ಬೆಂಗಳೂರಿನಲ್ಲಿ ಅಕ್ಟೋಬರ್ವರೆಗೆ ಇರಲಿದೆ ವಿದ್ಯುತ್ ಕಡಿತ: ಬೆಸ್ಕಾಂ ಕಾರಣಗಳು ಹೀಗಿವೆ
ಬೆಂಗಳೂರು ಜುಲೈ 25: ಕಾಮಗಾರಿ, ನಿರ್ವಹಣೆ ಸೇರಿದಂತೆ ವಿವಿಧ ಕಾರಣಗಳಿಂದ ಬೆಂಗಳೂರಿನ ಜನತೆ ಅಕ್ಟೋಬರ್ ತಿಂಗಳ ವರೆಗೆ ವಿದ್ಯುತ್ ಕಡಿತದ ಸಮಸ್ಯೆ ಎದುರಿಸಬೇಕಾಗಿದೆ.
ಈಗಾಗಲೇ ನಗರದ ಜನರು ಅರ್ಧಗಂಟೆ, ಒಂದು ಗಂಟೆ ಅಲ್ಲದೇ ಆಗಾಗ ದಿನಪೂರ್ತಿ ವಿದ್ಯುತ್ ಕಡಿತದ ಸಮಸ್ಯೆ ಎದುರಿಸುತ್ತಿದ್ದಾರೆ. ಬೆಸ್ಕಾಂ ಅಧಿಕಾರಿಗಳ ಪ್ರಕಾರ ಈ ವಿದ್ಯುತ್ ಕಡಿತದ ಸಮಸ್ಯೆ ಮುಂದಿನ ಮೂರು ತಿಂಗಳು ಅಂದರೆ ಅಕ್ಟೋಬರ್ ವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ವಿದ್ಯುತ್ ಮೂಲಸೌಕರ್ಯ, ಅಭಿವೃದ್ಧಿ ಕಾಮಗಾರಿಗಳ ಕಾರಣದಿಂದ ಕಡಿತ ವಿಸ್ತರಣೆ ಆಗಲಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು ರಸ್ತೆಗುಂಡಿ ಸಮಸ್ಯೆ ವಿರುದ್ಧ ಜಾಗೃತಿ ಮೂಡಿಸಲು ಬೀದಿಗೆ ಬಂದ ಯಮರಾಜ!
ಅಲ್ಪಾವಧಿ ವಿದ್ಯುತ್ ಕಡಿತ ಜತೆಗೆ ಒಮ್ಮೊಮ್ಮೆ ದಿನಪೂರ್ತಿ ವಿದ್ಯುತ್ ಪೂರೈಕೆಯಲ್ಲಿ ಕೊರತೆ ಉಂಟಾಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ಪೂರ್ವ, ಆಗ್ನೇಯ, ದಕ್ಷಿಣ ಮತ್ತು ಮಧ್ಯ ಭಾಗಗಳಲ್ಲಿ ದಿನವಿಡೀ ಅನಿಯಂತ್ರಿತ ವಿದ್ಯುತ್ ಕಡಿತವು ಅನೇಕ ನಾಗರಿಕರನ್ನು ಕಾಡುತ್ತಿದೆ.
ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ತಾಂತ್ರಿಕ ವಿಭಾಗದ ನಿರ್ದೇಶಕ ಡಿ. ನಾಗಾರ್ಜುನ, "ನಿಯಮಗಳ ಪ್ರಕಾರ ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ನ ನಿಯಮಿತವಾಗಿ ನಿರ್ವಹಣೆ ಮಾಡುವುದು ಸಹ ವಿದ್ಯುತ್ ಕಡಿತಕ್ಕೆ ಪ್ರಮುಖ ಕಾರಣ ಆಗಿದೆ. ಜತೆಗೆ ಅಪಾಯಕಾರಿ ಟ್ರಾನ್ಸ್ ಫಾರ್ಮರ್ಗಳನ್ನು ಸ್ಥಳಾಂತರಿಸು ಕಾರ್ಯ ನಡೆಯುತ್ತಿರುತ್ತದೆ. ಇದು ವಿದ್ಯುತ್ ಪೂರೈಕೆಯ ಮೇಲೆ ಪರಿಣಾಮ ಬೀರುತ್ತದೆ," ಎಂದು ತಿಳಿಸಿದರು.
2,500 ಟ್ರಾನ್ಸ್ಫಾರ್ಮ್ರರ್ ಸ್ಥಳಾಂತರದ ಗುರಿ
ಈ ವಿದ್ಯುತ್ ಕಡಿತದ ಪರಿಣಾಮ ವಿದ್ಯಾರ್ಥಿಗಳ ಮೇಲೆ ಬೀರಬಹುದೆಂದು ಬೆಸ್ಕಾಂ ಪರೀಕ್ಷೆಯ ಸಮಯದಲ್ಲಿ ನಿರ್ವಹಣೆ ಮತ್ತು ಇತರ ನವೀಕರಣ, ಕಾಮಗಾರಿಗಳನ್ನು ನಿಲ್ಲಿಸಿದೆ. ಬಾಕಿ ಉಳಿದಿರುವ ಕೆಲಸಗಳನ್ನು ಈಗ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದ ವಿದ್ಯುತ್ ಕಡಿತದ ಆದೇಶ ವಿಸ್ತರಣೆ ಆಗಲಿದೆ. ವಿದ್ಯುತ್ ಕಡಿತ ನಡೆಯುತ್ತಲೇ ಇರುತ್ತದೆ. ಇನ್ನು ಬೆಸ್ಕಾಂ ಸುಮಾರು 2,500 ಅಪಾಯಕಾರಿ ಟ್ರಾನ್ಸ್ ಫಾರ್ಮರ್ಗಳನ್ನು ಬದಲಾಯಿಸುವ ಗುರಿ ಹೊಂದಿದೆ. ಹೈಕೋರ್ಟ್ ನಿರ್ದೇಶನದಂತೆ ಮುಂದಿನ ಕೆಲ ತಿಂಗಳಲ್ಲಿ ಆ ಕೆಲಸವು ಸಹ ಆರಂಭವಾಗಲಿದ್ದು, ಮತ್ತೆ ವಿದ್ಯುತ್ ಪೂರೈಕೆಗೆ ಸರಬರಾಜಿಗೆ ಅಡ್ಡಿ ಆಗಬಹುದು ಎಂದು ಅವರು ತಿಳಿಸಿದರು.
ಬೆಂಗಳೂರು ವಿದ್ಯುತ್ ಕಡಿತ ಮುಕ್ತವಾಗಿಲ್ಲ
ಸದ್ಯ ಅಸ್ತಿತ್ವದಲ್ಲಿರುವ ಓವರ್ಹೆಡ್ ಟ್ರಾನ್ಸ್ ಮಿಷನ್ ಲೈನ್ಗಳನ್ನು ಭೂಗತ ಕೇಬಲ್ಗಳಾಗಿ ಪರಿವರ್ತಿಸುವ ಕಾಮಗಾರಿ ನಡೆಸಿ ಆ ಮೂಲಕ ಬೆಂಗಳೂರು ವಿದ್ಯುತ್ ಕಡಿತದಿಂದ ಮುಕ್ತಗೊಳಿಸಲಾಗುವುದು ಎಂದು ವರ್ಷದ ಹಿಂದೆಯೇ ತಿಳಿಸಿದ್ದ ಬೆಸ್ಕಾಂ, ಆ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ.
ಶೇ.80ರಷ್ಟು ಕಾಮಗಾರಿಗಳು ಪೂರ್ಣ
ಬೆಸ್ಕಾಂನ ಪ್ರಧಾನ ವ್ಯವಸ್ಥಾಪಕರಾದ ನಾಗರಾಜ್ ಅವರು, ಸುಮಾರು ಶೇ.80ರಷ್ಟು ಭೂಗತ ಕೇಬಲ್ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಭೂಗತ ಕೇಬಲ್ ಅಳವಡಿಕೆಗೆ ಶುಲ್ಕ ಅಥವಾ ಕಮಿಷನ್ ಪಡೆದಿಲ್ಲ. ಈ ಭೂಗತ ಕೇಬಲ್ ನೆಟ್ವರ್ಕ ನ ಕಾರ್ಯಾರಂಭ ಮಾಡಲಿದ್ದೇವೆ. ಇದರ ಪರಿಣಾಮವಾಗಿಯೂ ಮುಂದಿನ ದಿನಗಳಲ್ಲಿ ವಿದ್ಯುತ್ ವ್ಯತ್ಯಯವಾಗಬಹುದು ಎಂದು ಅವರು ತಿಳಿಸಿದರು.
ಬೆಸ್ಕಾಂ ನಡೆಸಿರುವ ಕಾಮಗಾರಿಗಳಿಂದ ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರಿನಾದ್ಯಂತ ನಿರಂತರ ವಿದ್ಯುತ್ ಪೂರೈಕೆಯ ಮೇಲೆ ಪರಿಣಾಮ ಬೀರಿದ್ದನ್ನು ನಾಗರಾಜ್ ಅವರು ಒಪ್ಪಿಕೊಂಡಿದ್ದಾರೆ. ಬೆಸ್ಕಾಂ ಉದ್ದೇಶಿತ ಯೋಜನೆಗಳಲ್ಲಿ ಶೇ. 80ರಿಂದ 85ರಷ್ಟು ಪ್ರಗತಿ ಸಾಧಿಸಿದ್ದೇವೆ. ಜತೆಗೆ ವಿದ್ಯುತ್ ಪೂರೈಕೆ ಸೇವೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆಯಲ್ಲಿದ್ದೇವೆ. ಈ ಮೂಲಕ ವಿದ್ಯುತ್ ಕಡಿತ ಸದ್ಯಕ್ಕೆ ನಿರಂತರವಾಗಿರಲಿದೆ ಎಂದು ಅವತು ತಿಳಿಸಿದ್ದಾರೆ.
ಇಂಧನ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ
ರಾಜ್ಯ ಇಂಧನ ಇಲಾಖೆಯಲ್ಲಿ ಸುಮಾರು ಶೇ.39ರಷ್ಟು ಸಿಬ್ಬಂದಿ ಕೊರತೆ ಸಮಸ್ಯೆಉಂಟಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಲಾಖೆಯು 87,610 ಸಿಬ್ಬಂದಿ ಹೊಂದಿದೆ ಮತ್ತು ಪ್ರಸ್ತುತದಲ್ಲಿ 34,000 ಹುದ್ದೆಗಳು ಭರ್ತಿ ಆಗಬೇಕಿದೆ. ಅತೀ ಹೆಚ್ಚು ಹುದ್ದೆಯು (ಶೇ.46.9) ಡಿ ಗುಂಪಿನ ಹುದ್ದೆ ಖಾಲಿ ಇದ್ದು, ಇದರಲ್ಲಿ ಲೈನ್ಮ್ಯಾನ್ಗಳು, ತಂತ್ರಜ್ಞರು, ಚಾಲಕರು ಮತ್ತು ಇತರರನ್ನು ಒಳಗೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.