Get Updates
Get notified of breaking news, exclusive insights, and must-see stories!

ಅಂದು ರಶ್ಮಿ, ಗಣಪತಿ, ಕಲ್ಲಪ್ಪ, ಅನುಪಮಾ; ಇಂದು ರೂಪಾ! (ಒಂದು ವಿಶ್ಲೇಷಣೆ)

ಪರಪ್ಪನ ಅಗ್ರಹಾರದಲ್ಲಿನ ಕೇಂದ್ರೀಯ ಕಾರಾಗೃಹದಲ್ಲಿನ ಭ್ರಷ್ಟಾಚಾರದ ವರದಿ ನೀಡಿದ್ದ ಅಧಿಕಾರಿ ಡಿ. ರೂಪಾ ಅವರನ್ನು ಎತ್ತಂಗಡಿ ಮಾಡಿದ ರಾಜ್ಯ ಸರ್ಕಾರ.

ತಪ್ಪುಗಳನ್ನು, ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಅಧಿಕಾರಿಗಳಿಗೆ ರಾಜ್ಯದಲ್ಲಿ ಯಾವುದೇ ರಕ್ಷಣೆಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪರಪ್ಪನ ಅಗ್ರಹಾರದ ಕೇಂದ್ರೀಯ ಕಾರಾಗೃಹದ ಅಗ್ರ ಭ್ರಷ್ಟತೆಯನ್ನು ಬಟಾಬಯಲು ಮಾಡಿದ ಡಿ. ರೂಪಾ ಅವರಿಗೆ ವರ್ಗಾವಣೆ ಶಿಕ್ಷೆಯಾಗಿದೆ.

ಸರ್ಕಾರವು, ಇದಕ್ಕೆ ನಾನಾ ರೀತಿಯ ಆಡಳಿತಾತ್ಮಕ ಕಾರಣಗಳನ್ನು ನೀಡಬಹುದು. ಆದರೆ, ಭ್ರಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷೆ ಮಾಡಬೇಕಿದ್ದ ಸರ್ಕಾರ ಇದಕ್ಕೆ ಉಲ್ಟಾ ಎಂಬಂಥ ಕೆಲಸ ಮಾಡಿರುವುದು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.

ಕೇವಲ ರೂಪಾ ಅವರ ವರ್ಗಾವಣೆಯಿಂದ ಜನರು ಈ ಬಗ್ಗೆ ಬೇಸರಪಟ್ಟುಕೊಳ್ಳುತ್ತಿಲ್ಲ. ಬದಲಾಗಿ, ಪ್ರಕರಣ ಬಯಲಿಗೆ ಬಂದಾಗಿನಿಂದ ಈ ಸರ್ಕಾರ ನಡೆದುಕೊಂಡ ರೀತಿ ಮಾತ್ರ ಎಲ್ಲರಿಂದ ಆಕ್ಷೇಪಕ್ಕೊಳಗಾಗುತ್ತಿದೆ. ಕಾರಾಗೃಹದ ಕರಾಳತೆಯನ್ನು ಗಮನಕ್ಕೆ ತೆಗೆದುಕೊಳ್ಳುವ ಬದಲು, ಅದು ಮಾಧ್ಯಮಗಳಿಗೆ ತಲುಪಿದ ಬಗೆ ಹೇಗೆ ಎಂಬುದರ ಬಗ್ಗೆಯೇ ಹೆಚ್ಚು ಗಮನ ಹರಿಸುವಲ್ಲೇ ತನ್ನ ಗಮನ ನೆಟ್ಟಿದ್ದು ನಿಜಕ್ಕೂ ದುರದೃಷ್ಟಕರ.

Prison DIG D Roopa transfer; State government unhealthy move regarding the efficient officers

ಅಷ್ಟೇ ಅಲ್ಲ, ರೂಪಾ ಅವರನ್ನು ಬೆಂಬಲಿಸಿ ಕಾರಾಗೃಹದಲ್ಲಿ ಪ್ರತಿಭಟನೆ ನಡೆಸಿದ ಕೈದಿಗಳಿಗೆ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ನೀಡಿ ಅವರನ್ನು ಬೇರೆ ಜಿಲ್ಲಾ ಜೈಲುಗಳಿಗೆ ರಾತ್ರೋರಾತ್ರಿ ರವಾನಿಸಿದ್ದೂ ಒಂದು ಅಮಾನವೀಯ ಘಟನೆ. ಇದು ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುತ್ತಿರುವ ಸರ್ವಾಧಿಕಾರ ಧೋರಣೆ ಎನ್ನದೇ ಬೇರೆ ವಿಧಿಯಿಲ್ಲ.

ಆದರೆ, ಸರ್ಕಾರ ಹೇಳುವ ಒಂದು ಮಾತನ್ನು ಒಪ್ಪೋಣ. ಒಬ್ಬ ಅಧಿಕಾರಿಯಾಗಿ ಸರ್ಕಾರೀ ಸಂಸ್ಥೆಗಳಲ್ಲಿ ನಡೆಯುವ ಅವ್ಯವಹಾರಗಳನ್ನು ನೇರವಾಗಿ ಮಾಧ್ಯಮಗಳಿಗೆ ಹೇಳುವುದು ಸರಿಯಲ್ಲ.

ಆದರೆ, ಈ ಪ್ರಕರಣವನ್ನು ಜನರ ನಿರೀಕ್ಷೆಗೆ ತಕ್ಕಂತೆ ನಿಭಾಯಿಸದೇ ರೂಪಾ ಅವರಿಗೆ ವರ್ಗಾವಣೆ ಶಿಕ್ಷೆ ಕೊಟ್ಟಿದ್ದು ಸ್ವಾಗತಾರ್ಹವಲ್ಲ. ಇದಕ್ಕೆ ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಅವರು ಮಾಡಿರುವ ಸರಣಿ ಟ್ವೀಟ್ ಗಳೇ ಸಾಕ್ಷಿ.

ಜೈಲುಗಳಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಯಾರಿಗೂ ಗೊತ್ತಿಲ್ಲದೇನಿಲ್ಲ. ಇದಕ್ಕೆ ತಾಜಾ ಉದಾಹರಣೆಯೆಂಬಂತೆ, ಮುಂಬೈನ ಜೈಲಿನಲ್ಲಿರುವ ಭೂಗತ ಪಾತಕಿಯೊಬ್ಬ ಅಲ್ಲಿ ನಡೆಯುವ ತಾರತಮ್ಯಗಳನ್ನು ಖುದ್ದು ನ್ಯಾಯಾಲಯದ ಮುಂದೆಯೇ ಹೇಳಿಕೊಂಡಿದ್ದಾನೆ. ಇಂಥ ವಿಚಾರಗಳು ಅನೇಕ ಬಾರಿ ಮಾಧ್ಯಮಗಳಲ್ಲಿ ಬಿತ್ತರಿಸಲ್ಪಟ್ಟಿವೆ.

ಹೀಗಿರುವಾಗ, ರೂಪಾ ಅವರು ಆರೋಪ ಮಾಡಿದ ಕೂಡಲೇ, ಆ ವರದಿಯಲ್ಲಿ ಸತ್ಯಾಂಶವಿದೆಯೇ ಎಂಬುದನ್ನು ಅರಿಯುವುದರ ಬದಲು ವಿಷಯದ ಬೇರೊಂದು ಮಗ್ಗುಲಿಗೆ ಹೆಚ್ಚು ಪ್ರಾಧಾನ್ಯತೆ ಕೊಡುವ ಮೂಲಕ ಮಾಧ್ಯಮಗಳ, ಜನಸಾಮಾನ್ಯರ ಗಮನವನ್ನು ಬೇರೆ ಕಡೆಗೆ ಸೆಳೆಯುವಂಥ ಪ್ರಯತ್ನವನ್ನು ಸರ್ಕಾರ ಮಾಡಿದ್ದು ಪ್ರಶ್ನಾರ್ಹ.

ಇದಕ್ಕೆ ಮತ್ತೊಂದು ಉದಾಹರಣೆಯಾಗಿ, ಇತ್ತೀಚೆಗೆ ಆಹಾರ ಇಲಾಖೆಯ ಕಮೀಷನರ್ ಆಗಿದ್ದ ಅನುರಾಗ್ ತಿವಾರಿಯವರ ಸಾವಿನ ಬೆನ್ನಿಗೇ ಕೇಳಿ ಬಂದ ಅನ್ನಭಾಗ್ಯ ಯೋಜನೆಯಲ್ಲಿ ನಡೆದ ಕೋಟ್ಯಂತರ ರುಪಾಯಿ ಭ್ರಷ್ಟಾಚಾರದ ವಿಚಾರ ಆನಂತರ ತನಿಖೆಯಾಗಲೇ ಇಲ್ಲ.

ಕರ್ನಾಟಕ ಸರ್ಕಾರದ ಇಂಥ ನೀತಿಗಳಿಂದಲೇ ಬೇಸತ್ತಿರುವ ಕೆಲ ನಿಷ್ಟಾವಂತ ಅಧಿಕಾರಿಗಳು ಈಗಾಗಲೇ ತಮ್ಮ ಕೆಲಸಕ್ಕೆ ರಾಜಿನಾಮೆ ಕೊಟ್ಟಿದ್ದಾರೆ.

ಇದೇನಾ ಇಲ್ಲಿ ಸಿಗುವ ಮರ್ಯಾದೆ?
ಯಾವಾಗ ಭ್ರಷ್ಟಾಚಾರದ ವಿರುದ್ಧ ಸರ್ಕಾರಿ ಅಧಿಕಾರಿಗಳು ಸಿಡಿದೇಳುತ್ತಾರೋ ಆಗೆಲ್ಲಾ ಅವರಿಗೆ ಸರ್ಕಾರದಿಂದ ಸಿಗುವ ಬಹುಮಾನ ಹೀಗೆಯೇ ಇರುತ್ತದೆ.

ಅದು ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕಿಯಾಗಿದ್ದ ರಶ್ಮಿ ಆಗಿರಬಹುದು, ಬಳ್ಳಾರಿ ಜಿಲ್ಲೆಯಲ್ಲಿ ಡಿವೈಎಸ್ ಪಿ ಆಗಿದ್ದ ಅನುಪಮಾ ಶಣೈ ಆಗಿರಬಹುದು (ಪ್ರಕರಣ ಯಾವುದ್ಯಾವುದೋ ತಿರುವು ಪಡೆದು ಅನುಪಮ ರಾಜಿನಾಮೆ ಸಲ್ಲಿಸಿದ್ದು ಬೇರೆ ವಿಚಾರ), ಡಿವೈಎಸ್ ಪಿ ಗಣಪತಿ, ಮತ್ತೊಬ್ಬ ಡಿವೈಎಸ್ ಪಿ ಕಲ್ಲಪ್ಪ ಹಂಡೀಭಾಗ್ ಪ್ರಕರಣಗಳಾಗಿರಬಹುದು... ಈ ಎಲ್ಲಾ ಪ್ರಕರಣಗಳಲ್ಲಿ ಸರ್ಕಾರ ನಡೆದುಕೊಂಡ ರೀತಿ ಅಥವಾ ಅಧಿಕಾರಿಗಳನ್ನು ನಡೆಸಿಕೊಂಡ ರೀತಿ ಆಕ್ಷೇಪಾರ್ಹವಾಗಿವೆ.

ಅಷ್ಟೇ ಅಲ್ಲ, ಸ್ಟೀಲ್ ಬ್ರಿಡ್ಜ್ ವಿಚಾರ, ಗೋವಿಂದರಾಜು ಡೈರಿ ವಿಚಾರ, ಹುಬ್ಲೊ ವಾಚ್ ವಿಚಾರಗಳಲ್ಲೂ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿಲ್ಲ.

Prison DIG D Roopa transfer; State government unhealthy move regarding the efficient officers

ತನ್ನ ತಲೆಗೆ ಯಾವುದೇ ಆರೋಪಗಳು ಬಂದಾಗ ಸರ್ಕಾರ ಅನುಸರಿಸುವ ಏಕೈಕ ಮಾರ್ಗ ಅಂಥ ಆರೋಪಗಳನ್ನು ತನಿಖೆಗೆ ಒಳಪಡಿಸುವುದು. ಆಡಳಿತಾತ್ಮಕವಾಗಿ ಇದು ಸರಿ. ಇದು ಕೇವಲ ನಮ್ಮ ರಾಜ್ಯ ಸರ್ಕಾರದ ಬಗ್ಗೆ ಮಾತ್ರವಲ್ಲ ಎಲ್ಲಾ ಸರ್ಕಾರಗಳ ಕತೆಯೂ ಇದೇ. ಆದರೆ, ಈ ತನಿಖಾ ವರದಿಗಳಲ್ಲಿ ಜನರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆಂಬುದು ಅಷ್ಟೇ ಸತ್ಯ.

ತನಿಖೆ, ವಿಚಾರಣೆ, ಆರೋಪ ಪಟ್ಟಿ ಇತರ ಮಣ್ಣು, ಮಸಿಗಳೆಲ್ಲವೂ ಜನರ ಕಣ್ಣೊರೆಸುವ ತಂತ್ರ ಎಂಬುದು ಈಗ ಗುಟ್ಟಾಗೇನೂ ಉಳಿದಿಲ್ಲ. ಆ ತನಿಖಾ ವರದಿಗಳೆಲ್ಲವೂ ಯಾವುದೇ ಸರ್ಕಾರದ ಮೂಗಿನ ನೇರಕ್ಕೇ ಇರುತ್ತವೆ ಎಂಬುದು ಇಂದು ಶಾಲೆಗೆ ಹೋಗುವ ಮಕ್ಕಳಿಗೂ ಅರ್ಥವಾಗಿ ಹೋಗಿದೆ.

Prison DIG D Roopa transfer; State government unhealthy move regarding the efficient officers

ಕನ್ನಡಿಗರಾದ ನಮಗೆ ಸ್ವಾಭಿಮಾನವಿಲ್ಲವೇ?
ಅದೆಲ್ಲಾ ಒತ್ತಟ್ಟಿಗಿರಲಿ. ನಮ್ಮ ಕನ್ನಡಿಗರಿಗೆ ಸ್ವಾಭಿಮಾನ ಎಂಬುದೂ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಾವೇರಿ ವಿಚಾರದಲ್ಲಿ ನಮ್ಮನ್ನು, ನಮ್ಮ ರಾಜ್ಯ ಸರ್ಕಾರವನ್ನು ಶತ್ರುಗಳಂತೆ ನೋಡುವ ನೆರೆ ರಾಜ್ಯದ ಪ್ರತಿಷ್ಠಿತ ಕೈದಿಯೊಬ್ಬರಿಗೆ ಇಲ್ಲಿ, ನಮ್ಮ ನೆಲದಲ್ಲಿ ಐಶಾರಾಮಿ ಜೀವನ ಸಾಗಿಸಲು ನೆರವು ನೀಡಿರುವುದು, ಅವರು ನೀಡುವ ಎಂಜಲು ಕಾಸಿಗೆ ಜೊಲ್ಲು ಸೋರಿಸಿರುವುದು ಕನ್ನಡಿಗರ ಹೀನಾಯ ಮನಸ್ಥಿತಿಗಳಿಗೆ ಹಿಡಿದ ಕೈಗನ್ನಡಿ.

ಕಾವೇರಿ ವಿಚಾರದಲ್ಲಿ ಆ ನೆರೆರಾಜ್ಯದವರು ನಮ್ಮನ್ನು ಹೀಗಳೆಯುತ್ತಾರೆ. ಕಾವೇರಿ ಕಣಿವೆಯಲ್ಲಿ ನೀರಿಲ್ಲದಿದ್ದರೂ ಸುಪ್ರೀಂ ಕೋರ್ಟ್ ವರೆಗೂ ಹೋಗಿ ನೀರು ಬಿಡಿಸಲು ಅನುಮತಿ ಪಡೆದು ತರುತ್ತಾರೆ. ನಮ್ಮ ರೈತರನ್ನು ಕಣ್ಣೀರಲ್ಲೇ ಕೈ ತೊಳೆಯುವಂತೆ ಮಾಡುತ್ತಾರೆ.

ಕಾವೇರಿ ವಿಚಾರದಲ್ಲಿ ಬೆಂಗಳೂರಿಗೆ ಚರ್ಚೆಗೆ ಬರಬೇಕಾದರೆ ಅಲ್ಲಿನ ಜನಪ್ರತಿನಿಧಿಯೊಬ್ಬರು ಕರ್ನಾಟಕ ಸರ್ಕಾರ ನೀಡುವ ಕುರ್ಚಿಯ ಮೇಲೂ ಕುಳಿತುಕೊಳ್ಳುವುದಿಲ್ಲ. ಅಲ್ಲಿಂದಲೇ ಕುರ್ಚಿಯನ್ನು ತರುತ್ತಾರೆ. ಕರ್ನಾಟಕದ ನೀರು, ಆಹಾರವನ್ನೂ ಸೇವಿಸುವುದಿಲ್ಲ ಎಂದು ಶಪಥ ಮಾಡಿ ಅಲ್ಲಿಂದಲೇ ಬೇರೊಂದು ವಾಹನದಲ್ಲಿ ಊಟ, ನೀರಿನ ವ್ಯವಸ್ಥೆ ಮಾಡಿಕೊಂಡು ಬರುತ್ತಾರೆ.

ಕಾವೇರಿ ಅಂದ್ರೆ ಸಾಕು ಅಷ್ಟೆಲ್ಲಾ ಸ್ವಾಭಿಮಾನ ಪ್ರದರ್ಶಿಸುವ ಅವರ ಮುಂದೆ ನಾವು ಹೇಗಿರಬೇಕು ಅಲ್ಲವಾ? ಆದರೆ, ನಮಗೆ ನಾಚಿಕೆಯಿಲ್ಲ. ಸ್ವಾಭಿಮಾನವಂತೂ ಮೊದಲೇ ಇಲ್ಲ. ನಮಗೆ ನಮ್ಮ ಸ್ವಾಭಿಮಾನಕ್ಕಿಂತ ಹಣದ ನೋಟುಗಳೇ ದೊಡ್ಡದಾಗಿ ಕಂಡವು. ಅವನ್ನು ಕಂಡ ಕೂಡಲೇ ನಾಡಿನ ಮರ್ಯಾದೆ ಮೂಲೆ ಸೇರಿತು.

ಆದರೆ, ಒಂದಂತೂ ನಿಜ. ಎಲ್ಲಿಯವರೆಗೆ ನಮ್ಮ ಅಭಿಮಾನವನ್ನು, ಜನರ ಹಿತವನ್ನು ಹಣದ ಕಂತೆಗಳ ಅಡಿಯಲ್ಲಿ ಅಡವಿಡುತ್ತೇವೋ, ಎಲ್ಲಿಯವರೆಗೆ ನಮ್ಮ ಹಾಗೂ ನಮಗೆ ಬೇಕಾದವರ ಕುರ್ಚಿಗಳನ್ನು ಉಳಿಸಿಕೊಳ್ಳಲು ಹಾತೊರೆಯುತ್ತೇವೆಯೋ, ಎಲ್ಲಿಯವರೆಗೆ ದಕ್ಷ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುತ್ತಲೇ ಇರುತ್ತೇವೆಯೋ ಅಲ್ಲಿಯವರೆಗೆ ನಮ್ಮ ನಾಡು ಉದ್ಧಾರವಾಗದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+