ಮಹಿಳೆಯ ನಿಗೂಢ ಕೊಲೆ ರಹಸ್ಯ ಭೇದಿಸಿದ ಪೊಲೀಸರು
ಆರೋಪಿಯನ್ನು ಪತ್ತೆ ಹಚ್ಚಲು ಜಯನಗರ ಉಪ ವಿಭಾಗದ ಎಸಿಪಿ ನೇತೃತ್ವದಲ್ಲಿ ಸಿದ್ದಾಪುರ ಠಾಣೆಯ ಪೊಲೀಸ್ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.
ವಿಶೇಷ ತಂಡ ಮೃತ ಮಹಿಳೆಯ ಸಂಬಂಧಿಕರು, ಅಕ್ಕಪಕ್ಕದ ನಿವಾಸಿಗಳು, ಸ್ಥಳೀಯ ಜನರನ್ನು ವಿಚಾರಣೆಗೊಳಪಡಿಸಿತ್ತು. ಅಲ್ಲದೇ, ಬೆಂಗಳೂರು ನಗರ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸುತ್ತಾಡಿ ಮಾಹಿತಿ ಸಂಗ್ರಹಿಸಿ ವೃದ್ಧ ಮಹಿಳೆಯನ್ನು ಕೊಲೆಗೈದು ಅತ್ತಿಬೆಲೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಸೆಂದಿಲ್ ಕುಮಾರ್ ತಂಗವೇಲು ತಮಿಳುನಾಡಿನ ಪಳನಿ ಮೂಲದವನು. ಮೃತ ಮಹಿಳೆ ಪುಷ್ಪ ಅವರ ಸೋದರತ್ತೆಯ ಮೊಮ್ಮಗ. ಇಪ್ಪತ್ತು ವರ್ಷಗಳ ಹಿಂದೆ ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ತರಕಾರಿ ವ್ಯಾಪಾರ ಮಾಡುತ್ತಿದ್ದ.
ತರಕಾರಿ ವ್ಯಾಪಾರ ಬಿಟ್ಟು ನಂತರ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸಿ, ವ್ಯಾಪಾರ ಮಾಡುವ ವ್ಯವಹಾರ ನಡೆಸಿಕೊಂಡು ಭೈರಸಂದ್ರದಲ್ಲಿ ನೆಲೆಸಿದ್ದ. ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದ ಆರೋಪಿ ನಾಲ್ಕು ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ.
ಸಾಲಗಾರರ ಕಾಟ ಜಾಸ್ತಿಯಾದಾಗ ಮೃತ ಮಹಿಳೆ ಪುಷ್ಪ ಅವರ ಪತಿ ವಿ ಕೆ ನಟರಾಜ್ ಅವರ ಬಳಿ ಬಡ್ದಿಗೆ ದುಡ್ಡು ಕೊಡಿಸುವಂತೆ ಪೀಡಿಸುತ್ತಿದ್ದ. ಆದರ ನಟರಾಜ್ ಹಣ ನೀಡಲು ನಿರಾಕರಿಸಿದ್ದರು.
ದಿನಾಂಕ 14.12.2013ರಂದು ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಆರೋಪಿ ಮತ್ತೆ ನಟರಾಜ್ ಅವರ ಮನೆಗೆ ಬಂದಿದ್ದಾನೆ. ಆ ಸಂದರ್ಭದಲ್ಲಿ ನಟರಾಜ್ ಮನೆಯಲ್ಲಿರಲಿಲ್ಲ. ಮೃತ ಮಹಿಳೆ ಪುಷ್ಪ ಅವರ ಬಳಿ ದುಡ್ಡು ಕೊಡುವಂತೆ ಪೀಡಿಸಿದ್ದಾನೆ. ನಿನ್ನ ದೊಡ್ಡಪ್ಪ (ನಟರಾಜ್) ಬಂದ ಮೇಲೆ ಹಣ ಕೊಡಿಸುತ್ತೇನೆಂದು ಪುಷ್ಪ ಹೇಳಿದ್ದಾರೆ.
ಹಣ ಇಲ್ಲದಿದ್ದರೆ ಪರವಾಗಿಲ್ಲ ಕತ್ತಿನಲ್ಲಿರುವ ಚಿನ್ನದ ಸರವನ್ನು ಕೊಡಿ ಎಂದು ಬೇಡಿ ಕೊಂಡಿದ್ದಾನೆ. ಅವರು ಸರ ಕೊಡಲು ನಿರಾಕರಿಸಿದಾಗ ಏಕಾಏಕಿ ತನ್ನ ಬಳಿಯಿದ್ದ ಚಾಕುವಿನಿಂದ ಕೊಲೆಗೈದು ಆಕೆಯ ಕುತ್ತಿಗೆಯಲ್ಲಿದ್ದ 110 ಗ್ರಾಮಿನ ಸರ ಮತ್ತು ಬಳೆಯನ್ನು ದೋಚಿ ಅತ್ತಿಬೆಲೆಯಲ್ಲಿ ಅಡಗಿ ಕೂತಿದ್ದ.
ವಿಶೇಷ ತಂಡವು ಮಿಂಚಿನ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಾದ 5 ದಿನಗಳೊಳಗಾಗಿ ಕೊಲೆಗೈದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಕೊಲೆಗೈಯಲು ಬಳಸಿದ್ದ ಚಾಕು ಮತ್ತು ದೋಚಿದ್ದ ಸುಮಾರು 3.30 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ವಶ ಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಈ ನಿಗೂಢ ಕೊಲೆ ಪ್ರಕರಣ ಸಿದ್ದಾಪುರ ಮತ್ತು ಸುತ್ತಮುತ್ತಲ ಪ್ರದೇಶಗಳ ನಿವಾಸಿಯಲ್ಲಿ ಭಯದ ವಾತಾವರಣವನ್ನುಂಟು ಮಾಡಿತ್ತು. ಈ ಮಹತ್ವದ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಅತ್ಯುತ್ತಮ ಕಾರ್ಯವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.