Narendra Modi: ಬೆಂಗಳೂರಿನಲ್ಲಿ ನರೇಂದ್ರ ಮೋದಿ ರೋಡ್ ಶೋ ವೇಳಾಪಟ್ಟಿ ಬದಲಾವಣೆ; ಒಂದಲ್ಲ 2 ದಿನ
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಗೆಲ್ಲಲು ಭರ್ಜರಿ ರಣತಂತ್ರ ರೂಪಿಸಿರುವ ಆಡಳಿತರೂಢ ಬಿಜೆಪಿ ಪಕ್ಷ, ಮತ್ತೊಮ್ಮೆ ಅಧಿಕಾರಕ್ಕೇರಲು ಕೊನೆಯ ಕ್ಷಣದವರೆಗೂ ಹೋರಾಟ ಮುಂದುವರೆಸುತ್ತಿದೆ.
ಕರುನಾಡ ಕುರುಕ್ಷೇತ್ರ ಗೆಲ್ಲಲು ರಾಜ್ಯ ನಾಯಕರು ಸೇರಿದಂತೆ ರಾಷ್ಟ್ರೀಯ ನಾಯಕರು ರಾಜ್ಯದಲ್ಲೇ ಠಿಕಾಣಿ ಹೂಡಿದ್ದು, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಪ್ರಚಾರ ನಡೆಸುತ್ತಿದ್ದಾರೆ. ಅಷ್ಟೆ ಅಲ್ಲದೆ, ಬಿಜೆಪಿ ಕೊನೆಯ ಮತ್ತು ದೊಡ್ಡ ಅಸ್ತ್ರವಾದ ಪ್ರಧಾನಿ ನರೇಂದ್ರ ಮೋದಿ ಕೂಡ ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಸಮಾವೇಶ ಮತ್ತು ರೋಡ್ ಶೋ ನಡೆಸುತ್ತಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಈ ಹಿಂದೆ ಶನಿವಾರ, ಮೇ 6ರಂದು ನಿಗದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿದ್ದು, ಇದೀಗ ಶನಿವಾರ ಮತ್ತು ಭಾನುವಾರ ಎರಡು ದಿನ ರೋಡ್ ಶೋ ನಡೆಸಲು ನಿರ್ಧರಿಸಲಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಪ್ರತಿದಿನ ಸಾಯಂಕಾಲ ಮತ್ತು ರಾತ್ರಿ ಜಿಟಿಜಿಟಿ ಮಳೆಯಾಗುತ್ತಿದೆ. ಈ ಕಾರಣದಿಂದ ಶನಿವಾರ ಸಂಜೆ ನಿಗದಿಯಾಗಿದ್ದ ರೋಡ್ ಶೋವನ್ನು ಭಾನುವಾರ ಬೆಳಗ್ಗೆ 10 ಗಂಟೆಗೆ ಮುಂದೂಡಲಾಗಿದೆ.
ಬೆಂಗಳೂರಿನಲ್ಲಿ ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೊದಲ ಹಂತದ ರೋಡ್ ಶೋ ನಡೆದರೆ, ಎರಡನೇ ಹಂತದಲ್ಲಿ ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ರೋಡ್ ಶೋ ನಡೆಯಲಿದೆ.
ಕರ್ನಾಟಕದಲ್ಲಿ ಸತತ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಪಣತೊಟ್ಟಿರುವ ಬಿಜೆಪಿ, ನರೇಂದ್ರ ಮೋದಿ ಮೂಲಕ ಪ್ರಚಾರ ಕಣದಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಏಪ್ರಿಲ್ 29ರಿಂದ ಆರಂಭವಾಗಿರುವ ನರೇಂದ್ರ ಮೋದಿ ದಂಡಯಾತ್ರೆ ಮೇ 7ರವರೆಗೂ ನಡೆಯಲಿದೆ.

ಈಗಾಗಲೇ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೇ ಮೈಸೂರು ಭಾಗ, ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಬೃಹತ್ ಸಮಾವೇಶ ಮತ್ತು ರೋಡ್ ಶೋ ಮೂಲಕ ಬಿಜೆಪಿ ಪರ ಎರಡು ಹಂತದ ಪ್ರಚಾರ ನಡೆಸಿದ್ದಾರೆ.
ಇದೀಗ ಗುಜರಾತ್ ಚುನಾವಣೆ ವೇಳೆಯಲ್ಲಿ ಅಹಮದಾಬಾದ್ನಲ್ಲಿ ನಡೆದ ಬೃಹತ್ ರೋಡ್ ಶೋ ಮಾದರಿಯನ್ನು ಬೆಂಗಳೂರಿನಲ್ಲೂ ಪ್ರಯೋಗಿಸಲು ಬಿಜೆಪಿ ಮುಂದಾಗಿದೆ. ಹೀಗಾಗಿ "ನಮ್ಮ ಕರ್ನಾಟಕ ಯಾತ್ರೆ' ಹೆಸರಿನಲ್ಲಿ ಮೇ 6 ಮತ್ತು ಮೇ 7ರಂದು ರಾಜಧಾನಿ ಬೆಂಗಳೂರಿನಲ್ಲಿ ಒಟ್ಟು 38 ಕಿಮೀ ರೋಡ್ ಶೋ ನಡೆಸಲಿದ್ದಾರೆ.
