ಮೊಯ್ಲಿ ರಫೇಲ್ ದಾಳಿಗೆ ತೇಪೆ ಹಚ್ಚಿ ಚಿದಂಬರಂ ಕೇಳಿದ 7 ಪ್ರಶ್ನೆಗಳು!
ನವದೆಹಲಿ, ಡಿಸೆಂಬರ್ 21: ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ವಾಯುಪಡೆ ಮುಖ್ಯಸ್ಥರನ್ನು ದೂರಿದ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಅವರ ಹೇಳಿಕೆಗೆ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ತೇಪೆ ಹಚ್ಚುವ ಕಾರ್ಯ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ, 'ವಾಯುಪಡೆಯ ಮುಖಂಡರನ್ನು ಯಾರೂ ಆರೊಪಿ ಎಂದು ಹೇಳಿಲ್ಲ, ಸೇನೆ ಮತ್ತು ವಾಯುಪಡೆಯ ಅಧಿಕಾರಿಗಳು ಈ ಚರ್ಚೆಯಿಂದ ದೂರವಿರುವುದೇ ಒಳಿತು ಎಂಬುದು ನನ್ನ ಗೌರವಪೂರ್ವಕ ಮನವಿ' ಎಂದು ಸೇನಾ ವಿಭಾಗಗಳಲ್ಲಿ ಮನವಿ ಮಾಡಿದ್ದಾರೆ.
ಅಷ್ಟೇ ಅಲ್ಲ, ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಏಳುವ ಕೆಲವು ಪ್ರಶ್ನೆಗಳನ್ನು ಉಲ್ಲೇಖಿಸಿರುವ ಅವರು ಅದಕ್ಕೆ ಕೇಂದ್ರ ಸರ್ಕಾರದ ಉತ್ತರ ಬಯಸಿದ್ದಾರೆ.
ಮೊಯ್ಲಿ ರಫೇಲ್ ದಾಳಿಗೆ ತೇಪೆ ಹಚ್ಚಿ, ಪಿ. ಚಿದಂಬರಂ ಕೇಳಿದ 7 ಪ್ರಶ್ನೆಗಳು ಇಲ್ಲಿವೆ.

ಹಳೇ ಒಪ್ಪಂದ ರದ್ದು ಮಾಡಿದ್ದೇಕೆ?
2012 ರ ಡಿಸೆಂಬರ್ ನಲ್ಲಿ ಆಗಿನ ಯುಪಿಎ ಸರ್ಕಾರ ಮತ್ತು ಫ್ರಾನ್ಸ್ ಸರ್ಕಾರ ಒಪ್ಪಂದಕ್ಕೆ(ಎಂಒಯು) ಸಹಿ ಮಾಡಿತ್ತು. ಅದರ ಪ್ರಕಾರ 126 ರಫೇಲ್ ಟ್ವಿನ್ ಇಂಜಿನ್ ಮಲ್ಟಿ ರೋಲ್ ಫೈಟರ್ ವಿಮಾನವನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು. ಒಂದು ಯುದ್ಧ ವಿಮಾನಕ್ಕೆ 526.10 ಕೋಟಿ ರೂ. ವೆಚ್ಚವಾಗುತ್ತಿತ್ತು. ಒಟ್ಟು 18 ಯುದ್ಧ ವಿಮಾನಗಳನ್ನು ಫ್ರಾನ್ಸ್ ನಿಂದ ಖರೀದಿಸಿ, ಉಳಿದವನ್ನು(108) ಫ್ರಾನ್ಸ್ ನ ಡಸಾಲ್ಟ್ ತಂತ್ರಜ್ಞಾನ ಬಳಸಿ ಬೆಂಗಳೂರಿನ ಎಚ್ ಎಎಲ್ ನಲ್ಲೇ ತಯಾರಿಸಲು ಒಪ್ಪಂದವಾಗಿತ್ತು. ಆದರೆ 2015 ರ ಮಾರ್ಚ್ ನಲ್ಲಿ ಪ್ರಧಾನಿಯವರು ಈ ಒಪ್ಪಂದವನ್ನು ರದ್ದು ಮಾಡಿದರು. ಹಳೆಯ ಒಪ್ಪಂದವನ್ನು ರದ್ದು ಮಾಡಿ, ಹೊಸ ಒಪ್ಪಂದವನ್ನು ಮಾಡಿಕೊಳ್ಳುವ ಅಗತ್ಯವೇನಿತ್ತು? - ಪಿ.ಚಿದಂಬಂರಂ

126 ರ ಬದಲು 36 ವಿಮಾನ ಏಕೆ?
ನಮಗೆ ರಫೇಲ್ ಬಗ್ಗೆ ತಕರಾರಿಲ್ಲ. ನಾವು 126 ಯುದ್ಧವಿಮಾನಗಳನ್ನು ಖರೀದಿ ಮಾಡಲು ಯುಪಿಎ ಸರ್ಕಾರದ ಅವಧಿಯಲ್ಲಿ ಒಪ್ಪಂದ ಮಾಡಿಕೊಂಡಿದ್ದೆವು. ಆದರೆ ಇದೀಗ ಎನ್ ಡಿಎ ಸರ್ಕಾರ ಕೇವಲ 36 ಯುದ್ಧ ವಿಮಾನಗಳನ್ನು ಖರೀದಿಸುತ್ತಿದೆ. ನಮಗೆ 126 ಯುದ್ಧ ವಿಮಾನಗಳ ಅಗತ್ಯವಿರುವಾಗ ನೀವು ಮೂವತ್ತಾರಷ್ಟನ್ನೇ ತರಿಸುವುದು ಏಕೆ? - ಪಿ ಚಿದಂಬರಂ

ಬೆಲೆಯಲ್ಲಿ ಬದಲಾವಣೆ ಏಕೆ?
ಸರ್ಕಾರ ಅದೇ ಕಂಪನಿಯಿಂದ, ಅದೇ ಕಾನ್ಫಿಗರೇಶನ್ ಹೊಂದಿರುವ, ಅದೇ ಯುದ್ಧವಿಮಾನವನ್ನು ಖರೀದಿಸುತ್ತಿದ್ದರೂ, 1670 ರೂ.ಗಳನ್ನು ಹೇಳುತ್ತಿರುವುದೇಕೆ? ಬೆಲೆಯಲ್ಲಿ ಬದಲಾವಣೆಯಾಗಿದ್ದು ಸತ್ಯವಾದರೆ, ಇದನ್ನು ನೀವು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?- ಪಿ ಚಿದಂಬಂರಂ

ಬೆಲೆ ಕಡಿಮೆಯಾಗಿದ್ದರೆ ಹೆಚ್ಚು ಖರೀದಿ ಮಾಡುತ್ತಿಲ್ಲವೇಕೆ?
ಸರ್ಕಾರ ಹೇಳುವಂತೆ, ಅದು ಮೊದಲ ಒಪ್ಪಂದಕ್ಕಿಂತ 9 ಪ್ರತಿಶತ ಕಡಿಮೆ ದರದಲ್ಲಿ ಯುದ್ಧ ವಿಮಾನ ಖರೀದಿಸುತ್ತಿದೆ. ಅದು ಸತ್ಯವೇ ಆಗಿದ್ದರೆ ನಮಗೆ ಅತ್ಯಗತ್ಯವಿರುವ 126 ಯುದ್ಧ ವಿಮಾನಗಳ ಬದಲಿಗೆ 36 ಯುದ್ಧ ವಿಮಾನವಷ್ಟೇ ಖರೀದಿ ಮಾಡುತ್ತಿರುವುದೇಕೆ?

ತುರ್ತು ಖರೀದಿ ಎಂದರೆ ಹೇಗೆ?
ಸರ್ಕಾರ ಹೇಳುವಂತೆ ಈ ಯುದ್ಧ ವಿಮಾನಗಳನ್ನು ತುರ್ತು ಖರೀದಿಯಾಗಿ ಖರೀದಿಸಲಾಗುತ್ತಿದೆ. ಆದರೆ ಮೊದಲ ಯುದ್ಧ ವಿಮಾನವನ್ನು ಸೆಪ್ಟೆಂಬರ್ 2019 ರಂದು ಮತ್ತು ಕೊನೆಯದನ್ನು 2022 ರಲ್ಲಿ ನೀಡುವುದಾಗಿ ಹೇಳಲಾಗಿದೆ. ಒಪ್ಪಂದವಾಗಿ ನಾಲ್ಕು ವರ್ಶಃಸದ ನಂತರ ಇದು ಸಿಗುವುದಾದರೆ ಇದನ್ನು 'ತುರ್ತು ಖರೀದಿ' ಎಂದು ಹೇಗೆ ವ್ಯಾಖ್ಯಾನಿಸುತ್ತೀರಿ?- ಪಿ ಚಿದಂಬರಂ

ಎಚ್ ಎ ಎಲ್ ನಿಂದ ಕಿತ್ತುಕೊಂಡಿದ್ದು ಏಕೆ?
ಎಚ್ ಎಎಲ್ ಗೆ ವಿಮಾನ ತಯಾರಿಕೆಯಲ್ಲಿ 77 ವರ್ಷಗಳ ಅನುಭವವಿತ್ತು. ಒಪ್ಪಂದ ಮಾಡಿಕೊಳ್ಳುವ ಸಮಯದಲ್ಲಿ ಡಸಾಲ್ಟ್ ಹೆಸರೇ ಇರಲಿಲ್ಲ. ಆದರೆ ನಂತರ ಆದರೆ ಎಚ್ ಎಎಲ್ ಹೆಸರು ತೆಗೆದು ಡಸಾಲ್ಟ್ ಅನ್ನು ಆಯ್ಕೆ ಮಾಡಿದ್ದು ಏಕೆ? - ಪಿ ಚಿದಂಬರಂ

ಎಚ್ ಎಎಲ್ ಹೆಸರನ್ನು ಸೂಚಿಸದಿದ್ದುದು ಏಕೆ?
ಫ್ರಾನ್ಸ್ ನ ಹೊಲೆಂಡ್ ಹೇಳಿರುವಂತೆ ಆಫ್ಸೆಟ್ ಪಾರ್ಟ್ನರ್ ಆಗಿ ಖಾಸಗಿ ಕಂಪನಿಯೊಂದರ ಹೆಸರನ್ನು ಅನ್ನು ಭಾರತ ಸರ್ಕಾರವೇ ಸೂಚಿಸಿದೆ. ಆದರೆ ಈ ಆರೋಪವನ್ನು ಸರ್ಕಾರ ಅಲ್ಲಗಳೆದಿದೆ. ಖಾಸಗಿ ಕಂಪನಿಯ ಹೆಸರನ್ನು ಸರ್ಕಾರ ಸೂಚಿಸಿಲ್ಲವೆಂದಾದರೆ ಎಚ್ ಎಎಲ್ ಹೆಸರನ್ನು ಸೂಚಿಸದಿರುವುದು ಏಕೆ? -ಪಿ ಚಿದಂಬರಂ












Click it and Unblock the Notifications