ಬೆಂಗಳೂರು: ಬುದ್ಧಿವಾದ ಹೇಳಿದ ಮನೆ ಮಾಲಕಿ ಕೈ ಕಟ್!
ಬೆಂಗಳೂರು, ಜು. 03: ಮಾಗಡಿ ರಸ್ತೆಯ ಹೇರೋಹಳ್ಳಿ ಕೆಂಪೆಗೌಡ ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಮನೆ ಮಾಲಕಿಯ ಕೈ ಯನ್ನೇ ಕತ್ತರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಆರೋಪಿ ಕೃಷ್ಣ ಮತ್ತು ಕುಮಾರ್ ಎಂಬುವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಮನೆ ಮಾಲಕಿ ಮಂಗಳಗೌರಿ ಎಂಬುವರ ಮೇಲೆ ಗುರುವಾರ ಬೆಳಗ್ಗೆ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಂಗಳಗೌರಿ ಅವರನ್ನು ಸುಂಕದಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಯಶಸ್ವಿಯಾಗಿ ಕೈ ಜೋಡಿಸಲಾಗಿದೆ.[ಸಕತ್ ಕಿಕ್ ಕೊಡುವ ರೌಡಿ ಶೀಟರ್ 'ಅಲಿಯಾಸ್' ಗಳು]

ಆಗಿದ್ದೇನು?
ಕೆಂಪೆಗೌಡ ನಗರದಲ್ಲಿ ಮಂಗಳಗೌರಿ ಅವರಿಗೆ ಸೇರಿದ 5 ಮನೆಗಳಿವೆ. ಅದರಲ್ಲಿ ಒಂದು ಮನೆಯನ್ನು ಚಂದ್ರು ಎಂಬುವರಿಗೆ ಬಾಡಿಗೆ ನೀಡಿದ್ದಾರೆ. ಬುಧವಾರ ರಾತ್ರಿ ಚಂದ್ರು ಮನೆಗೆ ಆಗಮಿಸಿದ ಕೃಷ್ಣ ಮತ್ತು ಕುಮಾರ್ ಗಲಾಟೆ ಮಾಡುತ್ತಿದ್ದರು. ಈ ವೇಳೆ ಅಕ್ಕ ಪಕ್ಕದವರು ನಮಗೆ ತೊಂದರೆಯಾಗುತ್ತಿದೆ ಬುದ್ಧಿವಾದ ಹೇಳಿ ಎಂದು ಮಂಗಳಗೌರಿ ಅವರ ಬಳಿ ಕೇಳಿಕೊಂಡಿದ್ದಾರೆ.
ಮಂಗಳ ಗೌರಿ ಮನೆಗೆ ತೆರಳಿ ಗಲಾಟೆ ಮಾಡದಂತೆ ತಿಳಿಹೇಳಿದ್ದಾರೆ. ಆದರೆ ಇದಕ್ಕೆ ಪ್ರತೀಕಾರ ತೀರಿಸಬೇಕು ಎಂಬ ಉದ್ದೇಶದಿಂದ ಮಚ್ಚು, ಲಾಂಗ್ ನೊಂದಿಗೆ ಗುರುವಾರ ಬೆಳಗ್ಗೆ ಆಗಮಿಸಿದ ಆರೋಪಿಗಳು ಮನೆ ಮುಂದೆ ಕೆಲಸ ಮಾಡುತ್ತಿದ್ದ ಮಂಗಳಗೌರಿ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ವೇಳೆ ಮಂಗಳಗೌರಿ ತಮ್ಮ ಎಡಗೈ ನ್ನು ಅಡ್ಡ ಹಿಡಿದಿದ್ದಾರೆ.[ಕುಟ್ಟಿ ಅಲಿಯಾಸ್ ತಿರು vs ವಿಜಿ ಅಲಿಯಾಸ್ ಕವಳ]
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಂಗಳಗೌರಿ ಅವರನ್ನು ಅವರ ಕತ್ತರಿಸಿಹೋಗಿದ್ದ ಕೈ ಸಮೇತ ಸಮೀಪದ ಲಕ್ಷ್ಮಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸುಮಾರು 2 ಗಂಟೆಗೂ ಅಧಿಕ ಸಮಯ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಮಂಗಳಗೌರಿ ಅವರ ಕೈಯನ್ನು ಯಶಸ್ವಿಯಾಗಿ ಜೋಡಿಸಿದ್ದಾರೆ. ಇದಾಗ್ಯೂ ಅವರ ಕೈ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಲು ಸುಮಾರು 6 ತಿಂಗಳ ಕಾಲ ಸಮಯ ಬೇಕು ಎಂದು ವೈದ್ಯರು ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ತಾವರೆಕೆರೆ ಮತ್ತು ಬ್ಯಾಟರಾಯನಪುರ ಔಟ್ ಪೋಸ್ಟ್ ಪೊಲೀಸರು ಆಗಮಿಸಿ, ಸ್ಥಳಪರಿಶೀಲನೆ ನಡೆಸಿದ್ದಾರೆ. ತಾವರೆಕೇರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಡಿಗೆ ಪಡೆದಿದ್ದ ಚಂದ್ರು ಮರಳು ದಂಧೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications