ಜಾಮೀನು ಅರ್ಜಿ ವಾಪಸ್ ಪಡೆದ ರಾಗಿಣಿ ದ್ವಿವೇದಿ
ಬೆಂಗಳೂರು, ಸೆಪ್ಟೆಂಬರ್ 07 : ನಟಿ ರಾಗಿಣಿ ದ್ವಿವೇದಿಯನ್ನು 5 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಿ 1ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಷರತ್ತು ಬದ್ಧ ಜಾಮೀನು ನೀಡುವಂತೆ ಕೋರಿ ಸಲ್ಲಿಕೆ ಮಾಡಿರುವ ಅರ್ಜಿಯ ವಿಚಾರಣೆ ಇನ್ನೂ ನಡೆಯಬೇಕಿದೆ.
ಸೋಮವಾರ ಸಿಸಿಬಿ ಪೊಲೀಸರು ರಾಗಿಣಿ ದ್ವಿವೇದಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶ ಜಗದೀಶ್ ಅವರು ಸಿಸಿಬಿ ಪರ ವಕೀಲರ ವಾದವನ್ನು ಆಲಿಸಿದರು.
ಸಿಸಿಬಿ ಪೊಲೀಸರು ರಾಗಿಣಿ ದ್ವಿವೇದಿಯನ್ನು ಶುಕ್ರವಾರ ಸಂಜೆ ಬಂಧಿಸಿದ್ದರು. ಆದ್ದರಿಂದ, ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಕೀಲರು ವಾಪಸ್ ಪಡೆದರು. ನ್ಯಾಯಾಲಯದ ಮುಂದೆ ಷರತ್ತುಬದ್ಧ ಜಾಮೀನು ನೀಡುವಂತೆ ಹೊಸ ಅರ್ಜಿ ಸಲ್ಲಿಸಿದರು.

ಆದರೆ, ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ 10 ದಿನ ವಶಕ್ಕೆ ನೀಡುವಂತೆ ಮನವಿ ಮಾಡಿದರು. ವಿಚಾರಣೆಗೆ ಸಹಕಾರ ನೀಡುತ್ತಿಲ್ಲ, ವಿಚಾರಣೆ ಬಾಕಿ ಇದೆ ಎಂದು ವಾದ ಮಂಡಿಸಿದರು. ನ್ಯಾಯಾಲಯ 5 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿತು.
ಸಿಸಿಬಿ ಪರ ವಕೀಲರು ವಾದ ಮಂಡಿಸುವಾಗ ನಟಿ ರಾಗಿಣಿ ಪರ ವಕೀಲರು ನ್ಯಾಯಾಲಯದಲ್ಲಿ ಇರಲಿಲ್ಲ. ಮುಂಬೈ ಮೂಲದ ವಕೀಲರು ರಾಗಿಣಿ ಪರವಾಗಿ ವಾದ ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದ ರಾಗಿಣಿ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿತ್ತು. ಶುಕ್ರವಾರದ ತನಕ ಪೊಲೀಸರ ವಶಕ್ಕೆ ನೀಡಿರುವ ಹಿನ್ನಲೆಯಲ್ಲಿ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯುವುದಿಲ್ಲ.












Click it and Unblock the Notifications