ಆರ್. ಆರ್. ನಗರ ಚುನಾವಣೆ; ಜಾತಿ ಲೆಕ್ಕಾಚಾರದ್ದೇ ಮಾತು
ಬೆಂಗಳೂರು, ಅಕ್ಟೋಬರ್ 27: ಬೆಂಗಳೂರು ನಗರದ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಪ್ರಚಾರದಲ್ಲಿ ಜಾತಿ ಲೆಕ್ಕಾಚಾರದ ಮಾತುಗಳು ಹೆಚ್ಚಾಗಿವೆ. ನವೆಂಬರ್ 3ರಂದು ಮತದಾನ ನಡೆಯಲಿದ್ದು, ನವೆಂಬರ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಪ್ರತಿ ಪಕ್ಷಗಳು ಸಹ ಒಕ್ಕಲಿಗ ಸಮುದಾಯದ ಬಗ್ಗೆ ಮಾತನಾಡುತ್ತಿವೆ. ಹೌದು, ಕ್ಷೇತ್ರದಲ್ಲಿ ಒಕ್ಕಲಿಗರ ಮತಗಳು ನಿರ್ಣಾಯಕವಾಗಿವೆ. ಅದಕ್ಕಾಗಿ ಪಕ್ಷಗಳು ಸಹ ಜಾತಿ ಲೆಕ್ಕಾಚಾರದಲ್ಲಿ ಮುಳುಗಿವೆ.
ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ಹೆಚ್ಚಿದ್ದರೂ ಸಹ ಅಹಿಂದ ಮತಗಳ ಪ್ರಾಬಲ್ಯವೂ ಇದೆ. ಅಲ್ಪ ಸಂಖ್ಯಾತ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಜನರು ಯಾರ ಪರವಾಗಿದ್ದಾರೆ. ವಿಜಯ ಮಾಲೆ ಯಾರ ಕೊರಳಿಗೆ ಎಂದು ತಿಳಿಯಲು ನವೆಂಬರ್ 10ರ ತನಕ ಕಾಯಬೇಕಿದೆ.
ಮೂರು ಪ್ರಮುಖ ಪಕ್ಷಗಳು ಸಹ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಕಳೆದ 2 ಬಾರಿ ಕ್ಷೇತ್ರದಲ್ಲಿ ಗೆದ್ದಿದ್ದ ಮುನಿರತ್ನ ಈ ಬಾರಿ ಬಿಜೆಪಿಯಿಂದ ಕಣದಲ್ಲಿರುವುದು ಹೊಸ ಗೆಲುವಿನ ಲೆಕ್ಕಾಚಾರವನ್ನು ಹುಟ್ಟುಹಾಕಿದೆ.

ಒಕ್ಕಲಿಗ ಮತಗಳು ಹೆಚ್ಚು
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚು. 1.10 ಲಕ್ಷ ಒಕ್ಕಲಿಗ ಮತದಾರರು ಇದ್ದಾರೆ. ಉಳಿದಂತೆ 70 ಸಾವಿರ ದಲಿತ ಮತ್ತು 70 ಸಾವಿರ ಹಿಂದುಳಿದ ಮತದಾರರು ಇದ್ದಾರೆ. 50 ಸಾವಿರ ಕುರುಬ, 45 ಸಾವಿರ ಲಿಂಗಾಯತ ಮತದಾರರು ಕ್ಷೇತ್ರದಲ್ಲಿದ್ದಾರೆ. 25 ಸಾವಿರ ಮುಸ್ಲಿಂ ಮತ್ತು ಇತರ 80 ಸಾವಿರ ಮತಗಳಿವೆ.

ಎರಡು ಬಾರಿ ಮುನಿರತ್ನ ಗೆಲುವು
ಆರ್. ಆರ್. ನಗರ ಕ್ಷೇತ್ರದಲ್ಲಿ ಎರಡು ಬಾರಿ ಬಿಜೆಪಿ ಸೋಲಲು ಮುನಿರತ್ನ ಅವರೇ ಕಾರಣ, ಉಪ ಚುನಾವಣೆಯಲ್ಲಿ ಪಕ್ಷ ಗೆದ್ದರೆ ಅದು ಮುನಿರತ್ನ ಅವರಿಂದಾಗಿಯೇ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅವರು 1,08,065 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯಿಂದ ಕಣಕ್ಕಿಳಿದಿದ್ದ ಮುನಿರಾಜು ಗೌಡ 82,573 ಮತ ಪಡೆದಿದ್ದರು. ಜೆಡಿಎಸ್ನ ಜಿ. ಎಚ್. ರಾಮಚಂದ್ರ 60,360 ಮತ ಪಡೆದಿದ್ದರು.

16 ಅಭ್ಯರ್ಥಿಗಳು ಕಣದಲ್ಲಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಆರ್. ಆರ್. ನಗರ ಕ್ಷೇತ್ರದಲ್ಲಿ ನವೆಂಬರ್ 3ರಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದೆ. ಒಟ್ಟು 16 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಬಿಜೆಪಿಯಿಂದ ಮುನಿರತ್ನ, ಕಾಂಗ್ರೆಸ್ನಿಂದ ಹೆಚ್. ಕುಸುಮಾ, ಜೆಡಿಎಸ್ನಿಂದ ವಿ. ಕೃಷ್ಣಮೂರ್ತಿ ಅಭ್ಯರ್ಥಿಗಳು.
Recommended Video

4 ಲಕ್ಷ ಮತದಾರರು
ಆರ್. ಆರ್. ನಗರ ವ್ಯಾಪ್ತಿಯಲ್ಲಿ 678 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಕ್ಷೇತ್ರದಲ್ಲಿ ಒಟ್ಟು 4,62,201 ಮತದಾರರು ಇದ್ದಾರೆ. ಇವರಲ್ಲಿ 2,41,0498 ಪುರುಷ, 2,21,073 ಮಹಿಳಾ ಮತದಾರರು ಇದ್ದಾರೆ. ಇತರೆ ಮತದಾರರು 79.












Click it and Unblock the Notifications