ಹುತಾತ್ಮ ಸೈನಿಕರಿಗೆ ಸಹಾಯ ಮಾಡಬೇಕೆ? ಗಣೇಶನನ್ನು ಮನೆಗೆ ಕರೆತನ್ನಿ!
ಬೆಂಗಳೂರು, ಆ. 16: ಗಡಿಯಲ್ಲಿ ದೇಶ ಕಾಯುವ ಸೈನಿಕನನ್ನು ನೆನೆದರೆ ನಾವೆಲ್ಲರೂ ಭಾವುಕರಾಗುತ್ತೇವೆ. ಜೀವದ ಹಂಗು ತೊರೆದು ನಾಡಿನ ರಕ್ಷಣೆಗೆ ಗಡಿಯಲ್ಲಿ ನಿಂತಿರುವ ಸೈನಿಕ ಎಂದರೆ ಧೈರ್ಯದ ಪ್ರತಿರೂಪ. ಅಂತಹ ಸೈನಿಕರಿಗೆ ಸಣ್ಣದಾದರೂ ಸಹಾಯವನ್ನು ಮಾಡುವ ತುಡಿತ ಪ್ರತಿಯೊಬ್ಬ ಭಾರತೀಯರಲ್ಲಿಯೂ ಇರುತ್ತದೆ. ಆದರೆ ಸಹಾಯ ಮಾಡಲು ಸರಿಯಾದ ವೇದಿಕೆ ಸಿಕ್ಕಿರುವುದಿಲ್ಲ. ಇದೀಗ ನಿಮ್ಮ ಮನೆಗೆ ಗೌರಿ ಗಣೇಶನನ್ನು ಕರೆ ತರುವ ಮೂಲಕ ಗಡಿಯಲ್ಲಿ ದೇಶ ಕಾಯುವಾಗ ಹುತಾತ್ಮರಾಗಿರುವ ಸೈನಿಕರ ಕುಟುಂಬಗಳಿಗೆ ನೀವು ನೆರವಾಗಬಹುದು.
Recommended Video
ಕೊರೊನಾ ವೈರಸ್ನಿಂದಾಗಿ ಇಡೀ ದೇಶ ಸ್ತಬ್ಧವಾಗಿದೆ. ಈಗೀಗ ಜನರಲ್ಲಿನ ಭಯ ಒಂದಿಷ್ಟು ಕಡಿಮೆಯಾಗುತ್ತಿದೆ. ಆದರೂ ಹಬ್ಬಗಳನ್ನೂ ಸರಳವಾಗಿ ಆಚರಿಸಲು ಅವಕಾಶವಿದೆ. ಕೊರೊನಾ ವೈರಸ್ ಸೃಷ್ಟಿಸಿರುವ ಲಾಕ್ಡೌನ್ನಿಂದ ಬಹುತೇಕರ ಜೀವನ ವಿಧಾನ ಬದಲಾಗಿದೆ. ಆದರೆ ಇಲ್ಲೊಬ್ಬ ಕಲಾವಿದರು ಲಾಕ್ಡೌನ್ ಸಂಕಷ್ಟದ ಮಧ್ಯೆಯೂ ಹುತಾತ್ಮ ಯೋಧರ ಸಹಾಯಕ್ಕೆ ಮುಂದಾಗಿದ್ದಾರೆ. ಜೊತೆಗೆ ಗಣೇಶನ ಭಕ್ತರೂ ಸಹಾಯ ಮಾಡಲು ವೇದಿಕೆ ಒದಗಿಸಿದ್ದಾರೆ. ಅದು ಹೇಗೆ ಅಂತೀರಾ? ಮುಂದೆ ಓದಿ!

ಪರಿಸರ ಸ್ನೇಹಿ ಗಣಪ
ಬೆಂಗಳೂರಿನ ಕೆಂಗೇರಿಯ ಕಲಾವಿದ ವಿಶ್ವನಾಥ ಮಾಳ್ವದೆ ಅವರು ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳನ್ನು ತಯಾರಿಸಿದ್ದಾರೆ. ಲಾಕ್ಡೌನ್ ಸಮಯವನ್ನು ಹುತಾತ್ಮ ಸೈನಿಕರ ಸಹಾಯಕ್ಕೆ ಉಪಯೋಗಿಸಿಕೊಳ್ಳುವ ಯೋಚನೆ ಬಂದಿದ್ದೆ ತಡ, ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾರೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಇಡೀ ದೇಶಾದ್ಯಂತ ಕೊರೊನಾ ವೈರಸ್ ಕಟ್ಟಿಹಾಕಲು ಲಾಕ್ಡೌನ್ ಜಾರಿ ಮಾಡಲಾಗಿತ್ತು.
ಇಡೀ ದೇಶ ಸ್ತಬ್ಧವಾಗಿತ್ತು. ಇಡೀ ದೇಶದ ಜನರು ಮನೆ ಸೇರಿದ್ದರು. ಆದರೆ ಗಡಿ ಕಾಯುವ ಸೈನಿಕರು ಮಾತ್ರ ಎಂದಿನಂತೆ ತಮ್ಮ ಸೇವೆಯನ್ನು ಮುಂದುವರೆಸಿದ್ದರು. ಇದೇ ಸಂಕಷ್ಟದ ಸಮಯದಲ್ಲಿ ಚೀನಾದ ಗಡಿ ತಂಟೆಯಿಂದ ನಮ್ಮ ಸೈನಿಕರು ಹುತಾತ್ಮರಾದರು. ಇದನ್ನು ನೋಡಿದಾಗ ಸೈನಿಕರಿಗೆ ಗೌರವ ಕೊಡುವಂತಹ ಕೆಲಸ ಮಾಡಬೇಕು ಎಂಬ ಚಿಂತನೆಯೇ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆಗೆ ಮುಂದಾಗಲು ಕಾರಣ ಎನ್ನುತ್ತಾರೆ ಕಲಾವಿದ ವಿಶ್ವನಾಥ್ ಮಾಳ್ವದೆ.

ಹಣ ಹುತಾತ್ಮ ಸೈನಿಕರಿಗೆ
ಹೀಗಾಗಿ ಲಾಕ್ಡೌನ್ ಸಮಯದಲ್ಲಿ ಗಣೇಶನ ಮೂರ್ತಿ ತಯಾರಿಕೆ ವಿಶ್ವನಾಥ್ ಶುರು ಮಾಡಿದರು. ಜೊತೆಗೆ ಅವರ ಪತ್ನಿ ಶುಭಾ ಸಹ ಕೈಜೋಡಿಸಿದರು. ಮೂಲತಃ ಶಿರಸಿ ಮೂಲದ ವಿಶ್ವನಾಥ್ ಮಾಳ್ವದೆ ಅವರು ಆರ್ಟ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶಿಲ್ಪಕಲೆಯಲ್ಲಿ ಆಸಕ್ತಿ ಹೊಂದಿರುವ ಅವರು ಕಲ್ಲು, ಮರ, ಸೆರಾಮಿಕ್, ಕಬ್ಬಿಣ ಇತ್ಯಾದಿ ವಸ್ತುಗಳಲ್ಲಿ ಮೂರ್ತಿಗಳನ್ನು ತಯಾರಿಸುತ್ತಿದ್ದರು.
ಈ ಸಲ ಲಾಕ್ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡು ಸೈನಿಕರಿಗೆ ಸಹಾಯ ಮಾಡಲು, ಮೊದಲ ಬಾರಿ ಮಣ್ಣಿನ ಗಣಪತಿಗಳನ್ನು ತಯಾರಿಸಿದ್ದಾರೆ. 8 ರಿಂದ 10 ಇಂಚು ಎತ್ತರದ ಸುಮಾರು 200 ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾರೆ. ಮೂರ್ತಿಗಳ ಮಾರಾಟದಿಂದ ಬರುವ ಲಾಭದ ಹಣವನ್ನು ಹುತಾತ್ಮ ಸೈನಿಕರಿಗೆ ತಲುಪಿಸಲಿದ್ದಾರೆ.

ಯೋಧರಿಗೆ ಸಹಾಯ ಹೇಗೆ?
ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮಾರಾಟದಿಂದ ಬರುವ ಶೇಕಡಾ 50ರಷ್ಟು ಹಣವನ್ನು ಯೋಧರಿಗೆ ತಲುಪಿಸುತ್ತೇವೆ. ಲಾಕ್ಡೌನಿಂದ ನಾವು ಸಂಕಷ್ಟದಲ್ಲಿ ಇರುವುದರಿಂದ ಮೂರ್ತಿ ತಯಾರಿಕೆಗೆ ಬಳಸಿರುವ ವಸ್ತುಗಳ ಖರೀದಿಗೆ ಹಣ ವ್ಯಯಿಸಿದ್ದೇವೆ. ಹೀಗಾಗಿ ಅರ್ಧದಷ್ಟು ಹಣವನ್ನು ಸೈನಿಕರ ನೆರವಿಗೆ ಕಳುಹಿಸುತ್ತೇವೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಸ್ಥಾಪಿಸಿರುವ 'ಭಾರತ್ ಕೆ ವೀರ್' ವೆಬ್ಸೈಟ್ ಮೂಲಕ ಸೈನಿಕರಿಗೆ ಹಣ ತಲುಪಿಸುತ್ತೇವೆ. ವೆಬ್ಸೈಟ್ನಲ್ಲಿರುವ ಹುತಾತ್ಮ ಯೋಧರ ಭಾವಚಿತ್ರ ಹಾಗೂ ಹೆಸರು ಇರುತ್ತದೆ. ಗಣೇಶ ಮೂರ್ತಿ ಖರೀದಿಸುವ ಭಕ್ತರು ಯಾವು ಬಯಸುವ ಹುತಾತ್ಮ ಯೋಧರಿಗೆ ಅರ್ಧದಷ್ಟು ಹಣವನ್ನು ದೇಣಿಗೆ ಕೊಡುವ ಮೂಲಕ ತಮ್ಮ ಹೆಸರಿನಲ್ಲಿ ಪ್ರಮಾಣಪತ್ರ ಪತ್ರ ಪಡೆಯಬಹುದಾಗಿದೆ. ಹಣ ನೇರವಾಗಿ ಹುತಾತ್ಮ ಕುಟುಂಬದವರಿಗೆ ಸೇರುತ್ತದೆ ಎನ್ನುತ್ತಾರೆ ಕಲಾವಿದ ವಿಶ್ವನಾಥ್ ಮಾಳ್ವದೆ.

ಬೆಂಗಳೂರಿನಲ್ಲಿ ಮಾತ್ರ
ಕಲಾವಿದ ವಿಶ್ವನಾಥ್ ಮಾಳ್ವದೆ ತಯಾರಿಸಿವ ಗಣೇಶ ಮೂರ್ತಿಗಳು ಸುಂದರವಾಗಿವೆ. ಆದರೆ ಬೆಂಗಳೂರಿನ ಕೆಂಗೇರಿಯಲ್ಲಿ ಮಾತ್ರ ಲಭ್ಯವಿವೆ. ಮೂರ್ತಿಗಳನ್ನು ಖರೀದಿ ಮಾಡಲು ಈ ವಿಳಾಸಕ್ಕೆ ಸಂಪರ್ಕಿಸಬಹುದು-ವಿಶ್ವನಾಥ ಮಾಳ್ವದೆ, # 66, ಅನ್ನಪೂರ್ಣೇಶ್ವರಿ ಹೋಮ್ಸ್ ಕೆಂಗೇರಿ, ಕೋಡಿಪಾಳ್ಯ, 4ನೇ ಕ್ರಾಸ್, ಬೆಂಗಳೂರು-560060. ದೂರವಾಣಿ ಸಂಖ್ಯೆ: 96202 04196, 94812 31787.












Click it and Unblock the Notifications