ನಲಪಾಡ್ ಘಟನೆ ಇನ್ನೆಂದೂ ಮರುಕಳಿಸಬಾರದು : ಬಿಎನ್ಎಸ್ ರೆಡ್ಡಿ
Recommended Video

ಬೆಂಗಳೂರು, ಮಾರ್ಚ್ 01 : ಕಬ್ಬನ್ ಪಾರ್ಕ್ ನಲ್ಲಿ ಯುವ ಪತ್ರಕರ್ತೆ ಮೇಲೆ ಲೈಂಗಿಕ ಹಲ್ಲೆಯಾಗುತ್ತದೆ, ಯುಬಿ ಸಿಟಿಯಲ್ಲಿ ಯುವಕನ ಮೇಲೆ ಗೂಂಡಾಗಳಿಂದ ಮಾರಣಾಂತಿಕ ಹಲ್ಲೆಯಾಗುತ್ತದೆ.... ನಾಗರಿಕರು ಅಸಹಾಯಕತೆಯಿಂದ ಇವನ್ನೆಲ್ಲ ನೋಡುತ್ತಿದ್ದಾರೆ. ಏನು ನಡೆಯುತ್ತಿದೆ ಶಾಂತಿಯುತ ಬೆಂಗಳೂರಿನಲ್ಲಿ?
ಹೀಗೆಂದು ಆಕ್ರೋಶ ವ್ಯಕ್ತಪಡಿಸಿದವರು ನಿವೃತ್ತ ಪೊಲೀಸ್ ಆಯುಕ್ತ ಬಿಎನ್ಎಸ್ ರೆಡ್ಡಿ. ಬೆಂಗಳೂರು ನಾಗರಿಕರಿಗೆ ಯಾವ ರೀತಿ ಸುರಕ್ಷತೆ ನೀಡಬೇಕು. ಭಯಮುಕ್ತ ಬೆಂಗಳೂರನ್ನು ಹೇಗೆ ಸೃಷ್ಟಿಸಬೇಕು ಎಂಬ ವಿಷಯವಾಗಿ ಚರ್ಚಿಸಲು, ಶಾಂತಿನಗರವನ್ನು ಒಳಗೊಂಡ ಬೆಂಗಳೂರು ಕೇಂದ್ರದ ಡಿಸಿಪಿ ಆಗಿದ್ದ ಅವರು ಬುಧವಾರ ಚಳವಳಿಯನ್ನು ಆರಂಭಿಸಿದ್ದಾರೆ.
ಬೆಂಗಳೂರು ಸುರಕ್ಷಿತವಾಗಿರಬೇಕು ಎಂದು ಬಯಸುವ ನಾಗರಿಕರು 90195 51122 ಸಂಖ್ಯೆಗೆ ಕರೆ ನೀಡಿ, ಅಭಿಯಾನಕ್ಕೆ ಬೆಂಬಲ ಸೂಚಿಸಬೇಕು ಎಂದು ಅವರು ಅವರು ಕರೆ ನೀಡಿದರು. ಸಾಮಾನ್ಯ ಇನ್ನು ಮುಂದೆ ಭಯಭೀತನಾಗಿ ಇರುವ ಅವಶ್ಯಕತೆಯಿಲ್ಲವೇ ಇಲ್ಲ. ದೌರ್ಜನ್ಯದ ವಿರುದ್ಧ ದನಿಯೆತ್ತಲೇಬೇಕು ಎಂದು ಅವರು ಆಗ್ರಹಿಸಿದರು.
ಅದರಲ್ಲಿಯೂ ಯುಬಿ ಸಿಟಿಯಲ್ಲಿ ನಡೆದ ಹಲ್ಲೆ ಬರ್ಬರತೆಯ ಪರಮಾವಧಿ. ಇಂಥ ಅಪರಾಧವನ್ನು ನಾನು ನನ್ನ ವೃತ್ತಿಜೀವನದಲ್ಲಿಯೇ ನೋಡಿಲ್ಲ. ರಾಜಕಾರಣಿಗಳಿಂದ ಪೊಲೀಸರ ಮೇಲೆಯೇ ಒತ್ತಡ ಹೇರಲಾಗುತ್ತಿದೆ. ಸಾರ್ವಜನಿಕರು ಇಂಥ ಅನೈತಿಕ ಚಟುವಟಿಕೆಗಳನ್ನು ಪ್ರಶ್ನಿಸುವಂತಾಗಬೇಕು, ನಾವೆಲ್ಲ ಸೇರಿ ಹೋರಾಡಬೇಕು ಎಂದರು.
ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆ ನಡೆಯಬೇಕು. ವೈದ್ಯಕೀಯ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವವರ ವಿರುದ್ಧ ನ್ಯಾಯಾಲಯವೇ ಕ್ರಮ ಜರುಗಿಸಬೇಕು. ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಜನಸಾಮಾನ್ಯರ ನಂಬಿಕೆ ಮರಳುವಂತೆ ಮಾಡಬೇಕು ಎಂದು ಬಿಎನ್ಎಸ್ ರೆಡ್ಡಿಯವರು ಆಗ್ರಹಿಸಿದರು. ಅವರ ಪತ್ರಿಕಾಗೋಷ್ಠಿಯ ವಿವರಗಳು ಕೆಳಗಿನಂತಿವೆ.

ನಲಪಾಡ್ ಘಟನೆಯಿಂದ ಬೆಂಗಳೂರಿನ ಇಮೇಜಿಗೆ ಕುಂದು
ಪ್ರಭಾವಿ ರಾಜಕಾರಣಿ ಶಾಂತಿನಗರದ ಶಾಸಕ ಎನ್ ಎ ಹ್ಯಾರಿಸ್ ಅವರ ಮಗ ಮೊಹಮ್ಮದ್ ನಲಪಾಡ್ ಮತ್ತು ಗ್ಯಾಂಗ್ ನಿಂದ ವಿದ್ವತ್ ಮೇಲೆ ನಡೆದಿರುವ ಹಲ್ಲೆಯಿಂದಾಗಿ ಬೆಂಗಳೂರಿನ ಇಮೇಜಿಗೆ ಕುಂದುಂಟಾಗಿದೆ. ನಗರದಲ್ಲಿ ಒಂದು ರೀತಿಯ ಹೆದರಿಕೆ ಆವರಿಸಿಕೊಂಡಿದೆ. ಇದಕ್ಕೆಲ್ಲ ಕಾರಣ, ಕೆಲ ಕ್ರಿಮಿಗಳಿಗೆ ಕಾನೂನಿನ ಬಗ್ಗೆ ನೈಯಾಪೈಸೆ ಗೌರವ ಇಲ್ಲದಿರುವುದು.

ನಲಪಾಡ್ ನಡೆಸಿದ ಹಲ್ಲೆ ತೀವ್ರ ಕಲಕಿದೆ
ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್ ನಡೆಸಿದ ಭೀಕರ ಹಲ್ಲೆ ನನ್ನನ್ನು ತೀವ್ರವಾಗಿ ಕಲಕಿದೆ. ಸ್ವಲ್ಪವೂ ಕನಿಕರವಿಲ್ಲದೆ ಒಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಿದ್ದಾಗ ಉಳಿದವರು ತಡೆಯಲು ಯಾಕೆ ಹೋಗಲಿಲ್ಲ? ಇಂಥ ರೌಡಿಸಂ ಮೇಲೆ ಲವಲೇಶವೂ ಕಡಿವಾಣ ಇಲ್ಲದಂಥ ಬೆಂಗಳೂರನ್ನಾಗಿ ಮಾಡಲಾಗುತ್ತಿದೆಯೆ?

ಬೌನ್ಸರ್, ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದರು?
ಯುಬಿ ಸಿಟಿಯಲ್ಲಿರುವ ಫಾರ್ಜಿ ಕೆಫೆ ಮ್ಯಾನೇಜ್ಮೆಂಟ್ ಏಕೆ ಬಾಯಿ ಮುಚ್ಚಿಕೊಂಡಿದೆ? ಯುಬಿ ಸಿಟಿಯಲ್ಲಿರುವ ಬೌನ್ಸರ್ ಗಳು ಆ ಭೀಕರ ಹಲ್ಲೆ ನಡೆಯುತ್ತಿದ್ದಾಗ ಏನು ಮಾಡುತ್ತಿದ್ದರು? ಅಲ್ಲದೆ, 50ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳು ಏಕೆ ಮೂಕ ಪ್ರೇಕ್ಷಕರಂತೆ ಹಲ್ಲೆ ತಡೆಯದೆ ಏಕೆ ನಿಂತಿದ್ದರು?

ಬೆಂಗಳೂರಿಗೆ ಬೆಂಗಳೂರೇ ತಿರುಗಿನಿಲ್ಲಬೇಕು
ಜನರು ವ್ಯವಸ್ಥೆಯ ಮೇಲೆಯೇ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಈ ಕಾರಣದಿಂದಾಗಿಯೇ, ಮೊಹಮ್ಮದ್ ನಲಪಾಡ್ ಎಂಬ ರಾಕ್ಷಸ ಹಲ್ಲೆ ಮಾಡುತ್ತಿದ್ದಾಗ, ಕಣ್ಣ ಮುಂದೆಯೆ ಏನೆಲ್ಲ ನಡೆಯುತ್ತಿದ್ದರೂ ಯಾರೂ ಮಧ್ಯ ಪ್ರವೇಶಿಸುವುದಿಲ್ಲ. ಬೆಂಗಳೂರಿಗೆ ಬೆಂಗಳೂರೇ ತಿರುಗಿನಿಲ್ಲಬೇಕು. ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ನಂಬಿಕೆ ಮರಳಬೇಕು.

ಮಿಸ್ಡ್ ಕಾಲ್ ನೀಡಿ ನೋಂದಾಯಿಸಿಕೊಳ್ಳಿ
ಭಯಮುಕ್ತ ಬೆಂಗಳೂರು ಅಭಿಯಾನದಲ್ಲಿ ಭಾಗಿಯಾಗಬಯಸುವವರು 90195-51122 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ನೋಂದಾಯಿಸಿಕೊಳ್ಳಬೇಕು. ಪೊಲೀಸರ ವಿರುದ್ಧ ಹಲವರು ದೂರುತ್ತಾರೆ. ಜನರು ದನಿಯೆತ್ತಿದರೆ ಪೊಲೀಸರೂ ಎಚ್ಚೆತ್ತುಕೊಳ್ಳುತ್ತಾರೆ. ಪೊಲೀಸ್ ವ್ಯವಸ್ಥೆ ಸುಧಾರಿಸಬೇಕಿದ್ದರೆ ಜವಾಬ್ದಾರಿಯುತ ನಾಗರಿಕರ ಭಾಗವಹಿಸುವಿಕೆ ಬೇಕೇಬೇಕು.

ಭದ್ರತೆಯೂ ಪಕ್ಷಗಳ ಪ್ರಣಾಳಿಕೆಯಲ್ಲಿರಲಿ
ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಏನೆಲ್ಲಾ ಭರವಸೆಗಳನ್ನು ನೀಡುತ್ತವೆ. ಆದರೆ, ಜನರಿಗೆ ಬೇಕಾದ ಭದ್ರತೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಬೇಕೆಂದು ಜನರೇ ಆಗ್ರಹಿಸಬೇಕು. ನಮಗೆ ಸಲಹೆ ನೀಡಿ, ಮುಂದೆ ಏನು ಮಾಡಬೇಕೆಂದು ನಾವೆಲ್ಲ ಸೇರಿ ನಿರ್ಧರಿಸೋಣ. ಯುಬಿ ಸಿಟಿಯಂಥ ಘಟನೆಗಳು ಹಲವಾರು ನಡೆಯುತ್ತಿರುತ್ತವೆ. ಆದರೆ, ಯಾವುದೇ ಕ್ರಮವನ್ನೂ ಜರುಗಿಸುವುದಿಲ್ಲ.
— B N S Reddy, IPS (R) (@BNSReddyIPS) March 1, 2018 |
ಭಯಮುಕ್ತ ಬೆಂಗಳೂರು ಅಭಿಯಾನ
ಭಯಮುಕ್ತ ಬೆಂಗಳೂರು ಎಂಬ ಅಭಿಯಾನವನ್ನು ಆರಂಭಿಸಿರುವ ಮಾಜಿ ಪೊಲೀಸ್ ಆಯುಕ್ತ ಬಿಎನ್ಎಸ್ ರೆಡ್ಡಿಯವರು, ಇದರಲ್ಲಿ ಬೆಂಗಳೂರಿನ ನಾಗರಿಕರು ಭಯಮುಕ್ತರಾಗಿ ಭಾಗವಹಿಸಬೇಕು ಎಂದು ಕೇಳಿದ್ದಾರೆ. ಅವರು ನಡೆಸಿದ ಪತ್ರಿಕಾಗೋಷ್ಠಿಯ ವಿವರ ಈ ವಿಡಿಯೋದಲ್ಲಿದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications