ಬಿಜೆಪಿ ಮಿಷನ್ 150 ಸಾಧಿಸಿಯೇ ತೀರುತ್ತೇನೆ: ಬಿಎಸ್ ವೈ ವಿಶ್ವಾಸ
ಬೆಂಗಳೂರು, ಡಿಸೆಂಬರ್ 26: ಮುಂಬರುವ 2018ರ ರಾಜ್ಯದ ವಿಧಾನ ಸಭಾ ಚುನಾವಣೆಯಲ್ಲಿ 150 ಕ್ಕೂ ಹೆಚ್ಚು ಸ್ಥಾನವನ್ನು ಗಳಿಸಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯಾದ್ಯಂತ ಪರಿವರ್ತನಾ ಯಾತ್ರೆಯಲ್ಲಿ ನೇತೃತ್ವವನ್ನು ವಹಿಸಿ 150 ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಹೆಚ್ಚು ಪ್ರವಾಸ ನಡೆಸಿರುವ ಯಡಿಯೂರಪ್ಪ ರಾಜ್ಯದ ಆಡಳಿತ ಕಾಂಗ್ರೆಸ್ ನ ಭ್ರಷ್ಟ ಆಡಳಿತವನ್ನು ಜನರಿಗೆ ತಲುಪಿಸಿದ್ದು ಬಿಜೆಪಿ ಪಕ್ಷಕ್ಕೆ ಈ ಬಾರಿ ಜನ ಬೆಂಬಲ ನೀಡಲಿದ್ದಾರೆ ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರಾ: ಜ್ಯೋತಿಷಿ ಏನಂತಾರೆ?
ಪರಿವರ್ತನಾ ಯಾತ್ರೆ ರಾಜ್ಯಾದ್ಯಂತ ಯಶಸ್ವಿಯಾಗಿದ್ದು ಪಜಾಸತ್ತಾತ್ಮಕವಾಗಿ ಜನರಲ್ಲಿ ವಿಶ್ವಾಸ ತುಂಬಿಸಬಹುದಾದ ವಿರೋಧ ಪಕ್ಷವಾಗಿ ಅತ್ಯಂತ ಸಮರ್ಥನೀಯ ಕೆಲಸ ಮಾಡಿದೆ. ಪರಿವರ್ತನಾ ಯಾತ್ರೆ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಕಿತ್ತೆಸೆಯುವಲ್ಲಿ ಯಶಸ್ವಿಯಾಗಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಮಿಷನ್ 150 ತಮ್ಮ ಗುಡಿಯಾಗಿದ್ದು ಇದನ್ನು ತಲುಪುವ ನಿಟ್ಟಿನಲ್ಲಿ ಪರಿವರ್ತನಾ ಯಾತ್ರೆ ಸಾಕಷ್ಟು ಸಹಾಯವಾಗಲಿದೆ ಎಂದು ಅವರು ಹೇಳಿದ್ದಾರೆ.ಪರಿವರ್ತನಾ ಯಾತ್ರೆಗೆ ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚಾಲನೆ ನೀಡಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಜನವರಿ ಮೊದಲ ವಾರದಲ್ಲಿ ರಾಜ್ಯಕ್ಕೆ ಆಗಮಿಸಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಳ್ಗೊಳ್ಳಲಿದ್ದಾರೆ.
ಯಾತ್ರೆ ವೇಳೆ ರಾಜ್ಯಾದ್ಯಂತ ಬಿಜೆಪಿ ಪರ ಅಲೆ ಸೃಷ್ಟಿಯಾಗಿದ್ದು ಅದರಲ್ಲೂ ಉತ್ತರ ಕರ್ನಾಟಕ ಜಿಲ್ಲೆಯ ಪರಿವರ್ತನಾ ಮೆರವಣಿಗೆಯಲ್ಲಿ ಜನರಿಂದ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ.ವಿಶೇಷವಾಗಿ ಮಹದಾಯಿ ನದಿ ವಿವಾದ ಕುರಿತಂತೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಯಡಿಯೂರಪ್ಪ ಅವರಿಗೆ ಮಾತುಕತೆ ಕುರಿತಂತೆ ಸಕರಾತ್ಮಕವಾಗಿ ಬರೆದ ಪತ್ರದಿಂದ ಬಿಜೆಪಿ ಪರ ಸಾಕಷ್ಟು ಅಲೆ ರಾಜ್ಯಾದ್ಯಂತ ಕಾಣಿಸುತ್ತಿದೆ ಎಂದು ಬಿಜೆಪಿ ವಿಶ್ವಾಸ ವ್ಯಕ್ತಪಡಿಸುತ್ತಿದೆ.
ಬಿಜೆಪಿ ಸರಕಾರ ಸೂರ್ಯಚಂದ್ರರಷ್ಟೇ ಸತ್ಯ : ಯಡಿಯೂರಪ್ಪ
ಪರಿವರ್ತನಾ ಯಾತ್ರೆ ವೇಳೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಸಿಎಂ ಉದಾಸಿ ರಾಜ್ಯ ವಿಧಾನ ಸಭೆ ಚುನಾವಣೆ ಬಳಿಕ ದೇಶ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಒಂದು ವೇಳೆ ಬಿಜೆಪಿ ತನ್ನ ಗುರಿಯನ್ನು ತಲುಪಿದ್ದೇ ಆದರೆ ಕಾಂಗ್ರೆಸ್ ಮುಕ್ತ ಭಾರತ ಆಗುವುದು ಖಚಿತ ಆದರೆ ಈ ನಿಟ್ಟಿನಲ್ಲಿ ಬಿಜೆಪಿ ಕೈಗೊಂಡಿರುವ ಯಾತ್ರೆ ಎಷ್ಟು ಸಹಕಾರಿಯಾಗಲಿದೆ ಎಂಬುದನ್ನು ನೋಡಬೇಕಿದೆ.
ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರ ಮುಕ್ತವಾಗಿದೆ ಎಂದು ಹೇಳಿದ್ದರೂ ಲೋಕಾಯುಕ್ತದಂತಹ ಸಂಸ್ಥೆಯನ್ನು ಮುಚ್ಚಿ ಎಸಿಬಿಯಂತಹ ಹಲ್ಲಿಲ್ಲದ ಹಾವಿನಂತಹ ಸಂಸ್ಥೆಯನ್ನು ಹುಟ್ಟು ಹಾಕಿರುವುದು ಜನರಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ ಮುಕ್ತ ಹೇಗೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕುವಂತೆ ಮಾಡಿದೆ.
ಜನರು ಎಲ್ಲವನ್ನೂ ಅವಲೋಕಿಸುತ್ತಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಿಎಂ ಉದಾಸಿ ಅಭಿಪ್ರಾಯಪಟ್ಟಿದ್ದಾರೆ.