ತೊರೆದಿದ್ದ ಕೃಷ್ಣ ಅವರಿಗೆ ಮತ್ತೊಮ್ಮೆ ವಯಸ್ಸಿನ ನೆಪವೊಡ್ಡಿ ರಾಜ್ಯಸಭೆ ಟಿಕೆಟ್ ತಪ್ಪಿಸಲು ಸರ್ವ ಸಿದ್ಧತೆ ನಡೆದಿದೆ ಎನ್ನಲಾಗಿದೆ. ಬಹುಕಾಲದಿಂದಲೂ ಸೀಟು ಆಕಾಂಕ್ಷಿಯಾಗಿರುವ ರಾಜೀವ್ ಗೌಡ ಅವರಿಗೆ ಈ ಸ್ಥಾನ ದೊರೆಯುವ ನಿರೀಕ್ಷೆಯಿದೆ.
ಎಸ್ಸೆಂ ಕೃಷ್ಣ ಅವರ ಬದಲಿಗೆ ಐಐಎಂ ಪದವಿಧರ, ರಾಜ್ಯ ವಿಧಾನಸಭೆ ಮಾಜಿ ಸ್ಪೀಕರ್ ದಿ. ಎಂ.ವೆಂಕಟಪ್ಪ ಅವರ ಪುತ್ರ ಪ್ರೊ. ರಾಜೀವ್ ಗೌಡ ಅವರಿಗೆ ಅವಕಾಶ ಕಲ್ಪಿಸುವ ಬಗ್ಗೆ ಹೈಕಮಾಂಡ್ ನಿರ್ಧರಿಸಿದೆ. ಹೈಕಮಾಂಡ್ ನಿರ್ಧಾರ ಒಕ್ಕಲಿಗ ಮುಖಂಡರಲ್ಲಿ ಅಚ್ಚರಿ ಮೂಡಿಸಿದ್ದು, ಆಯ್ಕೆ ಗೊಂದಲ ಕುತೂಹಲಕಾರಿಯಾಗಿದ್ದು, ಭಾನುವಾರ ಸಂಜೆ ವೇಳೆಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ.[ರಾಜ್ಯಸಭೆ, ಪರಿಷತ್ ಚುನಾವಣೆ ಜೂನ್ 19]
ಶುಕ್ರವಾರ ಸಂಜೆಯಿಂದಲೇ ಕೃಷ್ಣ ಅವರ ಮರು ಆಯ್ಕೆ ಬಗ್ಗೆ ವದಂತಿ ಆರಂಭವಾಗಿತ್ತು. ಎಸ್ಸೆಂ ಕೃಷ್ಣ ಅವರಿಗೆ ಟಿಕೆಟ್ ಸಿಗದಿದ್ದರೆ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದು ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಎಂಬುದು ಪ್ರಮುಖವಾಗಿ ಹಬ್ಬಿದ್ದ ಸುದ್ದಿ. ವಯೋಸಹಜ ಕಾರಣ ಹಿನ್ನೆಲೆಯಲ್ಲಿ ಅವರಿಗೆ ಅವಕಾಶ ನಿರಾಕರಿಸುವಂತೆ ದೆಹಲಿ ಮಟ್ಟದಲ್ಲಿ ಪ್ರಬಲವಾಗಿರುವ ಕೃಷ್ಣ ವಿರೋಧಿ ಬಣ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಆಯ್ಕೆ ಅಂತಿಮವಾಗಿದೆಯೆ? : ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹಾಗೂ ಬೆಂಬಲಿಗರು ಹೈಕಮಾಂಡ್ ಮನವೊಲಿಸುವ ಕೆಲಸ ಮಾಡುತ್ತಿತ್ತು. ಕೊನೆ ಹಂತದಲ್ಲಿ ಹೈಕಮಾಂಡ್ ಕೃಷ್ಣ ಪರ ಹಸಿರು ನಿಶಾನೆ ತೋರಿಸಿತ್ತು. ಆದರೆ ಪರಮೇಶ್ವರ ದೆಹಲಿಯಿಂದ ವಾಪಾಸ್ ಆಗುತ್ತಿದ್ದಂತೆ ಒಕ್ಕಲಿಗ ಸಮುದಾಯಕ್ಕೆ ಸೇರಿದ ಬೆಂಗಳೂರಿನ ಸಚಿವ ಕೃಷ್ಣಭೈರೆಗೌಡ ಅವರ ಜತೆ ರಾಜೀವ ಗೌಡ ಅವರು ದೆಹಲಿಗೆ ತೆರಳಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಕೃಷ್ಣ ಅವರಿಗೆ ಅವಕಾಶ ನಿರಾಕರಿಸುವಂತೆ ಒತ್ತಡ ಹೇರಿದ್ದಾರೆ ಎಂಬ ಸುದ್ದಿಯಿದೆ.

ರಾಜೀವ್ ಗೌಡ ಹಾಗೂ ಕೃಷ್ಣ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರದ ನಡೆಗಳನ್ನು ಖಂಡಿಸುವ ಜ್ಞಾನ ಮತ್ತು ವಾಕ್ ಚಾತುರ್ಯವಿದೆ. ಸಮುದಾಯದಲ್ಲಿ ಯಾರಾದರೊಬ್ಬರಿಗೆ ಪ್ರಾತಿನಿಧ್ಯ ನೀಡಿದರೆ ಸಾಕು ಎಂದು ರಾಹುಲ್ ಮನವೊಲಿಸಿದ್ದಾರೆ. 75 ವರ್ಷ ಮೀರಿದವರಿಗೆ ಅವಕಾಶ ಬೇಡ ಎಂಬ ಅಘೋಷಿತ ನಿರ್ಣಯ ಕಾಂಗ್ರೆಸ್ಸಿನಲ್ಲಿರುವುದು ಕೃಷ್ಣ ಅವರಿಗೆ ಮುಳುವಾಗುವ ಸಾಧ್ಯತೆಯಿದೆ.
ಇದರ ಜತೆಗೆ ಕೃಷ್ಣ ಅವರನ್ನು ವಿರೋಧಿಸುವ ಕಾಂಗ್ರೆಸ್ನ ಇನ್ನೊಂದು ಬಣ ಒಕ್ಕಲಿಗ ಸಮುದಾಯಕ್ಕೆ ಸೇರಿದ ತಾರಾದೇವಿ ಅಥವಾ ಸಿ.ಎಂ.ಲಿಂಗಪ್ಪ ಅವರಿಗೆ ರಾಜ್ಯಸಭಾ ಟಿಕೆಟ್ ನೀಡುವಂತೆ ಆಗ್ರಹಿಸಿದ್ದರು. ಹೀಗಾಗಿ ಐಟಿ-ಬಿಟಿ ಹಿನ್ನೆಲೆಯ ಇಂಗ್ಲಿಷ್ನಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ರಾಜೀವ್ ಗೌಡ ಅವರನ್ನು ಆಯ್ಕೆ ಮಾಡುವುದಕ್ಕೆ ರಾಹುಲ್ ಗಾಂಧಿ ಒಪ್ಪಿಗೆ ನೀಡಿದರು ಎಂದು ತಿಳಿದು ಬಂದಿದೆ.












Click it and Unblock the Notifications