ಆತ್ಮಶಕ್ತಿಯೇ ಕೊರೊನಾ ನಿವಾರಣೆಗೆ ಅರ್ಧ ಮದ್ದು: ಮನೋ ವೈದ್ಯ ಡಾ. ಶ್ರೀಧರ್ ಸಲಹೆ
ಬೆಂಗಳೂರು, ಮೇ. 14: ಕೊರೊನಾ ಎರಡನೇ ಅಲೆ ಜನರಲ್ಲಿ ಭೀತಿ ಹುಟ್ಟಿಸಿದೆ. ಕೊರೊನಾ ಸಾವಿನಷ್ಟೇ ಪ್ರಮಾಣದಲ್ಲಿ ಭೀತಿಗೆ ಒಳಗಾಗಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪುತ್ತಿದ್ದಾರೆ. ಕೊರೊನಾ ಸೋಂಕು ಕೇವಲ ಆರೋಗ್ಯದ ಮೇಲೆ ಮಾತ್ರವಲ್ಲ ಮಾನಸಿಕ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಿದೆ. ಕೊರೊನಾ ಲಾಕ್ ಡೌನ್ ನಿಯಮಗಳಿಂದ ಎಷ್ಟೋ ಮಂದಿ ಬದುಕು ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಯಾವ ರೀತಿ ಇರಬೇಕು. ಹೇಗೆ ಮನೋ ಸ್ಥೈರ್ಯ ಕಾಪಾಡಿಕೊಳ್ಳಬೇಕು ಎಂಬುದನ್ನು ಬೆಂಗಳೂರಿನ ಖ್ಯಾತ ಮನೋವೈದ್ಯರಾದ ಡಾ. ಎ. ಶ್ರೀಧರ್ ಅವರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
ಮನೋ ವೈದ್ಯ ಸಂದೇಶ
ಇತ್ತೀಚೆಗೆ ಅನಾಮಿಕ ವೈದ್ಯರೊಬ್ಬರ ಹೆಸರಿನಲ್ಲಿ ಕೋವಿಡ್ ವಿಚಾರದಲ್ಲಿ ಮನೋ ವಿಜ್ಞಾನಿಗಳ ಅನುಭವದ ಮಾತುಗಳ ಹೆಸರಿನಲ್ಲಿ ಕೆಲವು ಮನೋ ವೈದ್ಯಕ್ಕೆ ಸಂಬಂಧಿಸಿದ ಸಂದೇಶಗಳು ಹರಿದಾಡಿದ್ದವು. ಎಲ್ಲರ ವಾಟ್ಸಪ್ ಗ್ರೂಪ್ ಗಳಲ್ಲಿ ಅದು ವೈರಲ್ ಆಗುತ್ತಿತ್ತು. ನಮ್ಮ ದೇಹ ಮೆದುಳಿಗಿಂತಲೂ ಸ್ಟ್ರಾಂಗ್, ಉಸಿರು ತೆಗೆದುಕೊಳ್ಳಲು ಕೊನೆ ವರೆಗೂ ಹೋರಾಟ ಮಾಡುತ್ತದೆ. ಚಿಕಿತ್ಸೆಯಿಂದ ಗುಣ ಆಗುವುದು ಕೇವಲ 30 ರಷ್ಟು ಮಂದಿ ಮಾತ್ರ. ಶೇ. 70 ರಷ್ಟು ಮಂದಿ ಮನೋ ವೈಕಲ್ಯತೆಯಿಂದ ಸಾವಿಗೀಡಾಗುತ್ತಾರೆ. ಧೈರ್ಯವಾಗಿರಿ ನಿಮ್ಮ ದೇಹದ ಮೇಲೆ ನಂಬಿಕೆ ಇಡಿ ಎಂಬ ಸಂದೇಶಗಳು ಹರಿದಾಡಿದ್ದವು. ಈ ಹಿನ್ನೆಲೆಯಲ್ಲಿ ಮನೋ ವೈದ್ಯರಾದ ಡಾ. ಶ್ರೀಧರ್ ಅವರನ್ನು ಈ ಕುರಿತು ಕೇಳಿದಾಗ ಅವರು ನೀಡಿದ ವಾಸ್ತವ ಸಂಗತಿಗಳು.
