ರಸ್ತೆ ಗುಂಡಿ ಮುಚ್ಚುವ ಬಿಬಿಎಂಪಿಯ ಗುಡುವು ವಿಸ್ತರಣೆ?
ಬೆಂಗಳೂರು, ನವೆಂಬರ್ 11 : ನವೆಂಬರ್ 10ರೊಳಗೆ ಬೆಂಗಳೂರು ನಗರದ ರಸ್ತೆಗಳನ್ನು ಗುಂಡಿ ಮುಕ್ತವಾಗಿ ಮಾಡುವ ಬಿಬಿಎಂಪಿ ಗುಡುವು ಮುಂದಕ್ಕೆ ಹೋಗಿದೆ. 1 ಸಾವಿರಕ್ಕೂ ಅಧಿಕ ಗುಂಡಿಗಳನ್ನು ಇನ್ನೂ ಮುಚ್ಚಬೇಕಾಗಿದೆ.
ಅಕ್ಟೋಬರ್ ತಿಂಗಳಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 6, 520 ರಸ್ತೆ ಗುಂಡಿಗಳನ್ನು ಪತ್ತೆ ಹಚ್ಚಿತ್ತು. ಹಗಲು ರಾತ್ರಿ ಎನ್ನದೇ ರಸ್ತೆ ಗುಂಡಿ ಮುಚ್ಚುವ ಕಾರ್ಯದಲ್ಲಿ ಪಾಲಿಕೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ನವೆಂಬರ್ 10ರೊಳಗೆ ನಗರದ ರಸ್ತೆಯನ್ನು ಗುಂಡಿ ಮುಕ್ತವಾಗಿ ಮಾಡಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದರು. ಪಾಲಿಕೆ ಅಧಿಕಾರಿಗಳು ಇದಕ್ಕೆ ಒಪ್ಪಿದ್ದರು.

ಶನಿವಾರ ಅಯೋಧ್ಯೆ ತೀರ್ಪಿನ ಹಿನ್ನಲೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಸ್ಥಗಿತಗೊಂಡಿತ್ತು. ಆದ್ದರಿಂದ, ಇನ್ನೂ 1 ಸಾವಿರಕ್ಕೂ ಅಧಿಕ ಗುಂಡಿಗಳಿದ್ದು, ಅದನ್ನು ಮುಚ್ಚಲು ಗಡುವನ್ನು ವಿಸ್ತರಣೆ ಮಾಡುವುದು ಅನಿವಾರ್ಯವಾಗಿದೆ.
ಆಗಸ್ಟ್ ತಿಂಗಳ ಬಳಿಕ ಸುರಿದ ಮಳೆಯಿಂದಾಗಿ ಬೆಂಗಳೂರು ನಗರದ ರಸ್ತೆಗಳಲ್ಲಿ ಗುಂಡಿಗಳಲ್ಲಿ ಕಾಣಿಸಿಕೊಂಡಿದ್ದವು. ವಾಹನ ಸವಾರರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಯಡಿಯೂರಪ್ಪ ಬೆಂಗಳೂರು ನಗರ ಪ್ರದಕ್ಷಿಣೆ ಮಾಡಿ ರಸ್ತೆ ಗುಂಡಿ ಮುಚ್ಚಲು ಸೂಚನೆ ನೀಡಿದ್ದರು.
ಕಲಾವಿದ ಬಾದಲ್ ನಂಜುಂಡಸ್ವಾಮಿ ಬೆಂಗಳೂರಿನ ರಸ್ತೆಯಲ್ಲಿ ಗಗನಯಾತ್ರಿ ವಾಕಿಂಗ್ ಮಾಡುವಂತೆ ದೃಶ್ಯವನ್ನು ಚಿತ್ರೀಕರಿಸಿ ಬೆಂಗಳೂರು ನಗರದ ಸ್ಥಿತಿಯನ್ನು ಜಗತ್ತಿಗೆ ತಿಳಿಸಿದ್ದರು. ಬಿಬಿಎಂಪಿಗೆ ಇದು ತೀವ್ರ ಮುಜುಗರ ಉಂಟು ಮಾಡಿತ್ತು.












Click it and Unblock the Notifications