ಪೀಣ್ಯಕ್ಕೆ ಬಸ್ ಶಿಫ್ಟ್: ಮೊದಲ ದಿನವೇ ಪ್ರಯಾಣಿಕರಿಂದ ಉತ್ತಮ ಸ್ಪಂದನೆ
ಬೆಂಗಳೂರು, ಏಪ್ರಿಲ್ 14: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೆಂಪೇಗೌಡ ಬಸ್ ನಿಲ್ದಾಣದಿಂದ ಕಾರ್ಯಾಚರಣೆಗೊಳ್ಳುತ್ತಿದ್ದ 52 ಸಾಮಾನ್ಯ ಬಸ್ ಗಳನ್ನು ಶುಕ್ರವಾರದಿಂದ ಪೀಣ್ಯ ಬಳಿಯ ಬಸವೇಶ್ವರ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದ್ದು ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆ, ಹಾಸನ, ಮಂಗಳೂರು, ಚಿಕ್ಕಮಗಳೂರು, ಧರ್ಮಸ್ಥಳ ಸೇರಿದಂತೆ ಇತರೆ ಪ್ರದೇಶಗಳಿಗೆ ತೆರಳುವ ಸಾಮಾನ್ಯ ಬಸ್ ಗಳನ್ನು ಬಸವೇಶ್ವರ ನಿಲ್ದಾಣಕ್ಕೆ ಸ್ಥಳಾಂತರಿಸಿ, ಅಲ್ಲಿಂದಲೇ ಕಾರ್ಯಾಚರಣೆ ಮಾಡಲಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಜಾಲಹಳ್ಳಿ ಮೆಟ್ರೋ ನಿಲ್ದಾಣದಿಂದ ಅಯ್ಯಪ್ಪಸ್ವಾಮಿ ದೇವಸ್ಥಾನ ಮಾರ್ಗವಾಗಿ ಬಸ್ ನಿಲ್ದಾಣಕ್ಕೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
KSRTC: ಪೀಣ್ಯ ನಿಲ್ದಾಣದಿಂದ ಪುನಃ ಬಸ್ಗಳ ಸೇವೆ ಆರಂಭ!
ಬಸ್ ಸಂಚಾರ ಆರಂಭಿಸಿ ಎರಡು ದಿನಗಳಷ್ಟೇ ಆಗಿರುವುದರಿಂದ ನಿರೀಕ್ಷೆಯಷ್ಟು ಪ್ರಯಾಣಿಕರು ನಿಲ್ದಾಣದತ್ತ ಬರಲಿಲ್ಲ. ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಪೀಣ್ಯ ನಿಲ್ದಾಣವು ಗುರುವಾರದಿಂದ ಪುನರಾರಂಭಗೊಂಡಿದೆ.ಗುರುವಾರ 46 ಬಸ್ ಗಳನ್ನು ಪೀಣ್ಯದಿಂದಲೇ ಕಾರ್ಯಾಚರಣೆಗೊಳಿಸಲಾಯಿತು. ಇದರಿಂದ ಪೀಣ್ಯ ಸುತ್ತಮುತ್ತಲಿನ ಸಾರ್ವಜನಿಕರು ಉತ್ತರ ಕರ್ನಾಟಕದತ್ತ ತೆರಳುವ ಬಸ್ ಗಳಿಗಾಗಿ ಮುಖ್ಯರಸ್ತೆಯಲ್ಲೇ ಕಾದು ನಿಲ್ಲುವುದು ತಪ್ಪಿದೆ.
ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಮತ್ತೆ ಜೀವಕಳೆ?
ಎಲ್ಲ ಬಸ್ ಚಾಲಕರಿಗೆ ಸೂಚನೆ: ಮೆಜೆಸ್ಟಿಕ್ ನಿಂದ ಸಂಚರಿಸುವ ಉಳಿದ ಎಲ್ಲ ಸಾಮಾನ್ಯ ಬಸ್ ಗಳು ಪೀಣ್ಯ ನಿಲ್ದಾಣ ಮಾರ್ಗವಾಗಿಯೇ ತೆರಳಬೇಕೆಂದು ಚಾಲಕ-ನಿರ್ವಾಹಕರಿಗೆ ಸೂಚಿಸಲಾಗಿದೆ. ಪೀಣ್ಯ ನಿಲ್ದಾಣಕ್ಕೆ ತೆರಳದೆ ಮುಖ್ಯ ರಸ್ತೆಯಲ್ಲಿಯೇ ಸಂಚರಿಸುವ ಬಸ್ ಗಳ ಮೇಲೆ ನಿಗಾ ಇಡಲು ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಕೆಎಸ್ ಆರ್ ಟಿಸಿ, ವಾಯುವ್ಯ, ಮತ್ತು ಈಶಾನ್ಯ ಸಾರಿಗೆ ಸಂಸ್ಥೆಯ ಸುಮಾರು 2500 ಬಸ್ ಗಳು ಮೆಜೆಸ್ಟಿಕ್ ನಿಲ್ದಾಣದಿಂದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕದತ್ತ ಸಂಚರಿಸುತ್ತವೆ. ಈ ಪೈಕಿ 980 ಸಾಮಾನ್ಯ ಬಸ್ ಗಳಿದ್ದು ಇವುಗಳಲ್ಲಿ 52 ವಾಹನಗಳನ್ನು ಪೀಣ್ಯಕ್ಕೆ ಸ್ಥಳಾಂತರಿಸಲಾಗಿದೆ.