ರಾಹುಲ್ ಗಾಂಧಿ ದೃಢ ಹೆಜ್ಜೆ ಇಡಲಿ : ಸಿದ್ದರಾಮಯ್ಯ
ಬೆಂಗಳೂರು, ನ. 17: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಹಾಗೂ ಪ್ರಭಾವ ಹೆಚ್ಚುತ್ತಿದೆ. ಈ ಸನ್ನಿವೇಷವನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ನ ಪ್ರಧಾನಿ ಅಭ್ಯರ್ಥಿ ಎನ್ನಿಸಿರುವ ರಾಹುಲ್ ಗಾಂಧಿ ಇನ್ನಷ್ಟು ದೃಢ ಹೆಜ್ಜೆ ಇಡಬೇಕು ಹಾಗೂ ಜನರೊಂದಿಗೆ ಹೆಚ್ಚು ಹೆಚ್ಚು ಬೆರೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಎಕಾನಾಮಿಕ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಸಿದ್ದರಾಮಯ್ಯ ಈ ಸಲಹೆ ನೀಡಿದ್ದಾರೆ. ದೇಶಾದ್ಯಂತ ಕಾಂಗ್ರೆಸ್ ವರ್ಚಸ್ಸು ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಈಚೆಗಷ್ಟೇ ಪಕ್ಷದ ಪ್ರಮುಖರಿಂದ ರಾಹುಲ್ ಗಾಂಧಿ ಸಲಹೆ ಕೋರಿದ್ದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅಭಿಪ್ರಾಯ ಮಹತ್ವ ಪಡೆದುಕೊಂಡಿದೆ. [ರಾಬರ್ಟ್ ವಾದ್ರಾ ಹಿನ್ನೆಲೆ ಇದು]
ಸೋನಿಯಾ ನಾಯಕತ್ವ ಬೇಕು: ಪ್ರಿಯಾಂಕಾ ವಾದ್ರಾ ರಾಜಕೀಯಕ್ಕೆ ಬರಬೇಕೆಂಬ ವಾದಕ್ಕೆ ಸಹಮತ ವ್ಯಕ್ತಪಡಿಸಲು ನಿರಾಕರಿಸಿರುವ ಸಿದ್ದರಾಮಯ್ಯ, ಕೇವಲ ಒಂದು ಸೋಲಿನ ಕಾರಣದಿಂದ ಸೋನಿಯಾ ಗಾಂಧಿ ಅವರು ಪಕ್ಷದ ನಾಯಕತ್ವದಿಂದ ಹಿಂದೆ ಸರಿಯಬಾರದೆಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ರಾಹುಲ್ ಗಾಂಧಿ ಜನರೊಂದಿಗೆ ಇನ್ನಷ್ಟು ಬೆರೆಯಬೇಕು ಎಂದು ಸಲಹೆ ನೀಡಿದ್ದನ್ನು ನೆನಪಿಸಿಕೊಳ್ಳಬಹುದು.