ಬೆಂಗಳೂರಿನಲ್ಲಿ ಗಾಳಿ ಸಹಿತ ಭಾರಿ ಮಳೆ: ಟ್ರಾಫಿಕ್ ಜಾಮ್
ಬೆಂಗಳೂರು, ಮಾರ್ಚ್ 30: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗಿರುವುದರಿಂದ ಬೆಂಗಳೂರಿನಲ್ಲಿಯೂ ವರುಣನ ಆರ್ಭಟ ಶುಕ್ರವಾರವೂ ಮುಂದುವರೆದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಭಾರಿ ಮಳೆ ಹಿನ್ನೆಲೆ ಬೆಂಗಳೂರಿಗೆ ಬಂದಿಳಿಯಬೇಕಿದ್ದ ವಿಮಾನಗಳು ಚೆನ್ನೈಗೆ ಕೊಂಡೊಯ್ಯಲಾಗಿದೆ. ಪ್ರಯಾಣಿಕರು ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲಿ ಏ.1ರವರೆಗೂ ಮಳೆ: ಕಲಬುರಗಿಯಲ್ಲಿ ದಾಖಲೆಯ ಬಿಸಿಲು
ಬೆಂಗಳೂರಿನಾದ್ಯಂತ ಮೋಡಕವಿದ ವಾತಾವರಣವಿದ್ದು, ಬಿರುಗಾಳಿ ಬೀಸುತ್ತಿದೆ. ನಗರದ ಮಲ್ಲೇಶ್ವರದಲ್ಲಿ ಗಾಳಿ ಮಳೆಗೆ ಮರಗಳು ಧರೆಗುರುಳಿವೆ, ಆಟೋ ಚಾಲಕ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಇನ್ನು ಬೆಂಗಳೂರು ಗ್ರಾಮಾಂತರ ಪ್ರದೇಶವಾದ ಆನೇಕಲ್ ಸುತ್ತಮುತ್ತಲ ಪ್ರದೇಶದಲ್ಲಿಯೂ ಆಲಿಕಲ್ಲು ಸಹಿತ ಮಳೆಯಾಗಿದೆ. ಯಶವಂತಪುರ ಬಳಿಯ ಸೋಪ್ ಫ್ಯಾಕ್ಟರಿ ಮೇಲೆ ಮರ ಉರುಳಿದೆ. ಇನ್ನು ವಿದ್ಯಾರಣ್ಯ ಪುರದಲ್ಲಿ ಎರಡು ತೆಂಗಿನ ಮರಗಳು ಧರೆಗುರುಳಿದ್ದು ಅಲ್ಲಿಯೂ ಸಂಚಾರ ಅಸ್ತವ್ಯಸ್ತವಾಗಿದೆ. ಏ.1ರವರೆಗೆ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ.