'ಮರಗಳಿಲ್ಲದೆ ನೀರು ಇರಲ್ಲ, ಫೆ.16ರಂದು ಬೃಹತ್ ಜನಜಾಗೃತಿ
ಬೆಂಗಳೂರು, ಫೆಬ್ರವರಿ 03: 'ಮರಗಳಿಲ್ಲದೆ ನೀರು ಸಿಗಲ್ಲ, ಮರಗಳನ್ನು ಉಳಿಸಿ ನೀರನ್ನು ರಕ್ಷಿಸಿ' ಎಂಬ ಘೋಷಣೆಯೊಂದಿಗೆ ಅರಣ್ಯ ಸಂಪತ್ತಿನ ಸಂರಕ್ಷಣೆ ಜನಜಾಗೃತಿಗಾಗಿ ಫೆಬ್ರವರಿ 16ರಂದು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಯುನೈಟೆಡ್ ಕನ್ಸರ್ವೇಷನ್ ಮೂವ್ಮೆಂಟ್ ವತಿಯಿಂದ 'ಬೃಹತ್ ಆಂದೋಲನ'ವನ್ನು ಆಯೋಜಿಸಲಾಗಿದೆ.
ಈ ಕುರಿತಂತೆ ಮಾತನಾಡಿದ ಪರಿಸರವಾದಿ ಹಾಗೂ ನಟ ಸುರೇಶ್ ಹೆಬ್ಳೀಕರ್, ಆಂದೋಲನದಲ್ಲಿ 25ಕ್ಕೂ ಅಧಿಕ ಪರಿಸರ ಸಂರಕ್ಷಣಾ ಸ್ವಯಂಸೇವಾ ಸಂಸ್ಥೆಗಳು ಹಾಗೂ ಕೇರಳ, ಗೋವಾ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದಲೂ 100ಕ್ಕೂ ಹೆಚ್ಚು ಪರಿಸರವಾದಿಗಳು ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಅರಣ್ಯಪ್ರದೇಶವನ್ನು ನಾಶಮಾಡಲಾಗುತ್ತಿದ್ದು, ಹೀಗೆ ಅರಣ್ಯ ಸಂಪತ್ತು ನಾಶವಾದರೆ ಭವಿಷ್ಯದಲ್ಲಿ ಪ್ರಾಕೃತಿಕ ಅಸಮತೋಲನ ತಲೆದೋರುತ್ತದೆ. ಅಲ್ಲದೆ, ಪರಿಸರ ಸಂರಕ್ಷಣೆಯಿಂದ ಮಾತ್ರ ಸುಸ್ಥಿರ ಅಭಿವೃದ್ಧಿ ಸಾಧ್ಯ. ಈ ಬಗ್ಗೆ ಸರಕಾರ ಎಚ್ಚೆತ್ತುಕೊಳ್ಳಬೇಕು. ಯಾವುದೇ ಅಭಿವೃದ್ಧಿ ನೆಪದಲ್ಲಿ ಅರಣ್ಯ ನಾಶಕ್ಕೆ ಅನುಕೂಲ ಮಾಡಿಕೊಡುವಂಥ ಚಿಂತನೆಯನ್ನು ಸರಕಾರ ಕೈಬಿಡಬೇಕು ಎಂದು ಮನವಿ ಮಾಡಿದರು.

ರಾಜಸ್ಥಾನದ ನಂತರ ಕರ್ನಾಟಕ ಅತ್ಯಂತ ಬರಪೀಡಿತ ಪ್ರದೇಶಗಳನ್ನು ಹೊಂದಿದೆ. 2018ರಲ್ಲಿ ರಾಜ್ಯದ 176 ತಾಲೂಕುಗಳ ಪೈಕಿ 156 ತಾಲೂಕುಗಳು ಬರ ಪೀಡಿತವಾಗಿವೆ. ಕೇವಲ 20 ತಾಲೂಕುಗಳು ಮಾತ್ರ ಎಂದಿನಂತೆ ಮಳೆ ಕಂಡಿವೆ.
ಸರಕಾರ ಕೇವಲ ರೈತರ ಸಾಲ ಮನ್ನಾ ಮಾಡಿದರೆ ಸಾಲದು, ರೈತರ ವ್ಯವಸಾಯಕ್ಕೆ ಪೂರಕ ಪರಿಸರ ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ಅರಣ್ಯ ಉಳಿಸಿ ಜಲ ಸಂಪತ್ತನ್ನು ರಕ್ಷಿಸಬೇಕು. ರಾಜ್ಯ ಸರಕಾರ ಪಶ್ಚಿಮ ಘಟ್ಟದಲ್ಲಿ ಕೈಗೊಂಡಿರುವ ವಿವಿಧ ಯೋಜನೆಗಳನ್ನು ಜಾರಿಗೆ ತರುವ ಮೊದಲು ಪರಿಸರ ಸಂರಕ್ಷಣೆಗಾಗಿ ಒತ್ತು ನೀಡಬೇಕೆಂದು ಒತ್ತಾಯಿಸಿದರು.
