ಗಣ್ಯರಿಗೆ ಭದ್ರತೆ: ಪ್ರಾಮಾಣಿಕ ಪೊಲೀಸರಿಗಾಗಿ ಹುಡುಕಾಡುತ್ತಿರುವ ಇಲಾಖೆ?
ಬೆಂಗಳೂರು, ಜ. 21: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆ ಭದ್ರತೆಗೆ ನಿಯೋಜಿಸಿದ್ದ ಪೇದೆಗಳು ಗಾಂಜಾ ಡೀಲಿಂಗ್ ಕೇಸಿನಲ್ಲಿ ಜೈಲಿಗೆ ಹೋದ ಬಳಿಕ ಗಣ್ಯರ ಮನೆಗಳ ಭದ್ರತೆಗೆ ಪ್ರಾಮಾಣಿಕ ಪೊಲೀಸರನ್ನು ನಿಯೋಜಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಇದೀಗ ಪ್ರಾಮಾಣಿಕ ಪೊಲೀಸ್ ಕಾನ್ಸ್ಟೇಬಲ್ಗಳಿಗೆ ಮತ್ತು ಅಧಿಕಾರಿಗಳಿಗಾಗಿ ಗೃಹ ಇಲಾಖೆ ಹುಡುಕಾಟ ನಡೆಸುತ್ತಿದೆ.
ಆರ್. ಟಿ. ನಗರದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ ಕೋರಮಂಗಲ ಠಾಣೆ ಪೊಲೀಸ್ ಸಿಬ್ಬಂದಿ ಸಂತೋಷ್ ಮತ್ತು ಶಿವಕುಮಾರ್ ಗಾಂಜಾ ಪೆಡ್ಲರ್ಗಳಿಗೆ ಹಣ ನೀಡದೇ ಜಗಳ ಮಾಡಿ ಆರ್.ಟಿ. ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಸರ್ಕಾರಕ್ಕೆ ಮುಜುಗರಕ್ಕೆ ಈಡು ತಂದಿಟ್ಟಿತ್ತು. ಪೊಲೀಸ್ ಇಲಾಖೆಯ ಗೌರವಕ್ಕೂ ಕೂಡ ಧಕ್ಕೆ ಬಂದಿತ್ತು.
ಇನ್ನು ಈ ಪ್ರಕರಣ ತನಿಖೆ ನಡೆಸಿದ್ದ ಆರ್.ಟಿ. ನಗರ ಪೊಲೀಸ್ ಇನ್ಸ್ಪೆಕ್ಟರ್ ಅಶ್ವತ್ಥ್ ಗೌಡ ಮತ್ತು ಪಿಎಸ್ಐ ವೀರಭದ್ರ ಸರಿಯಾಗಿ ತನಿಖೆ ನಡೆಸದೆ ಮತ್ತೊಂದು ಎಡವಟ್ಟು ಮಾಡಿದ್ದರು. ಬಂಧಿತ ಪೇದೆಗಳು ಎರಡೇ ದಿನಕ್ಕೆ ಜಾಮೀನು ಪಡೆದಿದ್ದರು. ಹೀಗಾಗಿ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಆದೇಶಿಸಿದ್ದರು. ಅಲ್ಲದೇ ಡಿಸಿಪಿ ಮತ್ತು ಎಸಿಪಿ ದರ್ಜೆ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿತ್ತು. ಇದು ಪೊಲೀಸ್ ಇಲಾಖೆ ತಲೆ ತಗ್ಗಿಸುವಂತೆ ಮಾಡಿತ್ತು. ಇದರಿಂದ ಸ್ವತಃ ಮುಖ್ಯಮಂತ್ರಿಯೇ ಮುಜುಗರಕ್ಕೀಡಾಗಿದ್ದರು.
ಹೊಸಬರ ನಿಯೋಜನೆಗೆ ಸಿದ್ಧತೆ:
ಮುಂದೆ ಇಂತಹ ಪ್ರಮಾದ ಆಗದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಮದ್ಯಪಾನ ರಹಿತ, ಭ್ರಷ್ಟಾಚಾರ ಆರೋಪ ರಹಿತ ಪೊಲೀಸ್ ಸಿಬ್ಬಂದಿಯನ್ನು ಗಣ್ಯರ ಭದ್ರತೆಗೆ ನಿಯೋಜಿಸಲು ಗೃಹ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಭದ್ರತಾ ಸಿಬ್ಬಂದಿಯನ್ನು ಬದಲಿಸುವ ಕಾರ್ಯಕ್ಕೆ ಪೊಲೀಸ್ ಇಲಾಖೆ ಚಾಲನೆ ಕೊಟ್ಟಿದೆ.
ಸರದಿ ಆಧಾರದ ಮೇಲೆ ಮುಖ್ಯಮಂತ್ರಿ, ಮಂತ್ರಿಗಳು, ನ್ಯಾಯಾಧೀಶರ ಮನೆಯ ಭದ್ರತೆಗೆ ನಿಯೋಜನೆಗೊಳ್ಳುವ ಸಿಬ್ಬಂದಿ ಪೂರ್ವ ಪರ ಪರಿಶೀಲನೆ ನಡೆಸಿ ಅರ್ಹರ ಪಟ್ಟಿಯನ್ನು ಠಾಣಾವಾರು ಸಿದ್ಧಪಡಿಸಿಕೊಳ್ಳಲು ಆಯಾ ಡಿಸಿಪಿಗಳಿಗೆ ಸೂಚಿಸಲಾಗಿದೆ. ಈ ಸಂಬಂಧ ವೈರ್ ಲೆಸ್ ಮೂಲಕವೇ ಇಲಾಖೆಯ ಅಧಿಕಾರಿಗಳಿಗೆ ಸಂದೇಶ ರವಾನಿಸಲಾಗಿದೆ. ಆಗ್ನೇಯ ವಿಭಾಗದ ಡಿಸಿಪಿಯಿಂದ ಈ ಕುರಿತ ಪೊಲೀಸ್ ಇನ್ಸ್ಪೆಕ್ಟರ್ ಗಳಿಗೆ ವೈರ್ ಲೆಸ್ ಮೂಲಕ ಸಂದೇಶ ರವಾನಿಸಿದ್ದು, ಪೊಲೀಸ್ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ.
ರಾಜ್ಯಪಾಲರು, ಮುಖ್ಯಮಂತ್ರಿ, ಗೃಹ ಸಚಿವರು, ನ್ಯಾಯಾಧೀಶರಿಗೆ ಕಳಂಕ ರಹಿತ ಇನ್ಸ್ಪೆಕ್ಟರ್, ಪಿಎಸ್ಐ, ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು. ಯಾವುದೇ ಕೇಸಿನಲ್ಲಿ ಆರೋಪ ಹೊಂದಿರಬಾರದು. ಕುಡಿಯುವ ಚಟಕ್ಕೆ ಬಿದ್ದವರು, ಮಾನಸಿಕ ಅಸಮತೋಲನ ಹೊಂದಿದವರನ್ನು ನೇಮಿಸಬಾರದು. ಕ್ಲೀನ್ ಹ್ಯಾಂಡ್ ಗಳನ್ನು ನಿಯೋಜಿಸಲು ಇದೀಗ ಸಿಬ್ಬಂದಿ ಹಡುಕಾಟದಲ್ಲಿ ತೊಡಗಿದ್ದಾರೆ.