ಬೆಂಗಳೂರಲ್ಲಿ ತರಕಾರಿಗಳ ಬೆಲೆ ದಿಢೀರ್ ಹೆಚ್ಚಳ
ಬೆಂಗಳೂರು, ಮೇ 28; ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ವಾರಾಂತ್ಯದಲ್ಲಿ ಬೆಂಗಳೂರು ನಗರದಲ್ಲಿ ತರಕಾರಿಗಳ ಬೆಲೆ ದಿಢೀರ್ ಹೆಚ್ಚಳವಾಗಿದೆ. ಶುಭ ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿದ್ದು, ಏಕಾಏಕಿ ಬೆಲೆ ಹೆಚ್ಚಳವಾಗಿರುವುದು ಜನರ ಜೇಬಿಗೆ ಕತ್ತರಿ ಬಿದ್ದಿದೆ.
ಎನ್. ಆರ್. ಕಾಲೋನಿ ಮಾರುಕಟ್ಟೆಯ ತಳ್ಳುಗಾಡಿ ವ್ಯಾಪಾರಿ ಪ್ರವೀಣ್ ಪ್ರಕಾರ ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ 5 ರಿಂದ 30 ರೂ. ತನಕ ತರಕಾರಿ ಬೆಲೆಗಳು ಹೆಚ್ಚಳವಾಗಿವೆ. ಕೆಲವು ತರಕಾರಿಗಳು ಬೆಲೆ ಹೆಚ್ಚಾಗಿ ತರುವುದೇ ನಿಲ್ಲಿಸಿದ್ದೇವೆ ಎನ್ನುತ್ತಾರೆ ಅವರು.

ಒಂದು ಕಡೆ ಮಳೆ ಮತ್ತೊಂದು ಕಡೆ ಬಿರು ಬೇಸಿಗೆ ತರಕಾರಿ ಬೆಲೆಯಲ್ಲಿನ ದಿಢೀರ್ ಹೆಚ್ಚಳಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ. ಬೀನ್ಸ್, ಕ್ಯಾರೆಟ್, ಆಲೂಗೆಡ್ಡೆ, ಬೀಟ್ರೊಟ್, ಮೆಣಸಿಕಾಯಿ ಮುಂತಾದ ತರಕಾರಿಗಳ ಬೆಲೆಗಳು ಏರಿಕೆಯಾಗಿವೆ. ಮುಂದಿನ ಕೆಲವು ದಿನ ಬೆಲೆಗಳು ಕಡಿಮೆಯಾಗುವ ಸಾಧ್ಯತೆ ಇಲ್ಲ ಎಂದು ಅಂದಾಜಿಸಲಾಗಿದೆ.
ಬೆಲೆ ಏರಿಕೆ ಏಕೆ?; ತರಕಾರಿಗಳ ಬೆಲೆಗಳು ದಿಢೀರ್ ಏರಿಕೆಯಾಗಲು ಇಂತಹ ಕಾರಣ ಎಂದು ನಿಖರವಾಗಿ ಅಂದಾಜಿಸಲು ಸಾಧ್ಯವಿಲ್ಲ. ಆದರೆ ಮಳೆ ಮತ್ತು ಬೇಸಿಗೆಯೇ ಕಾರಣ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಬಿರು ಬೇಸಿಗೆಯ ಕಾರಣ ನೀರಿನ ಕೊರತೆ ಉಂಟಾಗಿ ತರಕಾರಿ ಬೆಳೆ ಒಣಗಿದೆ. ಬೆಳೆಯಬೇಕಾದ ರೈತ ಸಹ ಮಳೆಗಾಗಿ ಕಾದು ಕುಳಿತಿದ್ದಾರೆ.

ಮತ್ತೊಂದು ಕಡೆ ಕಳೆದ 15 ದಿನಗಳಿಂದ ವಿವಿಧ ಜಿಲ್ಲೆಗಳಲ್ಲಿ ಸುರಿದ ಪೂರ್ವ ಮುಂಗಾರು ಮಳೆಯೂ ತರಕಾರಿಗಳ ಬೆಲೆ ಏರಿಕೆಗೆ ಕಾರಣ. ಗಾಳಿ, ಅಲಿಕಲ್ಲು ಸಹಿತ ಗುಡುಗು, ಸಿಡಿಲಿನ ಮಳೆ ಬೆಳೆದು ನಿಂತಿದ್ದ ತರಕಾರಿ ಬೆಳೆಗೆ ಹಾನಿ ಮಾಡಿದೆ. ಆದ್ದರಿಂದ ಮಾರುಕಟ್ಟೆಗೆ ಬರಬೇಕಿದ್ದ ಬೆಳೆ ನೆಲ ಕಚ್ಚಿದೆ.
ಕಳೆದ ವಾರ ಬೀನ್ಸ್ ಬೆಲೆ 55 ರಿಂದ 60 ರೂ. ಇತ್ತು. ಈ ವಾರಾಂತ್ಯಕ್ಕೆ 70 ರೂ.ಗೆ ಏರಿಕೆಯಾಗಿದೆ. ಕ್ಯಾರೆಟ್ ಬೆಲೆ 60 ರಿಂದ 87 ರೂ. ತಲುಪಿದೆ. ಆಲೂಗೆಡ್ಡೆ ಬೆಲೆ 10 ರೂ. ಹೆಚ್ಚಳವಾಗಿದೆ. ಬದನೆ ಕಾಯಿ ಬೆಲೆ 42 ಇದ್ದಿದ್ದು, 50 ರೂ. ತನಕ ಏರಿದೆ. ಮುಂದಿನ ವಾರವೂ ಬೆಲೆ ಇಳಿಕೆಯಾಗುವ ಸಾಧ್ಯತೆ ಇಲ್ಲ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.
ದಾವಣಗೆರೆ, ಚಿಕ್ಕಮಗಳೂರು, ಕೊಡಗು, ಕೊಡಗು, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ. ವಿವಿಧ ಜಿಲ್ಲೆಗಳಲ್ಲಿ ಭತ್ತ, ಬಾಳೆ ಬೆಳೆಗೆ ಸಹ ಹಾನಿಯಾಗಿದೆ. ಆದ್ದರಿಂದ ಮುಂದಿನ ದಿನಗಲ್ಲಿ ಬಾಳೆ ಹಣ್ಣು, ಅಕ್ಕಿಯ ಬೆಲೆಗಳಲ್ಲೂ ಏರಿಕೆಯಾಗುವ ನಿರೀಕ್ಷೆ ಇದೆ.
ವಿವಿಧ ಜಿಲ್ಲೆಗಳಿಂದ ತರಕಾರಿ, ಹಣ್ಣುಗಳು ನೇರವಾಗಿ ಎಪಿಎಂಸಿಗೆ ಬರುತ್ತವೆ. ಅಲ್ಲಿಂದ ಚಿಕ್ಕಪುಟ್ಟ ವ್ಯಾಪಾರಿಗಳು, ತಳ್ಳುಗಾಡಿಯವರು ತಂದು ಮಾರಾಟ ಮಾಡುತ್ತಾರೆ. ಆದರೆ ಅಲ್ಲಿಯೇ ದರ ಹೆಚ್ಚಳವಾಗಿರುವ ಕಾರಣ ಕೆಲವು ತರಕಾರಿಗಳನ್ನು ವ್ಯಾಪಾರಿಗಳು ಖರೀದಿ ಮಾಡುವುದನ್ನೇ ಸ್ಥಗಿತ ಮಾಡಿದ್ದಾರೆ.
ಚಿಕ್ಕ ಅಂಗಡಿಗಳು, ತಳ್ಳುಗಾಡಿಗೆ ಹೋಲಿಕೆ ಮಾಡಿದರೆ ಹಾಪ್ಕಾಮ್ಸ್ಗಳಲ್ಲಿ ದರ ಹೆಚ್ಚಾಗಿಯೇ ಇರುತ್ತದೆ. ಈಗ ಹಲವು ಸಮಾರಂಭಗಳು ಸಹ ನಡೆಯುತ್ತಿದ್ದು, ತರಕಾರಿಕೊಳ್ಳಲು ಹೋದ ಜನರು ಬೆಲೆ ಕೇಳಿ ಹೌಹಾರಿದ್ದಾರೆ. ಜೂನ್ 5ರ ಬಳಿಕ ರಾಜ್ಯಲ್ಲಿ ನೈಋತ್ಯ ಮುಂಗಾರು ಮಳೆ ಆರಂಭವಾಗಲಿದೆ. ಕೃಷಿ ಚಟುವಟಿಕೆಗಳು ಬಿರುಸುಗೊಳ್ಳಲಿವೆ. ಆಗ ರೈತರು ಪುನಃ ತರಕಾರಿ ಬೆಳೆದು ಅವರು ಮಾರುಕಟ್ಟೆಗೆ ಬರಲಿವೆ.












Click it and Unblock the Notifications