ಈ ಮೊದಲು ಶನಿವಾರ ಒಂದೇ ದಿನ ಬೆಳಗ್ಗೆ ಮತ್ತು ಸಂಜೆ ಎರಡು ರೋಡ್ ಶೋ ನಡೆಸಲು ನಿರ್ಧರಿಸಲಾಗಿತ್ತು. ಸಾಯಂಕಾಲದ ರೋಡ್ ಶೋಗೆ ಮಳೆ ಅಡ್ಡಿಪಡಿಸುವ ಹಿನ್ನೆಲೆ ಭಾನುವಾರ ಬೆಳಗ್ಗೆ ರೋಡ್ ಶೋ ನಡೆಸಲು ತೀರ್ಮಾನಿಸಲಾಗಿದೆ.
ಶನಿವಾರ, ಮೇ 6ರ ರೋಡ್ ಶೋ ಮಾರ್ಗ
ಮೇ 6ರ ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಐದು ಕ್ಷೇತ್ರಗಳ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ. ಹಳೇ ವಿಮಾನ ನಿಲ್ದಾಣ ಜಂಕ್ಷನ್ ಬಳಿಯ ಸುರಂಜನ್ ದಾಸ್ ರಸ್ತೆ, ಬೆಮೆಲ್ ಕಾರ್ಖಾನೆ ಜಂಕ್ಷನ್, ತಿಪ್ಪಸಂದ್ರ ಮುಖ್ಯ ರಸ್ತೆ, ಎಚ್ಎಎಲ್ 2ನೇ ಹಂತದ 80 ಅಡಿ ಜಂಕ್ಷನ್, ಸಾಯಿ ರಸ್ತೆ ಜಂಕ್ಷನ್, ಇಂದಿರಾನಗರ, ಚಿನ್ಮಯ ಮಿಷನ್ ಆಸ್ಪತ್ರೆ ರಸ್ತೆ, ಹಳೇ ಮದ್ರಾಸ್ ರಸ್ತೆಯ ಸ್ವಾಮಿ ವಿವೇಕಾನಂದ ರಸ್ತೆ, ಟ್ರಿನಿಟಿ ವೃತ್ತ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯವರೆಗೂ ರೋಡ್ ಶೋ ನಡೆಯಲಿದೆ.
ಭಾನುವಾರ, ಮೇ 7ರಂದು ರೋಡ್ ಶೋ ಮಾರ್ಗ
ಶನಿವಾರ ಸಂಜೆ ನಿಗದಿಯಾಗಿದ್ದ ರೋಡ್ ಶೋ ಭಾನುವಾರ ಬೆಳಗ್ಗೆಗೆ ಮುಂದೂಡಿಯಾಗಿದೆ. ಜೆ.ಪಿ. ನಗರದ ಆರ್ಬಿಐನಿಂದ ಪ್ರಾರಂಭವಾಗಿ ಬೊಮ್ಮನಹಳ್ಳಿ, ಜೆ.ಪಿ.ನಗರ, ಜಯನಗರ, ಅರಬಿಂದೊ ಮಾರ್ಗ, ಕೂಲ್ ಜಾಯಿಂಟ್, ಮಯ್ಯಾಸ್, ಕರಿಸಂದ್ರ, ಸೌತ್ ಎಂಡ್ ಸರ್ಕಲ್, ನೆಟ್ಟಕಲ್ಲಪ್ಪ ಸರ್ಕಲ್, ಎನ್ಆರ್ ಕಾಲೋನಿ, ಬಸವನಗುಡಿ, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್, ಟಿ.ಆರ್. ಮಿಲ್, ಸಿರ್ಸಿ ಸರ್ಕಲ್, ಈಟಾ ಮಾಲ್, ಮಾಗಡಿ ರಸ್ತೆ, ಬಸವೇಶ್ವರ ನಗರ, ವೆಸ್ಟ್ ಆಫ್ ಕಾರ್ಡ್ ರೋಡ್, ಮೋದಿ ಆಸ್ಪತ್ರೆ, ನವರಂಗ್ ಸರ್ಕಲ್, ಸಂಪಿಗೆ ರಸ್ತೆ, ಮಲ್ಲೇಶ್ವರ, ಸ್ಯಾಂಕಿ ಟ್ಯಾಂಕಿ ಬಳಿಯ ಮಾರಮ್ಮ ದೇವಸ್ಥಾನ ಬಳಿ ರೋಡ್ ಶೋ ಅಂತ್ಯವಾಗಲಿದೆ.
ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು 28 ವಿಧಾನಸಭಾ ಕ್ಷೇತ್ರಗಳಿವೆ. ಬೆಂಗಳೂರು ಗ್ರಾಮಾಂತರದ ನಾಲ್ಕು ಕ್ಷೇತ್ರಗಳನ್ನು ಸೇರಿಸಿದರೆ ಒಟ್ಟು 32 ಕ್ಷೇತ್ರಗಳಾಗುತ್ತವೆ. ಪೂರ್ಣ ಬಹುಮತ ಪಡೆಯಲು ಬೆಂಗಳೂರಿನಲ್ಲಿ ಹೆಚ್ಚು ಸ್ಥಾನ ಗೆಲ್ಲಲೇಬೇಕಿದೆ. ಹೀಗಾಗಿ ಪ್ರಧಾನಿ ಮೋದಿ ರಾಜಧಾನಿಯನ್ನು ಟಾರ್ಗೆಟ್ ಮಾಡಿ, ವಾರಾಂತ್ಯದಲ್ಲಿ ಮೆಗಾ ರೋಡ್ ಶೋ ನಡೆಸಲಿದ್ದಾರೆ.
ಸಾರ್ವಜನಿಕರು ಮೇ 6 ಮತ್ತು 7ರಂದು ಬೆಳಗ್ಗೆ ನಡೆಯಲಿರುವ ಪ್ರಧಾನಮಂತ್ರಿ ರೋಡ್ ಶೋ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವಿರಲಿದೆ. ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದಲ್ಲಿ ಸೂಚಿಸಲಾಗಿದೆ. ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications