ಸಿಲಿಕಾನ್ ಸಿಟಿಯಲ್ಲಿ ಮಳೆಯಾದರೆ, ಕುಡಿಯುವುದಕ್ಕೆ ನೀರು ಸಿಗುವುದಿಲ್ಲ!?
ಬೆಂಗಳೂರು, ಸೆಪ್ಟೆಂಬರ್ 6: ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದ ಸಿಲಿಕಾನ್ ಸಿಟಿಯಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಇದರ ಮಧ್ಯೆ ಬೆಂಗಳೂರಿನ ಮಂದಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ.
ರಾಜಧಾನಿ ಜನರಿಗೆ ಕಾವೇರಿ ನೀರು ಪೂರೈಕೆಯಲ್ಲಿ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳುವುದಕ್ಕಾಗಿ ಜಲಮಂಡಳಿ ಅಧಿಕಾರಿಗಳು ಶ್ರಮ ವಹಿಸುತ್ತಿದ್ದಾರೆ. ಏಕೆಂದರೆ ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ಕಾವೇರಿ ನೀರು ಸರಬರಾಜು ಯೋಜನೆಯ ಮೂರನೇ ಹಂತ ಮತ್ತು ನಾಲ್ಕನೇ ಹಂತದ ಎರಡನೇ ಘಟ್ಟದಿಂದ ನೀರು ಸರಬರಾಜು ಮಾಡುವ ಯಂತ್ರಗಾರದಲ್ಲಿ ಸುಮಾರು 20 ಅಡಿಯಷ್ಟು ನೀರು ತುಂಬಿಕೊಂಡಿದೆ.
ಇದರ ಬೆನ್ನಲ್ಲೇ ಟಿಕೆ ಹಳ್ಳಿಯಲ್ಲಿರುವ ಯಂತ್ರಗಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ತ್ವರಿತಗತಿಯಲ್ಲಿ ಎಲ್ಲಾ ಪಂಪ್ ಗಳು ಯಥಾಸ್ಥಿತಿ ಕಾರ್ಯಗತಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಜಲಮಂಡಳಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಜಲಮಂಡಳಿ ಅಧ್ಯಕ್ಷ ಎನ್ ಜಯರಾಂ ನೇತೃತ್ವದಲ್ಲಿ ಕ್ರಮ
ಬೆಂಗಳೂರು ಜಲಮಂಡಳಿಯ ಅಧ್ಯಕ್ಷ ಎನ್. ಜಯರಾಂ ನೇತೃತ್ವದಲ್ಲಿ ಮುಖ್ಯ ಅಭಿಯಂತಕರ ಸಹಯೋಗದೊಂದಿಗೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಯಂತ್ರಗಾರದಲ್ಲಿ ತುಂಬಿದ್ದ ನೀರನ್ನು ಹೊರ ತೆಗೆಯಲಾಗಿದೆ. ಎಲೆಕ್ಟ್ರಿಕಲ್ ಪ್ಯಾನಲ್ ನಲ್ಲಿ ತುಂಬಿದ್ದ ತೇವಾಂಶವನ್ನು ತೆಗೆದು ಪಂಪ್ ಗಳನ್ನು ಯಥಾಸ್ಥಿತಿಗೆ ತರಲಾಗಿದೆ. ಸಾರ್ವಜನಿಕರ ಹಿತಾಸಕ್ತಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಜಲಮಂಡಳಿಯು ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿರುವ ಸ್ಟ್ಯಾಂಡ್ ಬೈ ಪಂಪ್ ಅನ್ನು ಉಪಯೋಗಿಸಿಕೊಂಡು ನಗರಕ್ಕೆ ನೀರು ಸರಬರಾಜು ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ.

ಸ್ಥಳದಲ್ಲೇ ಅಧಿಕಾರಿಗಳ ಮೊಕ್ಕಾಂ
ಟಿಕೆ ಹಳ್ಳಿ ಯಂತ್ರಗಾರದಲ್ಲಿ ದುರಸ್ಥಿ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಬೇಕಿದೆ. ಬೆಂಗಳೂರಿನ ಜನರಿಗೆ ಕಾವೇರಿ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳುವುದಕ್ಕೆ ಖುದ್ದು ಜಲಮಂಡಳಿ ಅಧ್ಯಕ್ಷರೇ ಕಾರ್ಯಪ್ರವೃತ್ತರಾಗಿದ್ದಾರೆ. ಮುಖ್ಯ ಅಭಿಯಂತಕರು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಮೊಕ್ಕಾಂ ಹೂಡಲಾಗಿದೆ. ಯಂತ್ರಗಾರವನ್ನು ಯಥಾಸ್ಥಿತಿಗೆ ತರುವ ನಿಟ್ಟಿನಲ್ಲಿ ಹಗಲು-ರಾತ್ರಿ ಪರಿಶ್ರಮಿಸಲಾಗುತ್ತಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
4ನೇ ಹಂತದಲ್ಲಿರುವ 2ನೇ ಘಟ್ಟದ ಯಂತ್ರಗಾರದಲ್ಲಿನ 2 ಪಂಪ್ ಅನ್ನು ಸಂಪೂರ್ಣವಾಗಿ ದುರಸ್ಥಿಗೊಳಿಸಲಾಗಿದ್ದು, ಕಾರ್ಯಗತಗೊಳಿಸಲಾಗಿದೆ. ಇದರಿಂದ ನಗರಕ್ಕೆ 220 MLD ನೀರು ಪೂರೈಕೆಯಾಗುತ್ತಿದ್ದು, ಇನ್ನುಳಿದ ಮೂರು ಪಂಪ್ ಅನ್ನು ಹಂತ-ಹಂತವಾಗಿ ಕಾರ್ಯಚಾಲನೆ ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಲಮಂಡಳಿಯು ಮಾಹಿತಿ ನೀಡಿದೆ.

ಬೆಂಗಳೂರಿಗರಿಗೆ ನೀರು ಪೂರೈಸಲು 200 ಟ್ಯಾಂಕರ್ ಬಳಕೆ
ಸಿಲಿಕಾನ್ ಸಿಟಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಪ್ರದೇಶಗಳಿಗೆ ಸರ್ಕಾರಿ ಹಾಗೂ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ 200ಕ್ಕೂ ಹೆಚ್ಚು ಟ್ಯಾಂಕರ್ ಮೂಲಕ ನೀರಿನ ವ್ಯತ್ಯಯ ಉಂಟಾದ ಪ್ರದೇಶಗಳಿಗೆ 200 ಲೋಡ್ ನೀರಿನ ಪೂರೈಕೆ ಮಾಡಲಾಗಿದೆ. ಬಡವರು, ಕೊಳಗೇರಿ ನಿವಾಸಿಗಳು, ಮಧ್ಯಮ ವರ್ಗದವರು, ಕಾರ್ಮಿಕ ವರ್ಗದವರು ಮತ್ತು ಕೂಲಿ ಕಾರ್ಮಿಕರಿಗೆ ಉಚಿತವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

ನೋಡೆಲ್ ಅಧಿಕಾರಿಗಳನ್ನು ಸಂಪರ್ಕಿಸಿ ಕುಡಿಯುವ ನೀರು ಪಡೆಯಿರಿ
ಬೆಂಗಳೂರಿನಲ್ಲಿ ಕುಡಿಯುವ ನೀರಿನ ತೊಂದರೆಯನ್ನು ಸಮರ್ಥವಾಗಿ ನಿರ್ವಹಿಸುವುದಕ್ಕಾಗಿ ಜಲಮಂಡಳಿಯು ನೋಡೆಲ್ ಅಧಿಕಾರಿಗಳನ್ನು ನೇಮಿಸಿದೆ. ವಲಯವಾರು ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ನೀರಿನ ಅವಶ್ಯಕತೆ ಉಂಟಾದ ತಕ್ಷಣ ಆಯಾ ವಲಯಗಳ ನೋಡೆಲ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ. ತಮ್ಮ ವ್ಯಾಪ್ತಿಯ ನೋಡೆಲ್ ಅಧಿಕಾರಿಗಳನ್ನು ಸಂಪರ್ಕಿಸುವ ಮೂಲಕ ಟ್ಯಾಂಕರ್ ಗಳಲ್ಲಿ ನೀರನ್ನು ಪಡೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications