ಆರ್. ಆರ್. ನಗರ ಉಪ ಚುನಾವಣೆ; ಮೌನ ಮುರಿದ ಹನುಮಂತರಾಯಪ್ಪ
ಬೆಂಗಳೂರು, ಅಕ್ಟೋಬರ್ 01: ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಕಣ ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ನಿಂದ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ? ಎಂಬ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್-ಜೆಡಿಎಸ್ನಿಂದ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.
ಗುರುವಾರ ಐಎಎಸ್ ಅಧಿಕಾರಿಯಾಗಿದ್ದ ಡಿ. ಕೆ. ರವಿ ಮಾವ ಹನುಮಂತರಾಯಪ್ಪ ಉಪ ಚುನಾವಣೆ ಬಗ್ಗೆ ಮಾತನಾಡಿದರು. ಬೆಳಗ್ಗೆ ಅವರು ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಪುತ್ರಿ ಹೆಚ್. ಕುಸುಮಾ ಜೊತೆ ಭೇಟಿ ನೀಡಿ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದಿದ್ದರು.
"ಮುನಿರತ್ನ ಅವರನ್ನು ಸೋಲಿಸುವುದೇ ನನ್ನ ಗುರಿಯಾಗಿದೆ. ನಾನು ಜೆಡಿಎಸ್ನಲ್ಲಿದ್ದೇನೆ. ಆದರೆ, ಕಾಂಗ್ರೆಸ್ನಿಂದ ಸ್ಪರ್ಧಿಸುವಂತೆ ಆಹ್ವಾನ ಬಂದಿದೆ" ಎಂದು ಹನುಮಂತರಾಯಪ್ಪ ಹೇಳಿದರು. ಮುನಿರತ್ನ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
ಮುನಿರತ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ಆರ್. ಆರ್. ನಗರ ಕ್ಷೇತ್ರದಲ್ಲಿ ಚುನಾವಣೆ ಎದುರಾಗಿದೆ. ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದ್ದು, ನವೆಂಬರ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಒಮ್ಮತದ ಅಭ್ಯರ್ಥಿ ಹಾಕಬೇಕು
"ಮುನಿರತ್ನ ಅವರನ್ನು ಸೋಲಿಸುವುದು ನನ್ನ ಗುರಿಯಾಗಿದೆ. ಆದ್ದರಿಂದ, ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಒಮ್ಮತದ ಅಭ್ಯರ್ಥಿ ಹಾಕಬೇಕೆಂದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಮುಖಂಡರಿಗೆ ಹೇಳಿದ್ದೇನೆ" ಎಂದು ಹನುಮಂತರಾಯಪ್ಪ ಹೇಳಿದರು.

ಕುಸುಮಾ ಸ್ಪರ್ಧೆ ಬಗ್ಗೆ ಚರ್ಚೆ ನಡೆದಿದೆ
"ಕುಸುಮಾ ಸ್ಪರ್ಧೆ ಬಗ್ಗೆ ಮನೆಯಲ್ಲಿ ಚರ್ಚೆ ನಡೆದಿದೆ. ಆದರೆ, ಮಗಳು ತೀರ್ಮಾನ ಕೈಗೊಳ್ಳಬೇಕಿದೆ. ಆಕೆ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಆಕೆಯ ಭವಿಷ್ಯ ಮುಖ್ಯವಾದದ್ದರು, ಸ್ಪರ್ಧೆಗೆ ಒಪ್ಪಿದರೆ ನಾನು ಬೆಂಬಲ ನೀಡುತ್ತೇನೆ" ಎಂದು ಹನುಮಂತರಾಯಪ್ಪ ಸ್ಪಷ್ಟಪಡಿಸಿದರು.

ಅಭ್ಯರ್ಥಿ ಆಗಲಿದ್ದಾರೆ ಎಂಬ ಸುದ್ದಿ
ಡಿ. ಕೆ. ರವಿ ಪತ್ನಿ ಹೆಚ್. ಕುಸುಮಾ ಅಥವ ಹನುಮಂತರಾಯಪ್ಪ ಕಾಂಗ್ರೆಸ್ನಿಂದ ಆರ್.ಆರ್. ನಗರದಲ್ಲಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದೆ. ರಾಜ್ಕುಮಾರ್, ಪ್ರಿಯಾ ಕೃಷ್ಣ ಸೇರಿದಂತೆ ಇನ್ನೂ ಹಲವಾರು ಹೆಸರುಗಳು ಹೇಳಿಬರುತ್ತಿವೆ. ಯಾರು ಅಭ್ಯರ್ಥಿ? ಎಂಬುದು ಇನ್ನೂ ಅಂತಿಮವಾಗಿಲ್ಲ.
Recommended Video

ಜೆಡಿಎಸ್ ಒಪ್ಪಿಗೆ ನೀಡಲಿದೆಯೇ?
ಆರ್. ಆರ್. ನಗರದಲ್ಲಿ ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ಜೆಡಿಎಸ್ ಒಪ್ಪಿಗೆ ನೀಡಲಿದೆಯೇ? ಕಾದು ನೋಡಬೇಕು. 2018ರ ಚುನಾವಣೆಯಲ್ಲಿ ಜೆಡಿಎಸ್ ಕ್ಷೇತ್ರದಲ್ಲಿ 60 ಸಾವಿರ ಮತಗಳನ್ನು ಪಡೆದಿತ್ತು.












Click it and Unblock the Notifications