ಬೆಂಗಳೂರು ಮಳೆ: ತುಮಕೂರು ರಸ್ತೆ ಲಾಕ್, ಎಲೆಕ್ಟ್ರಾನಿಕ್ ಸಿಟಿ ರೋಡ್ ಜಾಮ್ !
ಬೆಂಗಳೂರು, ಮೇ. 18: ಸಾರ್. ಮುಂದೆ ಬನ್ನಿ.. ಹಹಾ.. ಆಗ್ತಿಲ್ಲವಾ.. ಮುಂದೆ ಬನ್ನಿ ಸಾರ್.. ಲೋ ಹೋದ.. ಅವನ ಕಾರು ತೇಲ್ತಿದೆ ನೋಡು. ಹೋದ.. ವಾಪಸು ಬರಲ್ಲ. ಯಪ್ಪಾ, ಬಚಾವ್ ಆದ..
ರಾಜಧಾನಿಯಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಗೆ ಬೆಂಗಳೂರು ನಗರ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಬುಧವಾರ ಬೆಳಗ್ಗೆ ಸಹ ಬೆಂಗಳೂರಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡಿದರು.
ಎಲೆಕ್ಟ್ರಾನಿಕ್ ಸಿಟಿ ಸ್ತಬ್ಧ :
ಬೆಂಗಳೂರಿನಲ್ಲಿ ಮಂಗಳವಾರ ಸುರಿದ ಭಾರೀ ಮಳೆಗೆ ಎಲೆಕ್ಟ್ರಾನಿಕ್ ರಸ್ತೆ ಅಕ್ಷರಶಃ ರಾಜಕಾಲುವೆಯಾಗಿ ಪರಿವರ್ತನೆಯಾಗಿತ್ತು. ವಾಹನ ದಟ್ಟಣೆ ತಪ್ಪಿಸಲು ಬಂದ ಪೊಲೀಸ್ ಸಿಬ್ಬಂದಿಯ ಜೀಪು ಕೊಚ್ಚಿಕೊಂಡು ಹೋಗುವ ಅಪಾಯಕ್ಕೆ ಸಿಲುಕಿತ್ತು. ರಸ್ತೆಯಲ್ಲಿ ನಿಂತಿದ್ದ ನೀರಿನಲ್ಲಿ ಕಾರುಗಳು ತೇಲಾಡುವ ದೃಶ್ಯ ಸಾಮಾನ್ಯವಾಗಿತ್ತು. ವಾಹನಗಳು ಕೊಚ್ಚಿಕೊಂಡು ಹೋಗುವುದನ್ನು ನೋಡಿ ಭಯ ಬಿದ್ದ ಸವಾರರು ಸಂಚಾರ ಸ್ಥಗಿತಗೊಳಿಸಿದ್ದರಿಂದ ಕಿ.ಮೀ. ಗಟ್ಟಲೇ ವಾಹನ ಸಂಚಾರ ಸ್ಥಬ್ಧಗೊಂಡಿತ್ತು. ಮಂಗಳವಾರ ಸುರಿದ ಮಳೆ ಪರಿಣಾಮ ಬುಧವಾರ ಬೆಳಗ್ಗೆಯೂ ಮುಂದುವರೆತ್ತು. ಬೆಳಗಿನಿಂದಲೂ ಸಂಜೆ ವರೆಗೂ ಎಲೆಕ್ಟ್ರಾನಿಕ್ ಸಿಟಿ ರಸ್ತೆಯಲ್ಲಿ ಸಂಚಾರ ಜಾಮ್ ಆಗಿತ್ತು.
