ನಾನು ಬಂದ್ ಹೋದ್ಮೇಲೆ ಗಲಾಟೆ ಆಗ್ತಿದೆ: ಸಿದ್ದರಾಮಯ್ಯ
ಬೆಂಗಳೂರು, ಡಿಸೆಂಬರ್ 12: ನಿನ್ನೆ(ಡಿಸೆಂಬರ್ 12) ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಅವರು ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಅನೌಪಚಾರಿಕ ಮಾತುಕತೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮುಗಲಭೆ ಬಗ್ಗೆ ಹಾರಿಕೆ ಉತ್ತರ ನೀಡಿರುವ ವಿಡಿಯೊ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.
ಸಚಿವ ಸಂಪುಟ ಸಭೆಗೂ ಮುನ್ನಾ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿಗಳನ್ನು ಆರ್.ವಿ.ದೇಶಪಾಂಡೆ ಭೇಟಿ ಮಾಡಿದಾಗ ಸಿದ್ದರಾಮಯ್ಯ ಅವರು "ಏನ್ರಿ ನಿಮ್ಮ ಜಿಲ್ಲೆಯಲ್ಲಿ ಗಲಾಟೆ, ನಾನು ಬಂದು ಹೋದ್ಮೇಲೆ ಶುರುವಾಗಿದೆ' ಎಂದು ಅನೌಪಚಾರಿಕವಾಗಿ ಪ್ರಶ್ನಿಸಿದ್ದಾರೆ.
ರಾಷ್ಟ್ರಭಕ್ತರ ಹೆಣಗಳ ಮೇಲೆ ಸಿಎಂ ರಾಜಕಾರಣ: ಬಿಜೆಪಿ ಆಕ್ರೋಶ
ಆಕಸ್ಮಿಕವಾಗಿ ಮುಖ್ಯಮಂತ್ರಿಗಳಿಂದ ತೂರಿಬಂದ ಪ್ರಶ್ನೆಗೆ ಸ್ವಲ್ಪ ಗಲಿಬಿಲಿಗೊಂಡಂತೆ ಕಂಡುಬಂದ ಆರ್.ವಿ.ದೇಶಪಾಂಡೆ, ಗಲಭೆಯ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡದೆ, ಅಥವಾ ಗಲಭೆ ನಿಯಂತ್ರಿಸಲು ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ವಿವರಿಸದೆ 'ಹಾಗೆನಿಲ್ಲ ಬಿಡಿ' ಎಂದು ಹಾರಿಕೆ ಉತ್ತರ ನೀಡಿದ್ದಾರೆ.
ನಂತರ ಸಿದ್ದರಾಮಯ್ಯ ಅವರು ಅದೇ ಧಾಟಿಯಲ್ಲಿ ಮಾತು ಮುಂದುವರೆಸಿ ಗಲಭೆಗೆ ರಾಜಕೀಯ ಕೋನ ನೀಡಿ, 'ನಾನು ಬಂದು ಹೋದ ಮೇಲೆ ಗಲಾಟೆ ಆಗ್ತಿದೆ, ನೀನು ಕಾರ್ಯಕ್ರಮ ಚೆನ್ನಾಗಿ ಮಾಡಿದೆಯಲ್ಲಾ ಅದಕ್ಕೆ ಹೊಟ್ಟೆ ಉರಿ ಅವ್ರಿಗೆ' ಎಂದಿದ್ದಾರೆ.
ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದ ಮುಖ್ಯಮಂತ್ರಿಗಳು ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು, ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದೇಶಪಾಂಡೆ ಮುಖ್ಯಮಂತ್ರಿಗಳ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು. ಮುಖ್ಯಮಂತ್ರಿಗಳು ಜಿಲ್ಲೆಗೆ ಬಂದು ಹೋದ ಮೇಲೆ ಕಾಕತಾಳೀಯವೋ, ಉದ್ದೇಶಪೂರ್ವಕವೊ ಕೋಮು ಗಲಾಟೆ ಪ್ರಾರಂಭವಾಯಿತು.
ಆದರೆ ಸಿದ್ದರಾಮಯ್ಯ ಅವರು ದೇಶಪಾಂಡೆ ಅವರೊಂದಿಗೆ ಮಾತನಾಡಿದ ಮಾತಿನ ಭಾವ ಮಾತ್ರ ಬಿಜೆಪಿ ಪ್ರೇರಿತವಾಗಿ ಗಲಭೆ ಆಗುತ್ತಿದೆ ಎಂಬಂತೆ ಇತ್ತು.