ರಾಜ್ ಸ್ಮಾರಕ : ಎಲ್ಲೆಲ್ಲಿ ಮಾರ್ಗ ಬದಲು, ವಾಹನ ನಿಲುಗಡೆ
ಬೆಂಗಳೂರು, ನ. 27 : ಶನಿವಾರ, ನ.29ರಂದು ಕಂಠೀರವ ಸ್ಟುಡಿಯೋದಲ್ಲಿ ರಾಜ್ ಸ್ಮಾರಕ ಲೋಕಾರ್ಪಣೆಯಾಗುತ್ತಿರುವ ಸಂದರ್ಭದಲ್ಲಿ ರಜನಿ, ಚಿರಂಜೀವಿ ಸೇರಿದಂತೆ ತಾರೆಗಳೇನಕರು ಮತ್ತು ಲಕ್ಷಾಂತರ ಅಭಿಮಾನಿಗಳು ಆಗಮಿಸುತ್ತಿರುವುದರಿಂದ ವಾಹನ ಸಂಚಾರ ಅವ್ಯವಸ್ಥೆಯನ್ನು ತಡೆಗಟ್ಟುವ ಉದ್ದೇಶದಿಂದ ಮಾರ್ಗ ಬದಲಾವಣೆ ಮತ್ತು ವಾಹನ ನಿಲುಗಡೆ ವ್ಯವಸ್ಥೆಯನ್ನು ಮಾಡಲಾಗಿದೆ.
ಬೆಂಗಳೂರು ನಗರ ಸಂಚಾರ ಪಶ್ಚಿಮ ವಿಭಾಗದ, ರಾಜಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸರಹದ್ದಿನ ಡಾ|| ರಾಜ್ ಸ್ಮಾರಕದ ಲೋಕಾರ್ಪಣೆ ಕಾರ್ಯಕ್ರಮ ಬೆಳಿಗ್ಗೆ ಸುಮಾರು 9 ಗಂಟೆಯಿಂದ ಸಂಜೆಯವರೆವಿಗೂ ನಡೆಯಲಿದ್ದು, ಮಂತ್ರಿಗಳು, ಚಿತ್ರರಂಗದ ಗಣ್ಯರು, ವಿವಿಧ ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು ಮತ್ತು ಅಭಿಮಾನಿ ದೇವರುಗಳು ಆಗಮಿಸುತ್ತಿದ್ದಾರೆ. [ರಜನಿ, ಚಿರು ಬರೋದು ಖಚಿತ]
ಮಾರ್ಗ ಬದಲಾವಣೆ ಮತ್ತು ವಾಹನ ನಿಲುಗಡೆ ವ್ಯವಸ್ಥೆ ಕೆಳಗಿನಂತೆ ಇರಲಿದೆ.
1) ರಾಜ್ ಕುಮಾರ್ ಸ್ಮಾರಕದ ಎದುರು, ರಿಂಗ್ ರಸ್ತೆಯಲ್ಲಿ ರಸ್ತೆಯ ಎಡಬದಿಯಲ್ಲಿ ಒಂದು ಪಥದಲ್ಲಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. [ರಾಜ್ ಸ್ಮಾರಕ ಸಂಭ್ರಮಕ್ಕೆ ಕಿಚ್ಚ-ದರ್ಶನ್ ಡಾನ್ಸ್]
2) ಪ್ರಸಾದ್ ಸ್ಟುಡಿಯೋ ಆವರಣದ ಒಳಗೆ ಸಮಾರಂಭಕ್ಕೆ ಆಗಮಿಸುವ ಗಣ್ಯ ವ್ಯಕ್ತಿಗಳ ವಾಹನಗಳ ನಿಲುಗಡೆಯು ಕೇವಲ 35 ವಾಹನಗಳಿಗೆ ಮಾತ್ರ ಸ್ಥಳಾವಕಾಶ ಇರುವುದರಿಂದ, ಈ ನಿಲುಗಡೆಯು ಸಂಪೂರ್ಣವಾಗಿ, ನಂತರ ಬರುವಂತಹ ವಾಹನಗಳು ರಿಂಗ್ ರಸ್ತೆಯಲ್ಲಿ ನಿಗದಿಪಡಿಸಿರುವ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಿಕೊಳ್ಳಬಹುದಾಗಿದೆ.
3) ಕೃಷ್ಣಾನಂದ ಸರ್ಕ್ಲ್ ಕಡೆಯಿಂದ ಎಫ್.ಟಿ.ಐ., ವೃತ್ತ (ತುಮಕೂರು ರಸ್ತೆ) ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು: ಕೃಷ್ಣಾನಂದ ವೃತ್ತ - ಬಲ ತಿರುವು ಎಂ.ಇ.ಐ., ತುಮಕೂರು ರಸ್ತೆ ಸೇರಿ ಮುಂದೆ ಸಂಚರಿಸಬಹುದಾಗಿದೆ. ಅದೇ ರೀತಿ, ಕೃಷ್ಣಾನಂದ ವೃತ್ತ - ಎಡ ತಿರುವು ನಂದಿನಿ ಲೇಔಟ್ ಬಸ್ ನಿಲ್ದಾಣ - ಬಲತಿರುವು ರಿಂಗ್ ರಸ್ತೆ ಕಡೆಗೆ ಸಂಚರಿಸಬಹುದಾಗಿದೆ.
4) ಪೀಣ್ಯ ಕಡೆಯಿಂದ ಎಫ್.ಟಿ.ಐ., ವೃತ್ತ (ತುಮಕೂರು ರಸ್ತೆ) ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು : ಪೀಣ್ಯ 2ನೇ ಹಂತ ಸೋನಾಲ್ ಗಾರ್ಮೆಂಟ್ ರಸ್ತೆ - ಇ.ಎಸ್.ಐ., ಜಂಕ್ಷನ್ (ಮೂಕಾಂಬಿಕಾ ಫಾಸ್ಟ್ ಫುಡ್ ಬಳಿ) - ಎಡತಿರುವು ತುಮಕೂರು ರಸ್ತೆ ಸೇರಿ ಮುಂದೆ ಸಂಚರಿಸಬಹುದಾಗಿದೆ. ಪೀಣ್ಯ 100 ಅಡಿ ರಸ್ತೆ - ಟಿ.ವಿ.ಎಸ್., ಕ್ರಾಸ್ ಜಂಕ್ಷನ್ - ಎನ್.ಟಿ.ಟಿ.ಎಫ್., - ಪೀಣ್ಯ 2ನೇ ಹಂತ 14ನೇ ಕ್ರಾಸ್ ಸೇರಿ - ಮಾಗಡಿ ಮುಖ್ಯರಸ್ತೆ ಕಡೆ ಸಂಚರಿಸಬಹುದಾಗಿದೆ.
5) ಸುಮನಹಳ್ಳಿ ಜಂಕ್ಷನ್ ಮೇಲು ಸೇತುವೆ ಕೆಳಭಾಗದ ಕಡೆಯಿಂದ ಎಫ್.ಟಿ.ಐ., ಕಡೆಗೆ ಸಂಚರಿಸುವ ಸರಕು ಸಾಗಾಣಿಕಾ ವಾಹನಗಳು /ಲಾರಿಗಳು ಸಂಚರಿಸಬೇಕಾದ ಮಾರ್ಗಗಳು : ಸುಮನಹಳ್ಳಿ ಜಂಕ್ಷನ್ - ಬಲತಿರುವು ಮಾಗಡಿ ಮುಖ್ಯರಸ್ತೆ ಸೇರಿ - ಕಾಮಾಕ್ಷಿಪಾಳ್ಯದ ಕಡೆಗೆ ಸಂಚರಿಸಬಹುದಾಗಿದೆ. ಸುಮನಹಳ್ಳಿ ಜಂಕ್ಷನ್ - ಎಡತಿರುವು ಮಾಗಡಿ ರಸ್ತೆ - ಸುಂಕದಕಟ್ಟೆ - ನೈಸ್ ರಸ್ತೆ ಕಡೆಗೆ ಸಂಚರಿಸಬಹುದಾಗಿದೆ.
6) ನಾಗರಬಾವಿ ರವಿ ಜಿಮ್ ಕಡೆಯಿಂದ ಸುಮನಹಳ್ಳಿ ಮೇಲು ಸೇತುವೆ ಮೇಲೆ ಸಂಚರಿಸುವ ವಾಹನಗಳು ಪರ್ಯಾಯ ರಸ್ತೆಯಲ್ಲಿ ಸಂಚರಿಸುವುದು. ನಾಗರಭಾವಿ ರವಿ ಜಿಮ್ ಬಳಿ ಲಾರಿಗಳು ಸರ್ವೀಸ್ ರಸ್ತೆ ಸೇರಿ - ಸುಮನಹಳ್ಳಿ ಜಂಕ್ಷನ್ ಮೇಲು ಸೇತುವೆಯ ಕೆಳಭಾಗದಿಂದ ಮೇಲ್ಕಂಡಂತೆ ಸಂಚರಿಸಬಹುದಾಗಿದೆ.
7) ಶ್ರೀಗಂಧದ ಕಾವಲ್ ಜಂಕ್ಷನ್ ಬಳಿ ಮಾಗಡಿ ಕಡೆಯಿಂದ ಬರುವ ಲಾರಿಗಳು ರಿಂಗ್ ರಸ್ತೆ -ಎಫ್.ಟಿ.ಐ., ಕಡೆಗೆ ಸಂಚರಿಸುವ ಭಾರಿ ಸರಕು ಸಾಗಾಣಿಕಾ ವಾಹನಗಳು ಪರ್ಯಾಯ ರಸ್ತೆಯಾದ ನೈಸ್ ರಸ್ತೆಯಲ್ಲಿ ಸಂಚರಿಸಬಹುದಾಗಿದೆ ಹಾಗೂ ಶ್ರೀಗಂಧದ ಕಾವಲ್ ಜಂಕ್ಷನ್ ಬಳಿ ಬಲ ತಿರುವು ಪಡೆದು ಕೆಂಗೇರಿ ಕಡೆಗೆ ಸಂಚರಿಸಬಹುದಾಗಿದೆ.
8) ಕೆಂಗೇರಿ ಕಡೆಯಿಂದ ಎಫ್.ಟಿ.ಐ., ಜಂಕ್ಷನ್ (ತುಮಕೂರು ಜಂಕ್ಷನ್ ಕಡೆಗೆ ಸಂಚರಿಸುವ ಲಾರಿಗಳು : ಶ್ರೀಗಂಧದ ಕಾವಲ್ ಜಂಕ್ಷನ್ - ಎಡತಿರುವು ಮಾಗಡಿ ರಸ್ತೆ - ಸುಂಕದಕಟ್ಟೆ - ನೈಸ್ ರಸ್ತೆಯಲ್ಲಿ ಸಂಚರಿಸಬಹುದಾಗಿದೆ.
9) ಸುಮನಹಳ್ಳಿ ಕಡೆಯಿಂದ ಸಮಾರಂಭಕ್ಕೆ ಆಗಮಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು : ಸುಮನಹಳ್ಳಿ - ಕೂಲಿನಗರ ಬ್ರಿಡ್ಜ್ - ಕೂಲಿನಗರ ಮೈದಾನ - ಎಡತಿರುವು ಕೂಲಿನಗರ ಮೈದಾನ ಒಳಭಾಗದಲ್ಲಿ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
10) ಸಿ.ಎಂ.ಟಿ.ಐ., ಜಂಕ್ಷನ್ ಕಡೆಯಿಂದ ಎಫ್.ಟಿ.ಐ., ಜಂಕ್ಷನ್ ಕೆಡಗೆ ಸಂಚರಿಸುವ ಲಾರಿಗಳು : ಸಿ.ಎಂ.ಟಿ.ಐ., ಜಂಕ್ಷನ್ - ತುಮಕೂರು ರಸ್ತೆ - ಜಾಲಹಳ್ಳಿ ಕ್ರಾಸ್ - ಎಡತಿರುವು - ಟಿ.ವಿ.ಎಸ್., ಕ್ರಾಸ್ -ಬಲತಿರುವು ಎನ್.ಟಿ.ಟಿ.ಎಫ್., - ಪೀಣ್ಯ 2ನೇ ಹಂತ - ಮಾಗಡಿ ರಸ್ತೆ ಸೇರಿ ಮುಂದೆ ಸಂಚರಿಸಬಹುದಾಗಿದೆ.
ಈ ಮೇಲ್ಕಂಡ ರಸ್ತೆಯಲ್ಲಿ ಭಾರಿ ಸರಕು ಸಾಗಾಣಿಕಾ ವಾಹನಗಳ ಸಂಚಾರವನ್ನು, ತಾತ್ಕಾಲಿಕವಾಗಿ ಸಂಚರಿಸಲು ಮಾರ್ಪಡಿಸಲಾಗಿದ್ದು, ಲಾರಿ ಚಾಲಕರು ಮತ್ತು ಮಾಲೀಕರುಗಳು ಮೇಲ್ಕಂಡ ಮಾರ್ಗವನ್ನು ಉಪಯೊಗಿಸಿಕೊಂಡು ಸಂಚರಿಸುವಂತೆ ಕೊರಲಾಗಿದೆ.
ಶನಿವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ : ಅದೇ ದಿನ ಸಂಜೆ ಅರಮನೆ ಮೈದಾನದಲ್ಲಿ ರಾಜ್ ಸ್ಮಾರಕ ಲೋಕಾರ್ಪಣೆ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಸಲುವಾಗಿ ಕನ್ನಡ ಚಿತ್ರರಂಗಕ್ಕೆ 28 ಮತ್ತು 29ರಂದು ರಜಾ ಘೋಷಿಸಲಾಗಿದೆ. ಅಭಿಮಾನಿಗಳಿಗಂತೂ ಹಬ್ಬವೋಹಬ್ಬ.