ಲಂಚ ಆರೋಪ ಸುಳ್ಳು, ತನಿಖೆಗೆ ಸಿದ್ಧ–ರೂಪಾಗೆ ಸತ್ಯನಾರಾಯಣ ತಿರುಗೇಟು
ಬೆಂಗಳೂರು, ಜುಲೈ 13: 'ಶಶಿಕಲಾಗೆ ವಿಶೇಷ ಆತಿಥ್ಯ ನೀಡಲು ಲಂಚ ಸ್ವೀಕರಿಸಿದ್ದೇನೆ ಎಂಬ ಆರೋಪ ಸಂಪೂರ್ಣ ಸುಳ್ಳು' ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಕಾರಾಗೃಹಗಳ ಮಹಾನಿರೀಕ್ಷಕ ಸತ್ಯನಾರಾಯಣರಾವ್ ಹೇಳಿದ್ದಾರೆ. ಈ ಮೂಲಕ ಕಾರಾಗೃಹಗಳ ಮಹಾನಿರೀಕ್ಷಕಿ ಡಿ. ರೂಪಾ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ.
"ಆಕೆ ಜೈಲಿನಲ್ಲಿ ಏನಾದರೂ ಕಂಡಿದ್ದೇ ಆದಲ್ಲಿ ಅದನ್ನು ಚರ್ಚೆ ಮಾಡಬೇಕು. ಒಂದೊಮ್ಮೆ ಆಕೆಗೆ ನನ್ನ ಮೇಲೆ ಆರೋಪಗಳಿವೆ ಎಂದು ಅನಿಸಿದರೆ ನಾನು ತನಿಖೆಗೆ ಸಿದ್ದವಾಗಿದ್ದೇನೆ," ಎಂದು ಸತ್ಯನಾರಾಯಣರಾವ್ ಪ್ರತಿಕ್ರಿಯೆ ನೀಡಿದ್ದಾರೆ.

"ಆಕೆಗೆ (ಶಶಿಕಲಾ ನಟರಾಜನ್) ಕೋರ್ಟ್ ಆದೇಶದಂತೆ ಸೌಲಭ್ಯಗಳನ್ನು ಮಾತ್ರ ನೀಡಲಾಗಿದೆ. ನಾವು ನ್ಯಾಯಾಲಯದ ಆದೇಶಗಳನ್ನು ಪಾಲಿಸಿದ್ದೇವೆ," ಎಂದು ಸತ್ಯನಾರಾಯಣರಾವ್ ಸ್ಪಷ್ಟಪಡಿಸಿದ್ದಾರೆ.
ಮಾತ್ರವಲ್ಲ ಈ ಹಿಂದೆ ಪ್ರಜಾವಾಣಿಗೆ ಪ್ರತಿಕ್ರಿಯೆ ನೀಡಿದ್ದ ಸತ್ಯನಾರಾಯಣ ರಾವ್, "ಪತ್ರದಲ್ಲಿ ನನ್ನ ವಿರುದ್ಧ ಮಾಡಿರುವ ಆರೋಪಗಳು ನಿರಾಧಾರ. ನಾನು ರೂಪಿಸಿದ್ದ ಕಾರ್ಯಕ್ರಮಗಳ ಹೆಸರು ಹೇಳಿಕೊಂಡು ರೂಪಾ ಪ್ರಚಾರ ಪಡೆಯುತ್ತಿದ್ದರು. ಈ ಬಗ್ಗೆ ಅವರಿಗೆ ಎರಡು ಬಾರಿ ಮೆಮೊ ಕೊಟ್ಟಿದ್ದೆ. ಈ ಕಾರಣಕ್ಕಾಗಿ ಅವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ," ಎಂದು ಹೇಳಿದ್ದರು.
ಮಾತ್ರವಲ್ಲದೇ, "ರೂಪಾ ಜೈಲಿಗೆ ಭೇಟಿ ನೀಡಿ ವಸ್ತುಸ್ಥಿತಿ ತಿಳಿದುಕೊಂಡಿಲ್ಲ. ಕಾರಾಗೃಹದಲ್ಲಿ ಸಾಮಾನ್ಯ ಅಡುಗೆ ಮನೆ ಇದೆ. ವಿಶೇಷ (ಶಶಿಕಲಾ) ಅಡುಗೆ ಮನೆ ಇಲ್ಲ," ಎಂದೂ ಹೇಳಿದ್ದರು.












Click it and Unblock the Notifications