ರಂಜಾನ್ವರೆಗೆ ತೊಂದರೆ ಕೊಡಬೇಡಿ: ಜಮೀರ್ ಅಹ್ಮದ್ ಮನವಿ
ಬೆಂಗಳೂರು, ಏಪ್ರಿಲ್ 19: "ಸರಕಾರದ ಏನು ಮಾರ್ಗಸೂಚಿಯಿದೆಯೋ ಅದನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಆದರೆ, ದಯವಿಟ್ಟು ರಂಜಾನ್ ಹಬ್ಬದವರೆಗೆ ನಮಗೆ ತೊಂದರೆ ಕೊಡಬೇಡಿ ಎಂದು ಸಭೆಯಲ್ಲಿ ಮನವಿ ಮಾಡಿದ್ದೇನೆ"ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದರು.
"ಜಾಮಿಯಾ ಮೈದಾನದಲ್ಲಿ ಇಪ್ಪತ್ತು ಸಾವಿರ ಜನ ನಮಾಜ್ ಮಾಡಬಹುದು. ಆದರೆ, ಸಾಮಾಜಿಕ ಅಂತರ ಕಾಯ್ದುಕೊಂಡು ಬರೀ ಐದು ಸಾವಿರ ಜನ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ನೈಟ್ ಕರ್ಫ್ಯೂನಿಂದಾಗಿ ರಾತ್ರಿ 10.30ಗೆ ಮಾಡಬೇಕಾಗಿರುವ ನಮಾಜ್ ಅನ್ನು 9.30ಕ್ಕೆ ಮುಗಿಸುತ್ತಿದ್ದೇವೆ"ಎಂದು ಜಮೀರ್ ಹೇಳಿದರು.
ಬೆಂಗಳೂರು ನಗರಕ್ಕೆ ಕೊರೊನಾ ಹೊಸ ಮಾರ್ಗಸೂಚಿ ಸಂಬಂಧ ಕರೆಯಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಜಮೀರ್, "ಮುಸ್ಲಿಮರು ಶವವನ್ನು ಮಣ್ಣು ಮಾಡುತ್ತಾರೆ. ಸ್ಮಶಾನಕ್ಕೆ ಜಾಗ ಕೊಡಿ ಎಂದು ಅಶೋಕ್ ಅವರಲ್ಲಿ ಮನವಿ ಮಾಡಿದ್ದೇನೆ. ನಗರದ ನಾಲ್ಕು ಭಾಗಗಳಲ್ಲಿ ಜಾಗ ನೋಡಿದ್ದೇವೆ ಎಂದು ಅಶೋಕ್ ಹೇಳಿದ್ದಾರೆ"ಎಂದು ಜಮೀರ್ ಈ ಸಂದರ್ಭದಲ್ಲಿ ಹೇಳಿದರು.

"ನೈಟ್ ಕರ್ಫ್ಯೂ ಹಾಕಿದ್ದಾರೆ, ರಾತ್ರಿ ಕೂರೊನಾ ಬರುವುದಿಲ್ಲವೇ. ಸರಕಾರ ಮಾರ್ಗಸೂಚಿ ರೆಡಿ ಮಾಡುವಾಗ ಎಲ್ಲವನ್ನೂ ಗಮನಿಸಬೇಕು. ಸಭೆಯಲ್ಲಿ ಸೆಕ್ಷನ್ 144 ಹಾಕಿ ಎಂದು ನಾವು ಸಲಹೆಯನ್ನು ನೀಡಿದ್ದೇವೆ"ಎಂದು ಜಮೀರ್ ಹೇಳಿದರು.
"ರಂಜಾನ್ ಸಂದರ್ಭದಲ್ಲಿ ಒಟ್ಟು ಐದು ಬಾರಿ ನಮಾಜ್ ಮಾಡುವ ಪದ್ದತಿಯಿದೆ. ಸರಕಾರದ ಎಲ್ಲಾ ಕೊರೊನಾ ಗೈಡ್ಲೈನ್ಸ್ ಅನ್ನು ನಾವು ಪಾಲಿಸುತ್ತಿದ್ದೇವೆ. ರೋಗಿಗಳಿಗೆ ಆಕ್ಸಿಜನ್ ಸಮಸ್ಯೆಯಿದೆ, ಬೆಡ್ ಸಮಸ್ಯೆಯಿದೆ, ಮೊದಲು ಅದನ್ನು ಸರಿಪಡಿಸಲಿ"ಎನ್ನುವ ಸಲಹೆಯನ್ನು ಜಮೀರ್ ಸರಕಾರಕ್ಕೆ ನೀಡಿದರು.
"ಕೊರೊನಾ ಯಾವಾಗ ಬೇಕಾದರೂ ಬರಬಹುದು, ಇದನ್ನು ಮಟ್ಟಹಾಕಲು ಲಾಕ್ ಡೌನ್ ಪರಿಹಾರವಲ್ಲ ಎನ್ನುವ ಸಲಹೆಯನ್ನು ನಾವು ಸಭೆಯಲ್ಲಿ ಕೊಟ್ಟಿದ್ದೇವೆ"ಎಂದು ಜಮೀರ್ ಹೇಳಿದರು.












Click it and Unblock the Notifications