ಜನರ ಮೇಲೆ ಪೊಲೀಸರ ಲಾಠಿ ಏಟು: ಪಿಐಎಲ್ ವಜಾ
ಬೆಂಗಳೂರು, ಮೇ. 18: ಕೊರೊನಾ ಲಾಕ್ ಡೌನ್ ವೇಳೆ ಸಾರ್ವಜನಿಕರ ಮೇಲೆ ಲಾಠಿ ದರ್ಪ ತೋರಿದ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಸೂಕ್ತ ಸಾಕ್ಷಾಧಾರಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಅರ್ಜಿದಾರ ವಕೀಲ ಬಾಲಕೃಷ್ಣನ್ ಅವರಿಗೆ ಒಂದು ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲಯದ ಮಹತ್ವದ ತೀರ್ಪು ನೀಡಿದೆ.
ಪೊಲೀಸರು ಬಾಯಿ ಮಾತಿನಲ್ಲಿ ಹೇಳಿದರೆ ನಮ್ಮ ಜನ ಕೇಳುತ್ತಾರಾ ? ನಮ್ಮ ಜನರು ಅಷ್ಟು ನಾಗರೀಕರಾಗಿದ್ದಾರಾ ? ಕೋವಿಡ್ ನಿಂದ ಎಷ್ಟು ಮಂದಿ ಪೊಲೀಸರು ಸಾವಿಗೀಡಾಗಿದ್ದಾರೆ ಎಂಬುದು ಗೊತ್ತಿದೆಯೇ ಎಂದು ನ್ಯಾ. ಸತೀಶ್ ಚಂದ್ರ ಶರ್ಮಾ, ಹಾಗೂ ಎಂ.. ನಾಗಪ್ಪ ಪ್ರಸನ್ನ ಅವರಿದ್ದ ಪೀಠ ಪ್ರಶ್ನೆ ಮಾಡಿತು. ಪೊಲೀಸರು ತಮ್ಮ ಖುಷಿಯಾಗಿ ಲಾಠಿ ಎತ್ತುವುದಿಲ್ಲ. ಕೆಲವು ಪೊಲೀಸರಿಗೆ ಊಟ, ನೀರು ಕೂಡ ಸಿಗುತ್ತಿಲ್ಲ. ಇಡೀ ಪ್ರಪಂಚವೇ ಕೋವಿಡ್ ಸೋಂಕಿನಿಂದ ನರಳುತ್ತಿದೆ. ಜೀವ ಭಯವಿದ್ದರೂ ಪೊಲೀಸರು ತಮ್ಮ ಕರ್ತವ್ಯ ಪಾಲನೆ ಮಾಡುತ್ತಿದ್ದಾರೆ. ಕರ್ನಾಟಕ ಪೊಲೀಸರು ಶಿಸ್ತು ಬದ್ಧ ಅಧಿಕಾರಿಗಳು. ಒಂದಡೆ ಚೌಕಟ್ಟು ಮೀರಿ ಕಾರ್ಯ ನಿರ್ವಹಿಸರಬಹುದು. ಆದರೆ ಎಲ್ಲಾ ಪೊಲೀಸರನ್ನು ವಿಚಾರಣೆ ನಡೆಸಲು ಸಾಧ್ಯವಿಲ್ಲ. ಆರೋಪಕ್ಕೆ ಪೂರಕವಾಗಿ ಅರ್ಜಿದಾರರ ನಿಕರ ಪೊಲೀಸರ ವಿರುದ್ಧ ಯಾವುದೇ ಸಾಕ್ಷಾಧಾರಗಳನ್ನು ಒದಗಿಸಿಲ್ಲ. ಹೀಗಾಗಿ ಈ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿಗಣಿಸಲಾಗದು ಎಂದು ವಿಭಾಗೀಯ ನ್ಯಾಯಪೀಠ ತೀರ್ಪು ನೀಡಿತು.
ಇನ್ನು ಪೊಲೀಸರು ಗಂಭೀರ ಸ್ವರೂಪವಾಗಿ ಹಲ್ಲೆ ಮಾಡಿದ್ದರೆ, ಅಂತಹ ಪ್ರಕರಣದಲ್ಲಿ ಸಾರ್ವಜನಿಕರೇ ಸ್ವತಃ ಖಾಸಗಿ ದೂರು ಸಲ್ಲಿಸಲು ಅವಕಾಶವಿದೆ. ಸಾಕ್ಷಾಧಾರಗಳು ಲಭ್ಯವಿಲ್ಲದ ಕಾರಣ, ಪೊಲೀಸರು ದುರುದ್ದೇಶ ಪೂರ್ವಕವಾಗಿ ಚೌಕಟ್ಟು ಮೀರಿ ಕಾರ್ಯ ನಿರ್ವಹಿಸದ ಕಾರಣ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಪ್ರಕಟಿಸಿದ್ದಾರೆ. ದೂರುದಾರ ವಕೀಲ ಬಾಲಕೃಷ್ಣನ್ ಅವರಿಗೆ ಒಂದು ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ.

Recommended Video
ರಾಜ್ಯದಲ್ಲಿ ಕಠಿಣ ಲಾಕ್ ಡೌನ್ ನಿಯಮ ಘೋಷಣೆಯಾಗುತ್ತಿದ್ದಂತೆ ಪೊಲೀಸರು ರಾಜ್ಯದಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ಇದರ ನಡುವೆ ಸಾರ್ವಜನಿಕರ ಮೇಲೆ ಪೊಲೀಸರು ಹಲ್ಲೆ ನಡೆಸಿದ ಅನೇಕ ಘಟನೆಗಳು ಮರುಕಳಿಸಿದವು. ಪೊಲೀಸರ ವರ್ತನೆ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕ ಟೀಕೆಗೆ ಒಳಗಾಯಿತು. ಇದರ ಬೆನ್ನಲ್ಲೇ ಸಾರ್ವಜನಿಕರ ಮೇಲೆ ಹಲ್ಲೆ ಮಾಡದಂತೆ ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಆದೇಶಿಸಿದ್ದರು. ಇದೇ ಅವಧಿಯಲ್ಲಿ ರಾಜ್ಯ ಮಾನವ ಹಕ್ಕು ಆಯೋಗ ಕೂಡ ಪೊಲೀಸರ ಲಾಠಿ ದರ್ಪದ ಬಗ್ಗೆ ಧ್ವನಿಯೆತ್ತಿತು. ಆ ಬಳಿಕ ಪೊಲೀಸರ ಲಾಟಿ ದರ್ಪ ಸ್ಥಗಿತಗೊಂಡಿತ್ತು.












Click it and Unblock the Notifications