ಐದನೇ ಪ್ರಯತ್ನದಲ್ಲಿ ಯುಪಿಎಸ್ಸಿ ಯಶಸ್ಸು ಕಂಡ ಬೆಂಗಳೂರು ಪೊಲೀಸ್ ಅಧಿಕಾರಿ
ಬೆಂಗಳೂರು, ಜೂನ್ 5 : ಬೆಂಗಳೂರು ಸಂಚಾರ ಪೊಲೀಸ್ ಗೆ ಹೆಮ್ಮೆ ಮೂಡಿದ ದಿವ್ಯ ಸಂದರ್ಭವಿದು. ಇಲಾಖೆಯವರೊಬ್ಬರು ಇಂಡಿಯನ್ ರೆವನ್ಯೂ ಸರ್ವೀಸ್ (ಐಆರ್ ಎಸ್)ಗೆ ಆಯ್ಕೆಯಾಗಿದ್ದಾರೆ. ತಮ್ಮ ಐದನೇ ಪ್ರಯತ್ನದಲ್ಲಿ ಬೆಂಗಳೂರಿನ ಸಬ್ ಇನ್ ಸ್ಪೆಕ್ಟರ್ ಸಂತೋಷ್ ಭೀಮಯ್ಯ ಯಶಸ್ಸು ಕಂಡಿದ್ದಾರೆ.
ಆ ಮೂಲಕ ಬೆನ್ನಟ್ಟಿದ ಕನಸುಗಳನ್ನು ಬಿಡದೆ ಸಾಧಿಸಿ ಎಂಬ ಸಂದೇಶವಾಗಿ ಅವರು ಕಾಣುತ್ತಿದ್ದಾರೆ. ಮೂವತ್ತೈದು ವರ್ಷದ ಸಂತೋಷ್ ಭೀಮಯ್ಯ ಅವರ ಕುಟುಂಬದಲ್ಲಿ ಸರಕಾರಿ ನೌಕರರು ಇದ್ದಾರೆ. ಅವರ ತಂದೆ ನಿವೃತ್ತ ಐಎಎಸ್ ಅಧಿಕಾರಿ. ಇನ್ನು ಸಹೋದರ ಐಎ ಎಸ್ ಆಗಿ ಸೇವೆ ಸಲ್ಲಿಸಿದ್ದಾರೆ.
ಇನ್ನು ಸಂತೋಷ್ ಪಾಲಿಗೆ ದೊಡ್ಡ ಶಕ್ತಿಯಾಗಿ ನಿಂತಿದ್ದು ಕುಟುಂಬ. 2007ರಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ಐಆರ್ ಎಸ್ ಅಧಿಕಾರಿಯಾಗಲು ಸಿದ್ಧವಾಗುತ್ತಿದ್ದಾರೆ. ನಿಮಗೆ ಈ ಪೊಲೀಸ್ ದಿರಿಸು ಮತ್ತೆ ನೆನಪಾಗುತ್ತದಾ ಎಂದು ಕೇಳಿದರೆ, ಖಂಡಿತಾ ಹೌದು ಅನ್ನುತ್ತಾರೆ.[ಯುಪಿಎಸ್ಸಿ ಟಾಪರ್ ನಂದಿನಿಗೆ ಸಿಕ್ಕ ಅಂಕಗಳು ಬಹಿರಂಗ]

ನಾನು ಐದನೇ ಪ್ರಯತ್ನದಲ್ಲಿ ಸಫಲನಾಗಿದ್ದೇನೆ. ಐದು ವರ್ಷದ ಹಿಂದೆ ಸಂದರ್ಶನದವರೆಗೆ ಹೋಗಿದ್ದೆ. ಅಲ್ಲಿಂದ ಮುಂದೆ ಆಗಲಿಲ್ಲ. ಆದರೆ ನನ್ನ ಪ್ರಯತ್ನ ಕೈ ಬಿಡಲಿಲ್ಲ. ನನ್ನ ಕುಟುಂಬ ಹಾಗೂ ಸ್ನೇಹಿತರು ಪ್ರೋತ್ಸಾಹ ನೀಡಿದರು. ಆದ್ದರಿಂದ ನಾನು ಇವತ್ತು ಇಲ್ಲಿದ್ದೀನಿ ಎಂದರು ಸಂತೋಷ್.
