ಕೈದಿಗಳ ಮಾನಸಿಕ ಖಿನ್ನತೆ ಪರಿಹಾರಕ್ಕೆ ಪರಪ್ಪನ ಅಗ್ರಹಾರದಲ್ಲಿ ಹೊಸ ವ್ಯವಸ್ಥೆ
ಬೆಂಗಳೂರು, ಅಕ್ಟೋಬರ್ 16: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 'ಬೆಂಗಳೂರು ರೇಡಿಯೋ' ಸಮುದಾಯ ರೇಡಿಯೋ ಆರಂಭಿಸಲಾಗುತ್ತಿದೆ.
ಕಾರಾಗೃಹಗಳು ಮತ್ತು ಸುಧಾರಣಾ ಸೇವೆಗಳ ಇಲಾಖೆ ಮತ್ತು ಮೈಂಡ್ ಟ್ರೀ ಫೌಂಡೇಷನ್ ಜಂಟಿಯಾಗಿ ಆರಂಭಿಸುತ್ತಿವೆ.
ಕೈದಿಗಳ ಮಾನಸಿಕ ಖಿನ್ನತೆ ಹೋಗಲಾಡಿಸಲು ಮತ್ತು ಸಕಾರಾತ್ಮಕ ಚಿಂತನೆ ಮೂಡುವ ಪರಿಸರ ಸೃಷ್ಟಿಸಲು ರೇಡಿಯೋ ಆರಂಭಿಸಲಾಗುತ್ತಿದೆ.

ಕೈದಿಗಳು ತಮ್ಮ ಸುತ್ತಮುತ್ತಲ ಜನರ ಜೊತೆಗೆ ಮತ್ತು ಪ್ರೀತಿ ಪಾತ್ರರೊಂದಿಗೆ ಭಾವನಾತ್ಮಕ ಸಂಪರ್ಕಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಕೈದಿಗಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಹೊರತರುವ ವೇದಿಕೆ ನೀಡುವುದು ಮುಖ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ ಪ್ರಾರ್ಥನೆ, ವಾರ್ತೆಗಳು, ಆರ್ಜೆ ಮಾತು , ಹಳೇ ಹಾಡುಗಳು, ಕನ್ನಡ ಚಲನಚಿತ್ರ ಗೀತೆಗಳು, ಮೇರಾವಾವಾ ಗಾನಾ, ಗಣ್ಯರ ಸಂದರ್ಶನ, ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಇದಲ್ಲದೆ , ಮೈಂಡ್ ಟ್ರೀ ಪೌಂಡೇಶನ್ ಕಡೆಯಿಂದ ಕೈದಿಗಳಿಗೆ ಜೀವನೋಪಾಯ ತರಬೇತಿ ಶಿಬಿರ ಏರ್ಪಡಿಸಲಾಗುತ್ತಿದೆ.
24 ಕಡೆ ಸ್ಪೀಕರ್ ಅಳವಡಿಕೆ: ಮೈಂಡ್ ಟ್ರೀ ಫೌಂಡೇಶನ್ ಮತ್ತು ರೇಡಿಯೋ ಸಿಟಿ ಎಫ್ಎಂ 91.1 ಸಂಸ್ಥೆ ಕೈದಿಗಳು ಮತ್ತು ಜೈಲು ಸಿಬ್ಬಂದಿ ಸೇರಿ 40 ಜನರಿಗೆ ತರಬೇತಿ ನೀಡಿದ್ದಾರೆ. ಪ್ರತಿ ಕೈದಿಗಳು ಕೇಳಿಸುವಂತೆ ಜೈಲಿನ ಪ್ರಮುಖ ಸ್ಥಳಗಳಲ್ಲಿ 24 ಸ್ಪೀಕರ್ ಅಳವಡಿಸಲಾಗುತ್ತಿದೆ. ರೇಡಿಯೋದಲ್ಲಿ ಪ್ರತಿದಿನ ವಿವಿಧ ಕಾರ್ಯಕ್ರಮ ಪ್ರಸಾರವಾಗಲಿವೆ.












Click it and Unblock the Notifications