ನಮ್ಮ ಮೈತ್ರಿ ಕುಪೇಂದ್ರ ರೆಡ್ಡಿ ಜತೆ ಅಲ್ಲ, ಜೆಡಿಎಸ್ ಜತೆ: ಪರಂ ಗರಂ
ಬೆಂಗಳೂರು, ಮೇ 13: ಜೆಡಿಎಸ್ ಜತೆ ಕಷ್ಟ ಆದರೆ ಕಾಂಗ್ರೆಸ್ನವರು ತಮ್ಮ ದಾರಿ ನೋಡಿಕೊಳ್ಳಲಿ ಎಂದು ಹೇಳಿಕೆ ನೀಡಿರುವ ಜೆಡಿಎಸ್ ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ ವಿರುದ್ಧ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಕಿಡಿಕಾರಿದರು.
ಕುಪೇಂದ್ರ ರೆಡ್ಡಿ ಅವರ ಜತೆ ನಾವು ಮೈತ್ರಿ ಮಾಡಿಕೊಂಡಿಲ್ಲ. ನಾವು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿರುವುದು ಎಂದು ಪರಮೇಶ್ವರ್ ಹೇಳಿದರು.
ಇದಕ್ಕೂ ಮೊದಲು ಕಾಂಗ್ರೆಸ್ ಶಾಸಕ ಎಸ್ಟಿ ಸೋಮಶೇಖರ್, ಜೆಡಿಎಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ಸಿದ್ದರಾಮಯ್ಯ ಅವರ ಕುರಿತು ಜೆಡಿಎಸ್ ಮುಖಂಡರು ಏನು ಬೇಕಾದರೂ ಹೇಳಿಕೆ ನೀಡಬಹುದು. ಆದರೆ, ಅವರ ವರ್ಚಸ್ಸಿಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂಬುದನ್ನು ಅವರು ಆನೆ-ನಾಯಿ ಹೋಲಿಕೆ ಮೂಲಕ ಟಾಂಗ್ ನೀಡಿದ್ದರು.
'ಸಿದ್ದರಾಮಯ್ಯ ಸಿಎಂ ಆಗಲೆಂದು ಕೆಲವರು ಚಮಚಾಗಿರಿ ಮಾಡುತ್ತಿದ್ದಾರೆ'
ಸರ್ಕಾರ ರಚನೆ ಮಾಡೋಣ ಎಂದು ಜೆಡಿಎಸ್ನ ಯಾವ ನಾಯಕರೂ ಕಾಂಗ್ರೆಸ್ನವರ ಮನೆ ಬಾಗಿಲಿಗೆ ಹೋಗಿರಲಿಲ್ಲ. ಸಿಎಂ ಮಾಡಿ ಎಂದು ನಾವೇನೂ ಕೇಳಿರಲಿಲ್ಲ. ಅವರಿಗೆ ಕಷ್ಟ ಆಗುತ್ತಿದ್ದರೆ ಅವರ ದಾರಿ ನೋಡಿಕೊಳ್ಳಲಿ. ಅದನ್ನು ಬಿಟ್ಟು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಹೇಳಿಕೆ ನೀಡಿದ್ದ ಜೆಡಿಎಸ್ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ವಿರುದ್ಧ ಎಸ್ಟಿ ಸೋಮಶೇಖರ್ ಹರಿಹಾಯ್ದರು.
ಕುಪೇಂದ್ರ ರೆಡ್ಡಿ ರಾಜ್ಯಸಭಾ ಸದಸ್ಯರಾಗಿರಬಹುದು. ಹಾಗೆಂದು ಮೈತ್ರಿ ಸರ್ಕಾರದ ಕುರಿತು ಮಾತನಾಡಲು ಅವರು ಯಾರು? ಅವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಎಸ್ ಟಿ ಸೋಮಶೇಖರ್ ವಾಗ್ದಾಳಿ ನಡೆಸಿದ್ದರು.
ಆನೆ ನೋಡಿ ಬೊಗಳುವುದು ಸಹಜ
ಸಿದ್ದರಾಮಯ್ಯ ಅವರು ಆನೆ ಇದ್ದಂತೆ. ಆನೆ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಅದನ್ನು ಕಂಡು ನಾಯಿಗಳು ಬೊಗಳುವುದು, ಕೂಗುವುದು ಸಹಜ. ಆನೆಯಂತಿರುವ ಸಿದ್ದರಾಮಯ್ಯ ಹೊಗಳಿಕೆಗೆ ಹಿಗ್ಗುವುದೂ ಇಲ್ಲ, ತೆಗಳಿಕೆಗೆ ಕುಗ್ಗುವುದೂ ಇಲ್ಲ ಎಂದು ಎಸ್ ಟಿ ಸೋಮಶೇಖರ್ ಅವರು, ಸಿದ್ದರಾಮಯ್ಯ ಅವರ ಕುರಿತು ಹೇಳಿಕೆ ನೀಡುತ್ತಿರುವ ಜೆಡಿಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅವನ್ಯಾರೀ ಎಚ್ ವಿಶ್ವನಾಥ್, ಅವ್ನಿಗೆ ಏನ್ ಗೊತ್ತು, ಹೊಟ್ಟಿಕಿಚ್ಚು ಆತನಿಗೆ: ಸಿದ್ದರಾಮಯ್ಯ
ಕುಪೇಂದ್ರ ರೆಡ್ಡಿ ಯಾರು?
'ಹೂ ಈಸ್ ಕುಪೇಂದ್ರ ರೆಡ್ಡಿ? ಕುಪೇಂದ್ರ ರೆಡ್ಡಿ ರಾಜ್ಯಸಭಾ ಸದಸ್ಯರೇ ಇರಬಹುದು. ಆದರೆ, ಅವರೇನು ಸಮ್ಮಿಶ್ರ ಸರ್ಕಾರ ಮಾಡಿದ್ದಾರಾ? ಸಮ್ಮಿಶ್ರ ಸರ್ಕಾರದ ಮಾತುಕತೆ ನಡೆದಿರುವುದು ರಾಹುಲ್ ಗಾಂಧಿ ಮತ್ತು ದೇವೇಗೌಡರ ನಡುವೆ. ಈ ರೀತಿ ಹೇಳಿಕೆಗಳನ್ನು ನೀಡಲು ಕುಪೇಂದ್ರ ರೆಡ್ಡಿ ಯಾರು? ಅವರಿಗೆ ಮಾತನಾಡಲು ದೇವೇಗೌಡರು ಅಧಿಕಾರ ಕೊಟ್ಟಿದ್ದಾರಾ? ಮೈತ್ರಿ ಸರ್ಕಾರ, ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಲು ಕುಪೇಂದ್ರ ರೆಡ್ಡಿ ಅವರಿಗೆ ದೇವೇಗೌಡರು ಪವರ್ ಆಫ್ ಅಟಾರ್ನಿ ನೀಡಿದ್ದಾರೆಯೇ? ಎಂದು ಸೋಮಶೇಖರ್ ವಾಗ್ದಾಳಿ ನಡೆಸಿದರು.
ಜೆಡಿಎಸ್ ನಾಯಕರ ಮೇಲೆ ಬೆಂಕಿ ಉಗುಳಿದ ಸಿದ್ದರಾಮಯ್ಯ
ಕುಪೇಂದ್ರ ರೆಡ್ಡಿ ಹೇಳಿದ್ದೇನು?
ಜೆಡಿಎಸ್ಗೆ ಕಾಂಗ್ರೆಸ್ಗಿಂತ ಕಡಿಮೆ ಶಾಸಕರ ಸಂಖ್ಯಾಬಲ ಇದೆ ಎನ್ನುವುದನ್ನು ಒಪ್ಪುತ್ತೇನೆ. ಹಾಗೆಂದು ಸರ್ಕಾರ ರಚಿಸೋಣ ಎಂದು ಜೆಡಿಎಸ್ ನಾಯಕರು ಯಾರೂ ಕಾಂಗ್ರೆಸ್ ನಾಯಕರ ಮನೆಬಾಗಿಲಿಗೆ ಹೋಗಿರಲಿಲ್ಲ. ಗುಲಾಂ ನಬಿ ಆಜಾದ್ ಜತೆ ನಡೆದ ಮಾತುಕತೆಯ ವೇಳೆ ನಾನೂ ಇದ್ದೆ. ಮುಖ್ಯಮಂತ್ರಿ ವಿರುದ್ಧ ಹಾದಿಬೀದಿಯಲ್ಲಿ ನಿಂತು ಮಾತನಾಡುವುದು ಸರಿಯಲ್ಲ. ಮೈತ್ರಿಯಲ್ಲಿ ಮುಂದುವರಿಯುವುದು ಕಷ್ಟವಾದರೆ ಅವರು ತಮ್ಮ ದಾರಿ ನೋಡಿಕೊಳ್ಳಲಿ. ಅದನ್ನು ಬಿಟ್ಟು ಮುಖ್ಯಮಂತ್ರಿಗೆ ತೊಂದರೆ ಕೊಡುವುದು ಬೇಡ ಎಂದು ಕುಪೇಂದ್ರ ರೆಡ್ಡಿ ಹೇಳಿದ್ದರು.
ವಿಶ್ವನಾಥ್ ಮಟ್ಟಕ್ಕೆ ನಾವಿಲ್ಲ
ಸಿದ್ದರಾಮಯ್ಯ ಅವರನ್ನು ಬೆಂಬಲಿಸುವ ನಾವೆಲ್ಲ ಅವರ ಚಮಚಾಗಳು ಎಂದು ಕರೆದಿರುವ ಎಚ್ ವಿಶ್ವನಾಥ್ ಅವರ ಮಟ್ಟದಲ್ಲಿ ನಾವಿಲ್ಲ. ಅವರು ಜೆಡಿಎಸ್ ರಾಜ್ಯಾಧ್ಯಕ್ಷರು. ನಾವು ಸಣ್ಣಪುಟ್ಟ ಕ್ಷೇತ್ರಗಳ ಶಾಸಕರು. ಅವರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷರು ಉತ್ತರ ಕೊಡುತ್ತಾರೆ. ಸಿದ್ದರಾಮಯ್ಯ ಅವರು ನಮ್ಮ ಶಾಸಕಾಂಗ ನಾಯಕರು. ಅವರೇ ನಮ್ಮ ನಾಯಕರು ಎಂದು ಸೋಮಶೇಖರ್ ಹೇಳಿದರು.