ಬೆಂಗಳೂರು-ವಿಜಯವಾಡ ಎಕ್ಸ್ಪ್ರೆಸ್ವೇನಿಂದ ಈ ಭಾಗದ ಭೂಮಿಗೆ ಬಂತು ಬಂಗಾರದ ಬೆಲೆ
ಬೆಂಗಳೂರಿನ ಹಲವು ಭಾಗಗಳಲ್ಲಿ ಈಗಾಗಲೇ ರಿಯಲ್ ಎಸ್ಟೇಟ್ನಿಂದಾಗಿ ಭೂಮಿ ಬೆಲೆ ಗಗನಕ್ಕೇರಿದೆ. ಈಗ ನಗರವು ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿರುವುದರಿಂದ ಹಲವು ಯೋಜನೆಗಳು ಚಾಲ್ತಿಯಲ್ಲಿವೆ. ಹೀಗಾಗಿ ಬೆಂಗಳೂರಿನ ಕೆಲವು ಭಾಗಗಳು ಕೂಡ ಅಭಿವೃದ್ಧಿಯ ವೇಗ ಹೆಚ್ಚಿಸಿಕೊಂಡಿದೆ. ಈ ಪೈಕಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದಾಗಿ ಅಭಿವೃದ್ಧಿ ಪಥದಲ್ಲಿರುವ ದೇವನಹಳ್ಳಿ ಕೂಡ ಒಂದು. ಈ ಭಾಗದಲ್ಲಿ ಬರುತ್ತಿರುವ ಬೆಂಗಳೂರು-ವಿಜಯವಾಡ ಎಕ್ಸ್ಪ್ರೆಸ್ವೇ ಕೂಡ ಇಲ್ಲಿನ ಅಭಿವೃದ್ಧಿಗೆ ಪುಷ್ಟಿ ನೀಡುತ್ತಿದೆ.
ಕೆಂಪೇಗೌಡ ಏರ್ಪೋರ್ಟ್ನಿಂದಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಈಗಾಗಲೇ ಕೇಂದ್ರಬಿಂದುವಾಗಿರುವ ದೇವನಹಳ್ಳಿಯು ಬೆಂಗಳೂರು-ವಿಜಯವಾಡ ಎಕ್ಸ್ಪ್ರೆಸ್ವೇ ನಿರ್ಮಾಣದೊಂದಿಗೆ ಶೀಘ್ರ ಪರಿವರ್ತನೆಗೆ ಸಜ್ಜಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಈ ಮಹತ್ವಾಕಾಂಕ್ಷೆಯ ಎಕ್ಸ್ಪ್ರೆಸ್ವೇ ನಿರ್ಮಾಣ ಕೈಗೆತ್ತಿಕೊಂಡಿದೆ. ಇದು ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರದ ಮೂಲಕ ಹಾದುಹೋಗುತ್ತಿದ್ದು, ಬೆಂಗಳೂರು ಮತ್ತು ಆಂಧ್ರಪ್ರದೇಶದ ನಡುವೆ ಸಂಪರ್ಕವನ್ನೂ ಸುಲಭಗೊಳಿಸುತ್ತಿದೆ.

ಈ ಎಕ್ಸ್ಪ್ರೆಸ್ವೇ ಯೋಜನೆಯಿಂದಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ದೇವನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಲೆ ಎತ್ತುತ್ತಿರುವ ಕೈಗಾರಿಕಾ ಪ್ರದೇಶಗಳು ಹಾಗೂ ವಾಣಿಜ್ಯ ಕೇಂದ್ರಗಳೂ ಸೇರಿದಂತೆ ಈ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಕೂಡ ಗರಿಗೆದರಿದೆ. ಸದ್ದಿಲ್ಲದೆ ಇಲ್ಲಿನ ಭೂಮಿಗೆ ಬಂಗಾರದ ಬೆಲೆಯೂ ಬಂದಿದೆ. ಈ ಎಕ್ಸ್ಪ್ರೆಸ್ ವೇ ಪೂರ್ಣಗೊಳ್ಳುವ ವೇಳೆಗೆ ದೇವನಹಳ್ಳಿ ಹಾಗೂ ಏರ್ಪೋರ್ಟ್ ಸುತ್ತಮುತ್ತಲಿನ ಪ್ರದೇಶದ ಚಿತ್ರಣವೇ ಬದಲಾಗಲಿದೆ ಎನ್ನುತ್ತಿದ್ದಾರೆ ತಜ್ಞರು.
ಬೆಂಗಳೂರು ಮತ್ತು ವಿಜಯವಾಡ ನಡುವಿನ ಪ್ರಯಾಣದ ಸಮಯವನ್ನು ಈ ಎಕ್ಸ್ಪ್ರೆಸ್ವೇ ಕಡಿಮೆ ಮಾಡುವುದು ಮಾತ್ರವಲ್ಲದೆ, ಈಗಾಗಲೇ ಹೆಚ್ಚಿನ ಬೆಳವಣಿಗೆಯ ಕಾರಿಡಾರ್ ಎಂದು ಗುರುತಿಸಿಕೊಂಡಿರುವ ದೇವನಹಳ್ಳಿಗೆ ತಡೆರಹಿತ ಪ್ರವೇಶವನ್ನು ಸಹ ನೀಡಲಿದೆ. ಬೆಂಗಳೂರು ಉಪನಗರ ರೈಲ್ವೆ, ಪೆರಿಫೆರಲ್ ರಿಂಗ್ ರಸ್ತೆ ಮತ್ತು ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯಂತಹ ಹಲವಾರು ದೊಡ್ಡ ಯೋಜನೆಗಳು ಕೂಡ ಈ ಭಾಗದಲ್ಲಿದೆ. ಈ ಎಲ್ಲದರ ಪರಿಣಾಮ ಈ ಪ್ರದೇಶವು ರಿಯಲ್ ಎಸ್ಟೇಟ್ ಅಭಿವೃದ್ಧಿಗೂ ಸಹಕಾರಿಯಾಗುತ್ತಿದೆ.
ಈ ಎಕ್ಸ್ಪ್ರೆಸ್ವೇ ವಾಣಿಜ್ಯ ಮತ್ತು ವಸತಿ ಸೌಕರ್ಯಗಳ ವಿಸ್ತರಣೆಗೆ ಪ್ರಮುಖ ಪಾತ್ರವಹಿಸಲಿದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಅಂದಾಜಿಸಿದ್ದಾರೆ. ಈ ರಸ್ತೆ ಜಾಲವು ದೇವನಹಳ್ಳಿಗೆ ಹಾಗೂ ಅಲ್ಲಿನ ಪ್ರಯಾಣವನ್ನು ಇನ್ನೂ ಸುಲಭಗೊಳಿಸುತ್ತದೆ. ಅಭಿವೃದ್ಧಿ ಕಾರಣದಿಂದ ಈ ಪ್ರದೇಶದಲ್ಲಿ ಉದ್ಯೋಗಾವಕಾಶಗಳು ಕೂಡ ಹೆಚ್ಚಲಿವೆ. ಒಟ್ಟಾರೆ ಈ ಭಾಗದಲ್ಲಿ ವಸತಿ ಮತ್ತು ವಾಣಿಜ್ಯ ಆಸ್ತಿಗಳ ಬೇಡಿಕೆ ಕೂಡ ಹೆಚ್ಚಳ ಕಾಣುತ್ತಿದೆ.

ದೇವನಹಳ್ಳಿ ಪಾಲಿಗೆ ಈ ಎಕ್ಸ್ಪ್ರೆಸ್ವೇ ದೊಡ್ಡ ಗೇಮ್ ಚೇಂಜರ್ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಬೆಳವಣಿಗೆಯ ಜೊತೆ ಜೊತೆಗೆ ಪಕ್ಕದ ಆಂಧ್ರಪ್ರದೇಶವನ್ನು ಸಂಪರ್ಕಿಸುತ್ತಿರುವುದರಿಂದ ಈ ಭಾಗದಲ್ಲಿ ಮನೆ ಖರೀದಿದಾರರು ಮತ್ತು ಹೂಡಿಕೆದಾರರಿಗೆ ಹೆಚ್ಚು ಆಸಕ್ತಿ ತೋರುತಿದ್ದಾರೆ. ಈಗಾಗಲೇ ದೇವನಹಳ್ಳಿ ಭಾಗದಲ್ಲಿ ವಾಣಿಜ್ಯ ಸಂಕೀರ್ಣಗಳು ಮತ್ತು ಲಾಜಿಸ್ಟಿಕ್ಸ್ ಪಾರ್ಕ್ಗಳನ್ನು ಪ್ರಾರಂಭಿಸಲು ಡೆವಲಪರ್ಗಳು ಮುಗಿಬಿದ್ದಿರುವುದರಿಂದ ಭೂಮಿಯ ಬೆಲೆಯಲ್ಲಿ ಏರಿಕೆಯೂ ಕಂಡುಬಂದಿದೆ.
ಸಣ್ಣ ಪಟ್ಟಣವಾಗಿದ್ದ ದೇವನಹಳ್ಳಿ ಈಗ ಏರೋಸ್ಪೇಸ್ ಪಾರ್ಕ್, ಐಟಿ ಹೂಡಿಕೆ ಪ್ರದೇಶ (ಐಟಿಐಆರ್) ಮತ್ತು ಹಾರ್ಡ್ವೇರ್ ಟೆಕ್ ಪಾರ್ಕ್ನಂತಹ ಪ್ರಮುಖ ಮುಂಬರುವ ಯೋಜನೆಗಳಿಗೆ ನೆಲೆಯಾಗಿದೆ. ದೇವನಹಳ್ಳಿಯನ್ನು ಭವಿಷ್ಯದ ಆರ್ಥಿಕ ಕೇಂದ್ರವಾಗಿ ಬೆಳೆಸಲು ಈ ಯೋಜನೆಗಳನ್ನು ತರಲಾಗಿದೆ. ಎಕ್ಸ್ಪ್ರೆಸ್ವೇ ಮಾತ್ರವಲ್ಲದೆ ಇಲ್ಲಿನ ಕೈಗಾರಿಕೆಗಳು ದೇವನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸಲಿದ್ದು, ಭೂಮಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ದೇವನಹಳ್ಳಿ ಈಗ ನವಬೆಂಗಳೂರಾಗಿ ಬೆಳೆಯುತ್ತಿದೆ.












Click it and Unblock the Notifications