ಮನೆ ಕಾಯುವ ನೆಪದಲ್ಲಿ ಬರುತ್ತಿದ್ದಾರೆ ಕಳ್ಳ ಸೆಕ್ಯೂರಿಟಿ ಗ್ಯಾಂಗ್.. ಬೆಂಗಳೂರಿಗರೇ ಹುಷಾರ್!
ಬೆಂಗಳೂರು, ಜುಲೈ 15: ಕಳ್ಳನಿಗೆ ಕೋಟೆ ಬಾಗಿಲ ಕೀಯನ್ನು ಕೊಟ್ಟು ಕಾವಲು ಕಾಯಲು ಬಿಟ್ಟರೇ ಏನಾಗುತ್ತದೆ. ಮನೆ ಮನೆಯನ್ನೆಲ್ಲಾ ದೋಚಿಕೊಂಡು ಕಾಲಿಗೆ ಬುದ್ದಿಯನ್ನು ಹೇಳುತ್ತಾನೆ. ಮನೆಯ ಭದ್ರತೆಗೆ ನಿಯೋಜಿಸುವ ಸೆಕ್ಯೂರಿಟಿಗಳೇ ಕಳ್ಳತನದ ಮೂಲ ಪುರುಷರಾಗುತ್ತಿದ್ದಾರೆ. ನಂಬಿಕೆಗೆ ಅರ್ಹರಾಗಬೇಕಿದ್ದವರು ನಂಬಿಕೆ ದ್ರೋಹ ಎಸಗುತ್ತಿದ್ದಾರೆ. ಈ ಬಗ್ಗೆ 'ಒನ್ಇಂಡಿಯಾ ಕನ್ನಡ' ವಿಶೇಷ ವರದಿಯನ್ನು ಸಿದ್ದಪಡಿಸಿದೆ.
ನೇಪಾಳ ಸೇರಿದಂತೆ ದೇಶದ ಹಲವು ರಾಜ್ಯದಿಂದ ಸಿಲಿಕಾನ್ ಸಿಟಿಗೆ ಜನ ಸೆಕ್ಯೂರಿಟಿಯಾಗಿ ಕೆಲಸ್ಕೆ ಸೇರಿಕೊಳ್ಳುತ್ತಾರೆ. ಮನೆಯ ವಾತಾವರಣ, ಮನೆಯಲ್ಲಿ ಎಲ್ಲೆಲ್ಲಿ ಏನಿರಬಹುದು, ಮನೆಯ ಸಿರಿತನವನ್ನೆಲ್ಲಾ ಕಣ್ಣಿನಲ್ಲೇ ಸ್ಕ್ಯಾನ್ ಮಾಡಿಕೊಂಡು ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನವನ್ನು ಮಾಡಿಬಿಡುತ್ತಾರೆ.
ಮನೆಯನ್ನು ನಿಯತ್ತಿನ ನಾಯಿಯಂತೆ ಕಾವಲು ಕಾಯುತ್ತಾರೆ ಎಂದು ನಂಬಿದವರೇ ಕಳ್ಳರಾದರೇ ನಂಬುವುದು ಯಾರನ್ನು. ಸೆಕ್ಯೂರಿಟಿಯನ್ನು ನಿಯೋಜನೆಯನ್ನು ಮಾಡುತ್ತಿರುವ ಏಜೆನ್ಸಿಗಳು ಕಮೀಷನ್ ಆಸೆಗೆ ಬಿದ್ದು ಸೆಕ್ಯೂರಿಟಿ ಉದ್ಯೋಗವನ್ನು ಕೇಳುವವರ ಹಿನ್ನೆಲೆಯನ್ನು , ಸೂಕ್ತವಾದ ದಾಖಲೆಗಳನ್ನು ಪಡೆಯದೇ ಉದ್ಯೋಗವನ್ನು ನೀಡುತ್ತಾರೆ. ಯಾವುದೋ ಮನೆಯೋ, ಕಚೇರಿಗೋ ಸೆಕ್ಯೂರಿಟಿಯಾಗಿ ನಿಯೋಜನೆಯನ್ನು ಮಾಡುತ್ತಾರೆ. ಆ ಮೂಲಕ ಕಳ್ಳರಿಗೆ ರಹದಾರಿಯನ್ನು ಮಾಡಿಕೊಟ್ಟಂತೆ ಆಗುತ್ತದೆ.

ಸೆಕ್ಯೂರಿಟಿ ಏಜೆನ್ಸಿ ಪಾಲಿಸಬೇಕಿದ್ದೇನು?
ಮನೆ ಮತ್ತು ಕಚೇರಿ ಕಾಯಬೇಕಾದ ಭದ್ರತಾ ಸಿಬ್ಬಂದಿಗಳೇ ಖದೀಮರಾಗುತ್ತಿದ್ದಾರೆ. ಕಮೀಷನ್ ಆಸೆಗಾಗಿ ಸೆಕ್ಯೂರಿಟಿ ಏಜೆನ್ಸಿಗಳು ಉದ್ಯೋಗಿಗಳ ಪೂರ್ವಾಚಾರಿತ್ರ್ಯ ಪ್ರಮಾಣಪತ್ರ ಸೇರಿದಂತೆ ಸೂಕ್ತ ದಾಖಲಾತಿ ಪಡೆದುಕೊಳ್ಳದೆ ಕೆಲಸಕ್ಕೆ ನೇಮಿಸುತ್ತಿವೆ. ಇದು ರಾಜಧಾನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಗಳು ಕ್ರೈಂ ಚಟುವಟಿಕೆಯಲ್ಲಿ ಭಾಗಿಯಾಗಲು ಪ್ರಮುಖ ಕಾರಣವಾಗುತ್ತಿದೆ. ಬಿಹಾರ, ಉತ್ತರಪ್ರದೇಶ, ರಾಜಸ್ತಾನ ಸೇರಿ ಈಶಾನ್ಯ ಭಾಗದ ರಾಜ್ಯಗಳಿಂದ ಬೆಂಗಳೂರಿಗೆ ಬಂದು ಅಪಾರ್ಟ್ಮೆಂಟ್ಸ್, ಕಂಪೆನಿ ಸೇರಿದಂತೆ ವಿವಿಧ ಕಡೆಗಳಲ್ಲಿ ಸೆಕ್ಯೂರಿಟಿಯಾಗಿ ಕೆಲಸಕ್ಕೆ ಸೇರಿಸಿಕೊಳ್ಳುವಾಗ ಸೆಕ್ಯೂರಿಟಿ ಏಜೆನ್ಸಿಗಳು ಪಾಲಿಸಬೇಕಾದ ಕಾನೂನು ಗಾಳಿಗೆ ತೂರುತ್ತಿವೆ ಎಂದು ಆರೋಪವಿದೆ. ಕೆಲಸಕ್ಕೆ ಸೇರಿಕೊಳ್ಳುವ ಮುನ್ನ ಉದ್ಯೋಗಿಯ ಆಧಾರ್ ಕಾರ್ಡ್, ವೋಟ್ ಐಡಿ ಕಾರ್ಡ್, ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಪೊಲೀಸರಿಂದ ವೈರಿಫೀಕೇಷನ್ ಸರ್ಟಿಫಿಕೇಟ್ ಇದ್ದರೆ ಮಾತ್ರ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಆದರೆ ಬಹುತೇಕ ಏಜೆನ್ಸಿಗಳು ಕಂಪೆನಿಗಳಿಂದ ಹೆಚ್ಚುವರಿ ಹಣ ಪಡೆದು ವ್ಯಕ್ತಿಯ ಹಿನ್ನೆಲೆ ತಿಳಿದುಕೊಳ್ಳದೆ ಕಡಿಮೆ ವೇತನ ನಿಗದಿಪಡಿಸಿ ಸೆಕ್ಯೂರಿಟಿಗಳಾಗಿ ನಿಯೋಜಿಸುತ್ತಿವೆ. ಕಡಿಮೆ ವೇತನವನ್ನು ಪಡೆಯುವ ಸೆಕ್ಯೂರಿಟಿಗಳು ಹಣದಾಸೆಗೆ ಕಳ್ಳ ಖದೀಮರಾಗುತ್ತಿದ್ದಾರೆ.

ಪೊಲೀಸರಿಗೆ ಮಾಹಿತಿ ನೀಡದೇ ಕೆಲಸಕ್ಕೆ ನಿಯೋಜನೆ
ಹೊರರಾಜ್ಯದಿಂದ ಬರುವ ಜನರು ಮನೆಗೆಲಸ , ಸೆಕ್ಯೂರಿಟಿ ಕೆಲಸಗಳಲ್ಲಿ ಹೆಚ್ಚಿನ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಕಡಿಮೆ ಸಂಬಳಕ್ಕಾಗಿ ಕಾರ್ಮಿಕರು ಕೆಲಸಕ್ಕೆ ಬರುತ್ತಾರೆ. ಕೆಲಸದವರ ಪೂರ್ವಾಪರ ತಿಳಿದುಕೊಳ್ಳದೆ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆ ಕೆಲಸಕ್ಕೆ ಸೇರಿಸಿಕೊಂಡು ಭವಿಷ್ಯದಲ್ಲಾಗುವ ಅಪಾಯಕ್ಕೆ ತಾವೇ ಆಹ್ವಾನಿಕೊಳ್ಳುತ್ತಿದ್ದಾರೆ. ತಮ್ಮ ಕೆಲಸಕ್ಕಾಗಿ ಸ್ಥಳೀಯರನ್ನು ಇಟ್ಟುಕೊಂಡರೆ ಅವರಿಗೆ ವೇತನ ಹೆಚ್ಚಳ ಸೇರಿದಂತೆ ಹಲವು ರೀತಿಯ ಡಿಮ್ಯಾಂಡ್ ಮಾಡುತ್ತಾರೆ ಎಂಬ ಮನೋಭಾವ ಬಹುತೇಕ ಮಾಲೀಕರಲ್ಲಿದೆ. ಹೀಗಾಗಿ ಹೊರರಾಜ್ಯದವರಿಗೆ ಕೆಲಸಕ್ಕೆ ನೇಮಕಾತಿ ಮಾಡಿಕೊಂಡರೆ ಕಡಿಮೆ ಸಂಬಳಕ್ಕೂ ಬರುತ್ತಾರೆ. ಅಲ್ಲದೆ ಯಾವುದೇ ರೀತಿಯ ಗೋಡವೆಗಳಿರುವುದಿಲ್ಲ ಎಂಬ ಮನೋಭಾವ ಬೆಳೆಸಿಕೊಂಡಿದ್ದಾರೆ. ಹೀಗಾಗಿಯೇ ಹಲವು ಮಾಲೀಕರು ಊರು, ವಿಳಾಸ ಅರಿಯದೇ ಕೆಲಸ ಕೊಡುತ್ತಿದ್ದಾರೆ. ಇದನ್ನೇ ದುರುಪಯೋಗ ಮಾಡಿಕೊಳ್ಳುವ ಕೆಲವರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಪರವಾನಗಿಯೇ ಇಲ್ಲದೇ ಅಕ್ರಮ ಏಜೆನ್ಸಿ
ರಾಜ್ಯದಲ್ಲಿ ಅಂದಾಜು 2500 ಕ್ಕೂ ಹೆಚ್ಚು ಸೆಕ್ಯೂರಿಟಿ ಏಜೆನ್ಸಿಗಳಿವೆ. ಈ ಪೈಕಿ ಅರ್ಧದಷ್ಟು ಏಜೆನ್ಸಿಗಳು ಪರವಾನಗಿ ಪಡೆದುಕೊಂಡಿಲ್ಲ. ಸದ್ಯ ಕರ್ನಾಟಕದಲ್ಲಿ ಅಂದಾಜು 2.50 ಲಕ್ಷ ಸೆಕ್ಯೂರಿಟಿಗಳಿದ್ದು ಇದರಲ್ಲಿ ಅರ್ಧದಷ್ಟು ಭದ್ರತಾ ಸಿಬ್ಬಂದಿಗಳು ಬೆಂಗಳೂರು ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ. ಖಾಸಗಿ ಸುರಕ್ಷತಾ ಸಂಸ್ಥೆಗಳ ನಿಯಂತ್ರಣ ಕಾಯ್ದೆ 2005ರ ಪ್ರಕಾರ ಏಜೆನ್ಸಿ ತೆರೆಯಬೇಕಾದರೆ ಗೃಹ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳಬೇಕು. ಅನಧಿಕೃತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸೆಕ್ಯೂರಿಟಿ ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿವೆ. ಗೊತ್ತು-ಗುರಿ ಇಲ್ಲದವರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತಿರುವುದರಿಂದ ಕೆಲ ಉದ್ಯೋಗಿಗಳು ಕ್ರೈಂಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲದೆ ಪರವಾನಗಿ ಪಡೆದುಕೊಳ್ಳದ ಅನಧಿಕೃತ ಏಜೆನ್ಸಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರ್ನಾಟಕ ಸೆಕ್ಯೂರಿಟಿ ಸರ್ವೀಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಬಿ.ಎಂ.ಶಶಿಧರ್ ಬೇಸರ ವ್ಯಕ್ತಪಡಿಸುತ್ತಾರೆ.

ಎಲ್ಲೆಲ್ಲಿ ಅಪರಾಧ ಎಸಗಿದ್ದಾರೆ ಭದ್ರತಾ ಸಿಬ್ಬಂದಿ
ಕೆಲಸವನ್ನು ಹುಡುಕುತ್ತ ರಾಜಧಾನಿಗೆ ಬರುವವರು ಸೆಕ್ಯೂರಿಟಿಯಾಗಿ ಸೇರಿ ಹಣಕ್ಕಾಗಿ ಕಳ್ಳತನವನ್ನು ಮಾಡುತ್ತಾರೆ. ಇಂಥಾ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಾಗಿದೆ. ಇಂಥ ಕೇಸ್ ಕೆಲವು ವಿವರ ಇಲ್ಲಿದೆ.
*ಐಷಾರಾಮಿ ಜೀವನಕ್ಕಾಗಿ 35ಕ್ಕೂ ಹೆಚ್ಚು ಬೈಕ್ ಕಳ್ಳತನ ಮಾಡಿದ್ದ ಸೆಕ್ಯೂರಿಟಿ ಗಾರ್ಡ್ ಶ್ರೀನಿವಾಸ್ ನನ್ನ ಜುಲೈ 13 ರಂದು ಬಂಧಿಸಿದ ಮಹಾಲಕ್ಷ್ಮೀ ಲೇಔಟ್ ಪೊಲೀಸರು
* ಜುಲೈ 6ರಂದು ಜೆ.ಬಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಮಾಲೀಕನ ತಾಯಿಯ ಕೈಕಾಲು ಕಟ್ಟಿ ಚಿನ್ನಾಭರಣ, ಹಣ ದೋಚಿದ್ದ ಆರೋಪಿಗಳು. ಸೆಕ್ಯೂರಿಟಿಗಳಾಗಿ ಸೇರಿ ಕೃತ್ಯ ಎಸಗಿದ್ದ ನೇಪಾಳ ಮೂಲದ ಪ್ರತಾಪ್ ಸಿಂಗ್ ಸೋನು ದಂಪತಿ ಬಂಧನ
*ಕಳೆದ ಜುಲೈ 5ರಂದು ಕಳ್ಳನೆಂದು ವ್ಯಕ್ತಿಗೆ ರಾಡ್ ನಿಂದ ಹೊಡೆದು ಕೊಲೆ. ಅಸ್ಸಾಂ ಮೂಲದ ಸೆಕ್ಯೂರಿಟಿ ಗಾರ್ಡ್ ನಿಂದ ಕೃತ್ಯ ಹೆಚ್ ಎ ಎಲ್ ಪೊಲೀಸರಿಂದ ಬಂಧನ
*ಬಾಲಕನನ್ನ ಕಿಡ್ನ್ಯಾಪ್ ಮಾಡಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಸೆಕ್ಯುರಿಟಿ ಗಾರ್ಡ್ ನೇಪಾಳ ಮೂಲದ ಗೌರವ್ ಸಿಂಗ್ ಸೇರಿ ಮೂವರನ್ನು ಕಳೆದ ಜೂನ್ ನಲ್ಲಿ ಬಂಧಿಸಿದ್ದ ಹೆಣ್ಣೂರು ಪೊಲೀಸರು
*ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗೆಲಸ ಮಾಡುತ್ತಾ ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದ ಮಹಾದೇವಿ ಅಂಡ್ ಟೀಮ್ ಬಂಧನ.
ಸೆಕ್ಯೂರಿಟಿ ಸಿಬ್ಬಂದಿ ಮತ್ತು ಮನೆಗೆಲಸದರ ಪೂರ್ವಾಪರವನ್ನು ತಿಳಿಯದೇ ಏಜೆನ್ಸಿಯನ್ನೇ ನಂಬಿ ಭದ್ರತೆಗೆ ನಿಯೋಜಿಸಿಕೊಂಡರೇ ಮನೆಯನ್ನು ದೋಚುವುದು ಗ್ಯಾರಂಟಿ. ಸಿಲಿಕಾನ್ ಸಿಟಿ ಜನರು ತಮ್ಮ ಮನೆಗೆ ಯಾವುದೇ ಕೆಲಸಗಾರರನ್ನು ನಿಯೋಜಿಸುವ ಮುನ್ನ ಅವರ ಆಧಾರ್, ಊರಿನ ವಿವರ, ಆತ್ಮೀಯ ಸಂಬಂಧಿಕ ಫೋನ್ ನಂಬರ್ ಸೇರಿದಂತೆ ಕೆಲವು ದಾಖಲೆಯನ್ನು ಪಡೆಯುವುದು ಸೂಕ್ತವಾಗಲಿದೆ. ಇದರೊಂದಿಗೆ ಸೆಕ್ಯೂರಿಟಿ ಏಜೆನ್ಸಿಯು ಪರವಾನಗಿ ಹೊಂದಿರುವ ಬಗ್ಗೆಯು ಖಚಿತ ಪಡಿಸಿಕೊಳ್ಳಬೇಕಿದೆ.












Click it and Unblock the Notifications