ಬೆಂಗಳೂರಿನಲ್ಲಿ ಫೆ.21ಕ್ಕೆ ಪಂಚಮಸಾಲಿ ಬೃಹತ್ ಸಮಾವೇಶ
ಬೆಂಗಳೂರು,ಫೆಬ್ರವರಿ 11: 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದವರು ಬೆಂಗಳೂರಿನಲ್ಲಿ ಫೆ.21ರಂದು ಬೃಹತ್ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ.
ಈ ಹಿಂದಿನ ವಿಧಾನಸೌಧ ಮುತ್ತಿಗೆ ಯೋಜನೆಯನ್ನು ಕೈಬಿಟ್ಟು 10 ಲಕ್ಷ ಪಂಚಮಸಾಲಿಗರನ್ನು ಸಮಾವೇಶದಲ್ಲಿ ಸೇರಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಲು ಸಮಾಜದ ಮುಖಂಡರು ಸಿದ್ಧರಾಗಿದ್ದಾರೆ.
ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರ ಪೀಠದ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪಂಚಮಸಾಲಿ ಸಮುದಾಯದ ಜನಪ್ರತಿನಿಧಿಗಳು, ಗಣ್ಯರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

2 ಎಮೀಸಲಾತಿಗಾಗಿ ಕೂಡಲಸಂಗಮದಿಂದ ಆರಂಭಿಸಲಾದ ಪಂಚಮಸಾಲಿಗರ ಪಾದಯಾತ್ರೆ ಶೀಘ್ರವೇ ಬೆಂಗಳೂರು ತಲುಪಲಿದೆ. ಆ ಬಳಿಕ ಫೆ.21ರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ವಸ್ತುಪ್ರದರ್ಶನಾ ಮೈದಾನದಲ್ಲಿ ಬೃಹತ್ ಪಂಚಮಸಾಲಿ ಸಮಾವೇಶ ನಡೆಯಲಿದೆ.
ಪಂಚಮಸಾಲಿ ಸಮುದಾಯದವರು ಮೊದಲ ಬಾರಿಗೆ ಇಂಥದ್ದೊಂದು ನಿರ್ಣಯ ಮಾಡಿದ್ದಾರೆ. ಅದರಂತೆ ಪ್ರತಿ ಮನೆಗೊಬ್ಬರಂತೆ ಸಮಾವೇಶದಲ್ಲಿ ಭಾಗವಹಿಸಬೇಕು ಎಂದು ಹೇಳಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ವಿಚಾರವನ್ನು ಸಮುದಾಯದ ಸಚಿವರು ಗಂಭೀರವಾಗಿ ಪರಿಗಣಿಸಬೇಕು. ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲೇ ನಮ್ಮ ಬೇಡಿಕೆ ಈಡೇರಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications