ಮತಾಂತರ ವಿರೋಧಿ ಮಸೂದೆ ವಿರುದ್ಧ ಕ್ರೈಸ್ತ ಸಮುದಾಯ ಪ್ರತಿಭಟನೆ
ಬೆಂಗಳೂರು, ಡಿಸೆಂಬರ್ 22: ಬೆಳಗಾವಿಯ ಚಳಿಗಾಲದ ವಿಧಾನಸಭೆ ಅಧಿವೇಶನದಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ಅನ್ನು ಮಂಗಳವಾರ ಮಂಡಿಸಲಾಗಿದೆ.
ಆಮಿಷ ಒಡ್ಡಿ ನಡೆಯುವ ಮತಾಂತರಗಳನ್ನು ನಿಷೇಧಿಸುವ ಪ್ರಸ್ತಾವ ಇರುವ 'ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ 2021' ಮಸೂದೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿದರು.
ಕರ್ನಾಟಕದ ಮತಾಂತರ ವಿರೋಧಿ ಮಸೂದೆ ವಿರುದ್ಧ ಬುಧವಾರ ಬೆಂಗಳೂರಿನಲ್ಲಿ ಕ್ರೈಸ್ತ ಸಮುದಾಯದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಕರ್ನಾಟಕ ವಿಧಾನಸಭೆಯಲ್ಲಿ ಇಂದು ಮಸೂದೆಯ ಕುರಿತು ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಚರ್ಚೆ ಮಾಡಲಿದ್ದಾರೆ.

ಸರ್ಕಾರದ ನಿರ್ಧಾರ ನೋವು ತರಿಸಿದೆ
"ಕರ್ನಾಟಕ ಸರ್ಕಾರ ಸಾರ್ವಜನಿಕವಾಗಿ ಚರ್ಚೆಗೆ ಅವಕಾಶವನ್ನೇ ನೀಡದೆ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ. ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ನಮಗೆ ನೋವುಂಟು ಮಾಡಿದೆ," ಎಂದು ಆರ್ಚ್ ಬಿಷಪ್ ಪೀಟರ್ ಮಾಚಾಡೋ ಹೇಳಿದ್ದಾರೆ.
"ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ 2021 ಜಾರಿಯಿಂದ ಕರ್ನಾಟಕಕ್ಕೆ ಏನೂ ಒಳಿತಾಗುವುದಿಲ್ಲ. ಈ ಕುರಿತು ನಾವು ಸಾಕಷ್ಟು ಪ್ರಯತ್ನ-ಪ್ರತಿಭಟನೆ ಮಾಡಿದೆವು. ಮುಖ್ಯಮಂತ್ರಿ ಸೇರಿದಂತೆ ಹಲವರಿಗೆ ಮನವಿ ಸಲ್ಲಿಸಿದ್ದೆವು. ಆದರೆ ಹಠದಿಂದ ಮಸೂದೆಯನ್ನು ಸದನದಲ್ಲಿ ಮಂಡಿಸಲಾಗಿದೆ," ಎಂದು ಆರ್ಚ್ ಬಿಷಪ್ ಪೀಟರ್ ಮಾಚಾಡೋ ಬೇಸರ ವ್ಯಕ್ತಪಡಿಸಿದರು.

"ಈ ಮಸೂದೆಯು ಕರ್ನಾಟಕ ರಾಜ್ಯಕ್ಕೆ ಹಿತಕರ ಅಲ್ಲ. ಸರ್ಕಾರದ ನಿರ್ಧಾರದಿಂದ ವಿಶೇಷವಾಗಿ ಕ್ರೈಸ್ತ ಧರ್ಮಕ್ಕೆ ನೋವುಂಟಾಗಿದೆ. ಮಸೂದೆ ಮಂಡಿಸುವ ಮೊದಲು ಮತಾಂತರ ಅಂದರೆ ಏನು ಎಂದು ಚರ್ಚಿಸಬೇಕಿತ್ತು. ಆದರೆ ಚರ್ಚೆ ಮಾಡಿಲ್ಲ. ಸರ್ಕಾರ ಬಹುಶಃ ನಮಗೆ ಶಿಕ್ಷೆ ಕೊಡಲು ಮುಂದಾಗಿದೆ ಎಂದು ಕಾಣುತ್ತಿದೆ".
ನಾವು ರಾಜ್ಯದಲ್ಲಿ ಸಾವಿರಾರು ಶಾಲೆ- ಆಸ್ಪತ್ರೆಗಳನ್ನು ನಡೆಸುತ್ತಿದ್ದೇವೆ. ಎಲ್ಲಿಯಾದರೂ ಒಂದು ಕಡೆ ಮತಾಂತರವಾಗಿದ್ದರೆ ತಿಳಿಸಿ. ಆಗ ಸರಿಪಡಿಸುತ್ತೇವೆ ಎಂದು ನುಡಿದರು. ನಮ್ಮ ಶಾಲೆಗಳಿಗೆ ಬರುವ ಜನರಿಗೆ ಮತಾಂತರದ ಭಯವಿಲ್ಲ ಆದರೂ ಇಂಥ ನಿರ್ಧಾರವೇಕೆ ಎಂದು ಪ್ರಶ್ನಿಸಿದರು.
ಇನ್ನೇನು ಕ್ರಿಸ್ಮಸ್ ಹಬ್ಬ ಬರುತ್ತದೆ. ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಸುಭಾಶಯಗಳು ಎಂದು ಹಾರೈಸಿದರು. ಕ್ರಿಸ್ಮಸ್ ಜೊತೆಗೆ ನೋವಿನಲ್ಲಿ ಸಂತೋಷ, ಸಂತೋಷದಲ್ಲಿ ನೋವು. ಕ್ರಿಸ್ಮಸ್ ಸಂದರ್ಭದಲ್ಲಿ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸುತ್ತೇವೆ. ನಮ್ಮ ಧಾರ್ಮಿಕ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸುತ್ತೇವೆ ಎಂದರು.












Click it and Unblock the Notifications