ಯೂನೈಟೆಡ್ ಕನ್ಸರ್ವೇಷನ್ ಮೂವ್ಮೆಂಟ್ನ ಸಂಚಾಲಕ ಜೋಸೆಫ್ ಹೂವರ್ ಮಾತನಾಡಿ, ಪಶ್ಚಿಮಘಟ್ಟದಲ್ಲಿ ರಸ್ತೆ, ಕುಡಿಯುವ ನೀರಿನ ಯೋಜನೆಗಾಗಿ 21 ಲಕ್ಷ ಮರಗಳನ್ನು ಗುರುತಿಸಿ ಕಡಿಯಲಾಗುತ್ತಿದೆ. ಇದರಿಂದ ಈಗಾಗಲೇ ಅಂತರ್ಜಲ ಮಟ್ಟ ಕುಸಿದಿದೆ. ನಾವು ಅಭಿವೃದ್ಧಿ ಯೋಜನೆಗಳ ಜಾರಿಗೆ ಅಡ್ಡಿಪಡಿಸುವುದಿಲ್ಲ. ಆದರೆ, ಈಗಿರುವ ವನ್ಯಸಂಪತ್ತನ್ನು ಸಂರಕ್ಷಿಸಿ ಪರ್ಯಾಯ ಮಾರ್ಗದಲ್ಲಿ ಯೋಜನೆಗಳಿಗೆ ಚಾಲನೆ ನೀಡಬೇಕು. ಈಗಾಗಲೇ ಸಾಕಷ್ಟು ವನ್ಯಸಂಪತ್ತನ್ನು ಕಳೆದುಕೊಂಡು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಅದನ್ನು ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ಅಮೆರಿಕಾದ ಅಮೆಜಾನ್ ಕಾಡುಗಳಿಗಿಂತಲೂ ಹೆಚ್ಚಿನ ಸಸ್ಯಪ್ರಭೇದ ಹಾಗೂ ವನ್ಯಜೀವಿಗಳಿಗೆ ಪಶ್ಚಿಮ ಘಟ್ಟ ಆಶ್ರಯ ತಾಣವಾಗಿದೆ. ರಸ್ತೆ, ಕುಡಿಯುವ ನೀರಿನ ಯೋಜನೆ ನೆಪದಲ್ಲಿ ಅರಣ್ಯ ನಾಶವಾಗಬಾರದು. ಎಂದು ಸುರೇಶ್ ಹೆಬ್ಳೀಕರ್ ಹೇಳಿದರು. ಸುದ್ದಿಗೋಷ್ಠಿಯ ವೇಳೆ ಪರಿಸರ ತಜ್ಞರಾದ ಸಹದೇವ್, ಮೀರಾ ರಾಜೇಶ್, ರಾಜಕುಮಾರ ಸ್ಇನ್ನಿತರರು ಇದ್ದರು.
ಪಶ್ಚಿಮಘಟ್ಟದ 25600 ಕಿ.ಮೀ. ವ್ಯಾಪ್ತಿಯಲ್ಲಿ ಭದ್ರಾ, ತುಂಗಾ, ಹೇಮಾವತಿ, ನೇತ್ರಾವತಿ, ಕುಮಾರಧಾರ ಸೇರಿದಂತೆ 65 ನದಿಗಳ ಮೂಲ ನೀರಿನ ಸೆಲೆಯಾಗಿದ್ದು, ಇದರ ಉಳಿವಿಗಾಗಿ, ಈ ಭಾಗದ ವಿವಿಧ ಕಾಮಗಾರಿಯಿಂದ 21 ಲಕ್ಷ ಮರಗಳನ್ನು ಉಳಿಸಿ, ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವವರೆಗೂ ಈ ಆಂದೋಲನ ಮುಂದುವರೆಯಲಿದೆ ಎಂದು ಯೂನೈಟೆಡ್ ಕನ್ಸರ್ವೇಷನ್ ಮೂವ್ಮೆಂಟ್ನ ಸಂಚಾಲಕ ಜೋಸೆಫ್ ಹೂವರ್ ಹೇಳಿದರು.












Click it and Unblock the Notifications