ದುಬಾರಿ ಬೆಂಗಳೂರು: ತೆರಿಗೆ ಸಂಗ್ರಹಕ್ಕೆ ತಕ್ಕಂತೆ ಮೂಲಸೌಕರ್ಯ ಇಲ್ಲ: ಆರ್.ಅಶೋಕ್
ಬೆಂಗಳೂರು, ನವೆಂಬರ್ 08: ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಜನರಿಂದ ತೆರಿಗೆ ಸಂಗ್ರಹ ಮಾಡುತ್ತಿದೆ. ಆದರೆ ರಸ್ತೆಗುಂಡಿ ಮುಚ್ಚಿಸಲ್ಲ, ಕಸ ವಿಲೇವಾರಿ ಮಾಡುತ್ತಿಲ್ಲ. ಹಣ ಸಂಗ್ರಹಿಸುವ ಸರ್ಕಾರ ಅಗತ್ಯ ಮೂಲಭೂತ ಸೌಕರ್ಯವನ್ನು ಜನರಿಗೆ ಒದಗಿಸುವಲ್ಲಿ ವಿಫಲವಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೇವಲ ಗ್ಯಾರಂಟಿಯ ಹೆಸರು ಹೇಳಿಕೊಂಡ ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳಲ್ಲಿ ಬೆಂಗಳೂರಿಗೆ ಅನುದಾನ ನೀಡಿಲ್ಲ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಒಟ್ಟು 1,800 ಕೋಟಿ ರೂಪಾಯಿ ವ್ಯಯಿಸಿ ರಸ್ತೆಗುಂಡಿ ದುರಸ್ತಿ ಮಾಡಿದೆ ಎಂದು ಹೇಳಿಕೊಂಡಿದೆ. ಆದರೆ ಮುಚ್ಚಿದ ಗುಂಡಿಗಳಲ್ಲಿ ಮತ್ತೆ ಗುಂಡಿ ಸೃಷ್ಟಿಯಾಗಿವೆ. ಬೆಂಗಳೂರಿನ ಜನರಿಗೆ ಈ ಸರ್ಕಾರದ ಕಾರ್ಯವೈಖರಿ ದೊಡ್ಡ ಶಾಪವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ವಾರ ಗಡುವು ಕೇಳಿದ್ದಾರೆ. ಈಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕೇಳಿ ಎನ್ನುತ್ತಿದ್ದಾರೆ. ಈ ಸರ್ಕಾರದ ನಡುವೆ ಹೊಂದಾಣಿಕೆಯೇ ಇಲ್ಲದೇ ನಾಯಕರು ಬೇಜವಾಬ್ದಾರಿ ಮಾತುಗಳು ಆಡುತ್ತಿದ್ದಾರೆ ಎಂದು ದೂರಿದರು.

ಜನರಿಗೆ ಇದು ದುಬಾರಿ ಬೆಂಗಳೂರು
ರಸ್ತೆಗುಂಡಿಯಿಂದಾಗಿ ಜನರು ಸಾಯುತ್ತಿದ್ದಾರೆ. ಈ ಬಗ್ಗೆ ಕೂಡಲೇ ಸರ್ಕಾರ ಕ್ರಮ ವಹಿಸಬೇಕಿತ್ತು. ರಸ್ತೆಗಳನ್ನು ದುರಸ್ತಿ ಮಾಡಿಲ್ಲವೆಂದರೆ ಈ ಸರ್ಕಾರ ಸತ್ತುಹೋಗಿದೆ ಎಂದೇ ಹೇಳಬೇಕು. ಜಲಮಂಡಳಿಯವರು ರಸ್ತೆ ಅಗೆದರೆ ನಂತರ ಅದರಲ್ಲೇ ಬೈಕ್ ಹೋಗಬಹುದು. ಇಂತಹ ಸುರಂಗ ಮಾರ್ಗಗಳನ್ನು ಇವರು ತೋಡುತ್ತಿದ್ದಾರೆ. ಪಣತ್ತೂರಿನಲ್ಲೇ ಇದೇ ರೀತಿಯಾಗಿದೆ. ಪಾದಚಾರಿ ಮಾರ್ಗಗಳಲ್ಲೂ ಓಡಾಡಲು ಆಗುತ್ತಿಲ್ಲ. ಬೆಂಗಳೂರನ್ನು ದುಬಾರಿ ಮಾಡಿದ್ದಾರೆ ಎಂದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾದ ನಂತರ ಗುತ್ತಿಗೆದಾರರು ಕೆಲಸ ಮಾಡಲು ಆಗುತ್ತಿಲ್ಲ. ಇದರಿಂದಾಗಿ ರಸ್ತೆ ಬದಿಗಳಲ್ಲಿ ಕಸದ ರಾಶಿ ಕಂಡು ಬರುತ್ತಿದೆ. ಒಂದು ಮನೆಗೆ 720 ರೂಪಾಯಿ ಕಸ ಶುಲ್ಕ ಸಂಗ್ರಹಿಸುತ್ತಿದ್ದಾರೆ. ಅಪಾರ್ಟ್ಮೆಂಟ್ಗಳಿಗೆ 1800 ರೂ. ಇದ್ದ ಶುಲ್ಕವನ್ನು 17,800 ರೂ. ಮಾಡಿದ್ದಾರೆ. ಆಸ್ಪತ್ರೆಗಳಿಗೆ 9600 ರೂ. ಶುಲ್ಕವಿದ್ದು ಅದನ್ನು 2 ಲಕ್ಷ ರೂ. ಮಾಡಿದ್ದಾರೆ. ಹೀಗೆ ಕಸಕ್ಕಾಗಿ ಕೋಟ್ಯಂತರ ಶುಲ್ಕ ಸಂಗ್ರಹಿಸಿದರೂ ಕಸದ ಮುಕ್ತ ಆಗಿಲ್ಲ. ಇದು ಗಾರ್ಬೇಜ್ ಸಿಟಿಯಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ದೇಶದ್ರೋಹಿಗಳಿಗೆ ಅನುಕೂಲವಾಗುತ್ತದೆ. ಜೈಲುಗಳಲ್ಲಿ ಮೊಬೈಲ್, ಸಿಮ್ ಎಲ್ಲವೂ ದೊರೆಯುತ್ತದೆ. ಪರಪ್ಪನ ಅಗ್ರಹಾರ ಉಗ್ರರ ಸ್ವರ್ಗವಾಗಿದೆ ಎಂದರು.












Click it and Unblock the Notifications