ನಾಯಂಡಹಳ್ಳಿ ಜಂಕ್ಷನ್ ಬೇರೆ ಕಥೆ:
ಇನ್ನು ಮಂಗಳವಾರ ಸುರಿದ ಮಳೆಗೆ ನಾಯಂಡಹಳ್ಳಿ ವೃತ್ತದ ರಾಜಕಾಲುವೆ ತನ್ನ ರೌದ್ರಾವತಾರ ತಾಳಿತ್ತು. ರಾಜಕಾಲುವೆ ತುಂಬಿ ಹರಿದ ಪರಿಣಾಮ ನಾಯಂಡಹಳ್ಳಿ ವೃತ್ತದಲ್ಲಿ ಎದೆ ಮಟ್ಟಲ್ಲಿ ನೀರು ನಿಂತಿತ್ತು. ಇಷ್ಟಾಗಿಯೂ ವಾಹನ ಚಾಲನೆ ಮಾಡಿ ಸಾಹಸ ಮೆರೆಯಲು ಹೋದ ಕಾರುಗಳು ಮಧ್ಯದಲ್ಲಿ ನಿಂತಿದ್ದ ದೃಶ್ಯ ಕಂಡು ಬಂತು. ಕೊಚ್ಚಿ ಹೋಗುತ್ತಿದ್ದ ಕಾರುಗಳನ್ನು ತಳ್ಳಿ ರಕ್ಷಣೆ ಮಾಡುತ್ತಿದ್ದರು. ಅದರಲ್ಲಿ ರಾಜಕಾಲುವೆ ತುಂಬಿ ಉಕ್ಕಿ ಹರಿದ ಪರಿಣಾಮ ಮಧ್ಯ ರಾತ್ರಿ ವರೆಗೂ ಮೈಸೂರು ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ತುಮಕೂರು ರಸ್ತೆ ಲಾಕ್:
ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಸೆಂಟರ್ ನಲ್ಲಿ ಕನ್ಸ್ಟ್ರಕ್ಷನ್ ಉದ್ಯಮ ಕುರಿತ ನಡೆಯುತ್ತಿರುವ EXcon ವಸ್ತು ಪ್ರದರ್ಶನ ಮೇಳದಿಂದಾಗಿ ತುಮಕೂರು ರಸ್ತೆ ಮತ್ತು ನೈಸ್ ರಸ್ತೆಯಲ್ಲಿ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಆಗಿದೆ.
ಬೆಳಗ್ಗೆ 6 ಗಂಟೆಯಿಂದಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರ ಜತೆಗೆ ತಮಕೂರು ರಸ್ತೆಯಲ್ಲಿ ಚಿಕ್ಕ ಬಿದರುಕಲ್ಲಿನಿಂದ ಮಾದವಾರದ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿವೆ. ಇದರಿಂದ ವಾಹನ ಸವಾರರು ಪರದಾಡಿದರು. ಆಂಬ್ಯೂಲೆನ್ಸ್ ಗಳು ಅಂತೂ ರೋಗಿಗಳನ್ನು ಕರೆದೊಯ್ಯಲು ಸೈರನ್ ಹಾಕಿಕೊಂಡೇ ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನೈಸ್ ರಸ್ತೆಯೂ ಜಾಮ್ ಜಾಮ್ :
ತುಮಕೂರು ರಸ್ತೆಯಿಂದ ಹೊಸೂರು ಮಾರ್ಗಕ್ಕೆ ತೆರಳುವ ವಾಹನಗಳು ಸಹ ಜಾಮ್ ಅಗಿದ್ದವು. ನೈಸ್ ರಸ್ತೆಯಲ್ಲಿ ಕೂಡ ವಾಹನಗಳು ಸಾಲು ಗಟ್ಟಿ ನಿಂತಿದ್ದು, ಇದೇ ಪರಿಸ್ಥಿತಿ ಇನ್ನೂ ನಾಲ್ಕು ದಿನ ಮುಂದುವರೆಯಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಸೆಂಟರ್ (BIEC) ನಲ್ಲಿ ಕನ್ಸ್ಟ್ರಕ್ಷನ್ ಉದ್ಯಮ ಕುರಿತ EXcon ವಸ್ತು ಪ್ರದರ್ಶನ ಮೇಳ ಮೇ. 17 ರಿಂದ 21 ರ ವರೆಗೂ ನಡೆಯಲಿದೆ.
ಹೀಗಾಗಿ ದೇಶದ ನಾನಾ ಭಾಗಗಳಿಂದ ನೂರಾರು ಕಂಪನಿಗಳು ಭಾಗವಹಿಸಿವೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಘಟ್ಕರಿ ಈ ಮೇಳ ಉದ್ಘಾಟನೆ ಮಾಡಲಿದ್ದು, ಮೇಳದ ಮೊದಲ ದಿನವೇ ವಾಹನಗಳು ಸಾಲುಗಟ್ಟಿ ನಿಂತಿವೆ. ಇನ್ನೂ ನಾಲ್ಕು ದಿನ ಇದೇ ಪರಿಸ್ಥಿತಿ ಮುಂದುವರೆಲಿದೆ. ಸರ್ವೀಸ್ ರಸ್ತೆ ಬದಲಿಗೆ ವಾಹನ ಸವಾರರು ತುಮಕೂರು ರಸ್ತೆ ಮೇಲ್ಸೇತುವೆ ರಸ್ತೆ ಬಳಿಸಿ ಸಂಚರಿಸುವುದು ಸೂಕ್ತ ಎಂದು ಸ್ಥಳೀಯ ಸಂಚಾರ ಪೊಲೀಸ್ ಅಧಿಕಾರಿಗಳು ಸಲಹೆ ಮಾಡಿದ್ದಾರೆ.