ಪೊಲೀಸ್ ಆಗಿದ್ದುಕೊಂಡು ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವುದು ಮಕ್ಕಳಾಟವಲ್ಲ. ಹಾಗಿದ್ದರೆ ಸಂತೋಷ್ ಹೇಗೆ ಯಶಸ್ಸು ಸಾಧಿಸಿದರು ಎಂಬುದು ಪ್ರಶ್ನೆ. ಅವರ ಮಾತಿನಲ್ಲೇ ಹೇಳುವುದಾದರೆ, "ನಾನು ನಾನ್ ಎಕ್ಸ್ ಕ್ಯೂಟಿವ್ ಹುದ್ದೆಯನ್ನು ಆರಿಸಿಕೊಂಡೆ. ಕಚೇರಿಗೆ ತೆರಳುವ ಮುಂಚೆ ಎರಡು ಗಂಟೆ ಓದುತ್ತಿದ್ದೆ.[2016ರ ರಾಜ್ಯದ ಐಎಎಸ್ ಸಾಧಕರ ಹಿಂದಿನ ಗುಟ್ಟು- ಶಂಕರ್ ಅಕಾಡೆಮಿ]
"ಕಚೇರಿ ಕೆಲಸ ಮುಗಿಸಿ ಬಂದು ಒಂದೆರಡು ಗಂಟೆ ವ್ಯಾಸಂಗ ಮಾಡುತ್ತಿದ್ದೆ. ನನ್ನ ಹಿರಿಯ ಅಧಿಕಾರಿಗಳ ಪ್ರೋತ್ಸಾಹ, ಉತ್ತೇಜನ ಇರಲಿಲ್ಲ ಅಂದರೆ ಇದು ಸಾಧ್ಯವೇ ಆಗುತ್ತಿರಲಿಲ್ಲ. ನಾನು ವಿಫಲ ಆದಾಗ ಪ್ರಯತ್ನ ಬಿಡಬೇಡ ಎಂದು ಪ್ರೋತ್ಸಾಹಿಸುತ್ತಿದ್ದರು. ಅದರ ಫಲಿತಾಂಶ ಈಗ ಸಿಕ್ಕಿದೆ" ಎನ್ನುತ್ತಾರೆ ಸಂತೋಷ್.
ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರು ಸಂತೋಷ್ ಸಾಧನೆಗೆ ಟ್ವಿಟ್ಟರ್ ನಲ್ಲಿ ಅಭಿನಂದಿಸಿದ್ದಾರೆ. ಇನ್ನು ಸಂತೋಷ್ ಹೇಳುವಂತೆ, ನನ್ನ ಮೊದಲ ಆಯ್ಕೆ ಐಎಎಸ್, ಎರಡನೇ ಪ್ರಾಶಸ್ತ್ಯ ಐಪಿಎಸ್, ಮೂರನೇ ಆಯ್ಕೆ ಐಆರ್ ಎಸ್ ಆಗಿತ್ತು. ಈಗ ಬಂದಿರುವ ಶ್ರೇಯಾಂಕದ ಪ್ರಕಾರ ಐಆರ್ ಎಸ್ ಆಗಬಹುದು ಎನ್ನುತ್ತಾರೆ.
ಇಷ್ಟು ವರ್ಷ ಉತ್ಸಾಹ ಉಳಿಸಿಕೊಳ್ಳುವುದು ಸಲೀಸಲ್ಲ. ಸ್ನೇಹಿತರು-ಕುಟುಂಬದವರು ದೊಡ್ಡ ಸಹಾಯ ಮಾಡಿದ್ದಾರೆ. ನಾನು ಪೊಲೀಸ್ ಅಧಿಕಾರಿ ಆಗಬಲ್ಲೆ ಅಂದರೆ, ಅದಕ್ಕಿಂತ ಹೆಚ್ಚಿನದನ್ನು ಸಾಧಿಸಲು ಯತ್ನಿಸಬೇಕು ಅಂದುಕೊಂಡಿದ್ದೆ ಎನ್ನುತ್ತ್ತಾರೆ ಸಂತೋಷ್.[ಆಕೆಯ ಛಲದೆದುರು ಸೀಳುಬಿಟ್ಟ 16 ಮೂಳೆಗಳೂ ಗೌಣವಾದವು!]
ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಸಂತೋಷ್ ಗೆ ನೆರವಾಗಲಿದೆ. ಇದೇ ಮಾತನ್ನು ಅವರು ಮತ್ತೊಮ್ಮೆ ಸ್ಪಷ್ಟಪಡಿಸುತ್ತಾರೆ.












Click it and Unblock the Notifications