ಡಾ. ಶ್ರೀಧರ್ ನೀಡಿದ ವಾಸ್ತವ ಸಂಗತಿ
ಆರೋಗ್ಯ ಮತ್ತು ಅನಾರೋಗ್ಯ ವ್ಯಕ್ತಿನ ಮನೋ ಬಲವನ್ನು ಅವಲಂಭಿಸಿರುತ್ತದೆ. ಹದಗೆಡಲು ಈ ಕೊರೊನಾ ಭೀಕರತೆ ಕಾರಣವಾಗಿರಬಹದು. ತೀವ್ರ ಸ್ವರೂಪದ ಕರೊನಾ ಸೋಂಕಿನ ಪರಿಣಾಮ ರೋಗಿ ಮತ್ತು ರೋಗಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಬದಲಿಗೆ ಕುಟುಂಬ, ಸಮುದಾಯ, ನಾಡು, ದೇಶ, ವಿಶ್ವದ ಅರ್ಥವ್ಯವಸ್ಥೆ, ಸಾಂಸ್ಕೃತಿಕ ಹಾಗೂ ನಿತ್ಯ ಜೀವನದ ಮೇಲೂ ಪರಿಣಾಮ ಬೀರುವಂತದ್ದು. ಕೊರೊನಾ ರೋಗದ ವ್ಯಾಪಕತೆಯನ್ನು ತಿಂಗಳಾನುಗಟ್ಟಲೇ ವ್ಯಾಪಿಸಿ ಮುಂದುವರೆಯುತ್ತಿರುವುದರಿಂದ ಜನರು ಮಾನಸಿಕ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳುವುದು ಮಹತ್ವವಾಗುತ್ತದೆ ಎಂದು ಡಾ. ಶ್ರೀಧರ್ ತಿಳಿಸಿದ್ದಾರೆ.
ಸರ್ಕಾರದ ಕ್ರಮ ಮತ್ತು ಬದ್ಧತೆ
ವ್ಯಕ್ತಿಯ ಧೈರ್ಯ ಮತ್ತ ಸ್ತೈರ್ಯ ಅತಿ ಸುಲಭವಾಗಿ ಕುಸಿಯುವಂತೆ ಮಾಡುವುದು ಕೊರೊನಾ ನಿರ್ವಹಣೆ ಕುರಿತ ಕ್ರಮಗಳು. ಒಬ್ಬ ವ್ಯಕ್ತಿಯ ಮಾನಸಿಕ ಬಲಕ್ಕಿಂತಲೂ ವ್ಯವಸ್ಥೆಯನ್ನು ಅವಲಂಭಿಸಿರುತ್ತದೆ. ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ, ಸೂಕ್ತ ಬೆಡ್, ಆಕ್ಸಿಜನ್, ಚಿಕಿತ್ಸೆಯನ್ನು ಸರ್ಕಾರ ನೀಡಿದ್ದೇ ಆಗಿದ್ದಲ್ಲಿ ಈ ರೀತಿಯ ಭೀಕರತೆ ಎದುರಾಗುತ್ತಿರಲಿಲ್ಲ. ಇವತ್ತು ಕೊರೊನಾ ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿರುವುದು ಜನರ ಮಾನಸಿಕ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರಿದೆ. ಜನರಲ್ಲಿ ಕೊರೊನಾ ಕುರಿತ ಭಯ, ಆತಂಕ ಶುರುವಾಗಿದೆ.
ಕೊರೊನಾ ಸೋಂಕನ್ನು ಸರ್ಕಾರ ಸಮರ್ಪಕ ರೀತಿಯಲ್ಲಿ ನಿಭಾಯಿಸಿದ್ದಲ್ಲಿ ಜನರ ಆತ್ಮ ಸ್ತೈರ್ಯ ಕೂಡ ಹೆಚ್ಚಾಗಿಯೇ ಇರುತ್ತಿತ್ತು. ಆದರೆ ರಾಜ್ಯ ಹಾಗೂ ದೇಶದ ಪರಿಸ್ಥಿತಿ ಜನರ ಮಾನಸಿಕ ಆರೋಗ್ಯ ವ್ಯವಸ್ಥೆಯನ್ನೇ ಕುಸಿಯುವಂತೆ ಮಾಡಿದೆ. ವ್ಯಕ್ತಿಯ ದೇಹ ರೋಗ ನಿರೋಧಕ ಶಕ್ತಿ ಹೊಂದಿದೆ ನಿಜ. ಆದರೆ, ಎಲ್ಲಾ ರೋಗಗಳ ಪರಿಸ್ಥಿತಿಯಲ್ಲಿ ಇದು ಜನರ ನೆರವಿಗೆ ಬರಲಾರದು. ಕೊರೊನಾ ದಂತಹ ಅಪಾಯಕಾರಿ ಸಾಂಕ್ರಾಮಿಕ ರೋಗವನ್ನು ಕೇವಲ ಆತ್ಮಸ್ತೈರ್ಯ ವೊಂದರಿಂದಲೇ ಗೆಲ್ಲಲಿಕ್ಕೆ ಸಾಧ್ಯವಿಲ್ಲ. ಇದಕ್ಕೆ ರೋಗ ನಿರೋಧಕ ಮದ್ದುಗಳು, ರೋಗ ನಿಯಂತ್ರಣ ಕ್ರಮಗಳು, ಸಾರ್ವಜನಿಕ ಆರೋಗ್ಯ ಉತ್ತಮಗೊಳಿಸುವ ಸರ್ಕಾರದ ಕ್ರಮ ಮತ್ತು ಬದ್ಧತೆ ಕೂಡ ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
Recommended Video
ಆತ್ಮ ಶಕ್ತಿ - ತಾಳ್ಮೆ ಗುಣ ಬೆಳಿಸಿಕೊಳ್ಳಬೇಕು
ಅದರಲ್ಲೂ ಲಾಕ್ ಡೌನ್ ಪರಿಸ್ಥಿತಿ ಪ್ರತಿಯೊಬ್ಬರ ಚಲನವಲನ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳ ಮೇಲೆ ನಿಯಂತ್ರಣ ಹಾಕಿದೆ. ಇದೊಂದು ಅನಿವಾರ್ಯ ಕ್ರಮ ಆಗಿದ್ದರೂ ವ್ಯಕ್ತಿಗಳ ಮನಸಿನಲ್ಲಿ ಅಸಾಹಕತೆ ಎನ್ನುವಂತಹ ಒತ್ತಡ ತರುತ್ತದೆ. ಈ ಒತ್ತಡ ನಿಭಾಯಿಸುವ ಕೌಶಲ್ಯ, ಸೂಕ್ತ ಮಾರ್ಗದರ್ಶನ ಅಗತ್ಯವಾಗುತ್ತದೆ. ಮನುಷ್ಯನಲ್ಲಿರುವ ವಿಚಾರ ಮಾಡುವ ಗುಣ, ತಾಳ್ಮೆ ಮತ್ತು ಆತ್ಮಶಕ್ತಯಲ್ಲಿ ನಂಬಿಕೆ ಇದ್ದಾಗ ಕಠಿಣ ಪರಿಸ್ಥಿತಿ ಎದುರಿಸುವ ಬಲ ಹೆಚ್ಚಾಗುತ್ತದೆ. ಹೀಗಾಗಿ ರೋಗ ಉಂಟು ಮಾಡುತ್ತಿರುವ ಭಯ, ಭೀತಿ, ಭ್ರಮೆಯ ತೀವ್ರತೆಯನ್ನು ಇಳಿಸುತ್ತದೆ.
ಹೀಗಾಗಿ ಈಗಿನ ಕೊರೊನಾ ಸಂಕಷ್ಟ ಕಾಲದಲ್ಲಿ ಜನರು ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಯಾವುದೇ ಕಠಿಣ ಪರಿಸ್ಥಿತ ನಾನು ಎದುರಿಸಬಲ್ಲೆ ಎಂಬ ಗುಣ ಬೆಳಿಸಿಕೊಳ್ಳಬೇಕು. ಜತೆಗೆ ಯಾವುದೇ ಪರಿಸ್ಥಿತಿ ಬರಲಿ ನೋಡೋಣ ಎಂಬ ತಾಳ್ಮೆ ಕೂಡ ಅತ್ಯವಶ್ಯಕ. ಈ ಮೂಲಕ ತನ್ನ ಆತ್ಮ ಶಕ್ತಿಯನ್ನು ಗಟ್ಟಿಗೊಳಿಸಿಕೊಳ್ಳಬೇಕು. ಮೊದಲು ಮಾನಸಿಕವಾಗಿ ನಾವು ಕೊರೊನಾ ಸೋಂಕನ್ನು ಎದುರಿಸುವ ಶಕ್ತಿ ಬೆಳಿಸಿಕೊಳ್ಳಬೇಕು. ಅಷ್ಟರ ಮಟ್ಟಿಗೆ ಜನರು ಮಾನಸಿಕವಾಗಿ ಗಟ್ಟಿಯಾಗಬೇಕು. ಆದರೆ, ಜನರ ಮನಸು ಗಟ್ಟಿಗೊಳ್ಳಬೇಕಾದರೆ, ನಮ್ಮನ್ನಾಳುವ ಸರ್ಕಾರಗಳು ಕೊರೊನಾ ನಿಯಂತ್ರಿಸುವ ಕ್ರಮಗಳನ್ನು ಸಮರೋಪಾದಿಯಲ್ಲಿ ಮಾಡಬೇಕು. ಈ ಮೂಲಕ ಜನರಲ್ಲಿ ಆತ್ಮಸ್ತೈರ್ಯ ತುಂಬಿದಾಗ ಇಂತಹ ಕೊರೊನಾ ದಂತಹ ಸೋಂಕು ಹತ್ತು ಬಂದರೂ ಜನರೂ ಮಾನಸಿಕವಾಗಿ ಎದುರಿಸಿ ಜಯ ಗಳಿಸಲು ಸಾಧ್ಯವಾಗುತ್ತದೆ ಎಂದು ಡಾ. ಎ. ಶ್ರೀಧರ್ ತಿಳಿಸಿದ್ದಾರೆ.