ಗುರುವಾರ ಹಸಿರು ಮಾರ್ಗದ ಮೆಟ್ರೋ ಸಂಚಾರ ಸ್ಥಗಿತ
ಬೆಂಗಳೂರು, ಸೆಪ್ಟೆಂಬರ್ 29: ಬಿಎಂಆರ್ಸಿಎಲ್ ಆರ್. ವಿ. ರಸ್ತೆ-ಯಲಚೇನಹಳ್ಳಿ ನಿಲ್ದಾಣಗಳ ನಡುವೆ ಅಕ್ಟೋಬರ್ 1ರಂದು ಮೆಟ್ರೋ ರೈಲು ಸೇವೆಯನ್ನು ಸ್ಥಗಿತಗೊಳಿಸಲಿದೆ. ಯಲಚೇನಹಳ್ಳಿ-ಅಂಜನಾಪುರ ಮಾರ್ಗದ ಪರೀಕ್ಷಾರ್ಥ ರೈಲು ಸಂಚಾರದ ಹಿನ್ನಲೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗುತ್ತದೆ.
ಮಂಗಳವಾರ ಬಿಎಂಆರ್ಸಿಎಲ್ ಈ ಕುರಿತು ಪ್ರಕಟಣೆ ಹೊರಡಿಸಿದೆ. ಅಕ್ಟೋಬರ್ 1ರ ಗುರುವಾರ ಇಡೀ ದಿನ ಆರ್. ವಿ. ರಸ್ತೆ-ಯಲಚೇನಹಳ್ಳಿ ನಡುವೆ ನಮ್ಮ ಮೆಟ್ರೋ ರೈಲು ಓಡುವುದಿಲ್ಲ. ಶುಕ್ರವಾರದಿಂದ ರೈಲು ಸಂಚಾರ ಎಂದಿನಂತೆ ಇರಲಿದೆ.
ಗುರುವಾರ ಹಸಿರು ಮಾರ್ಗದಲ್ಲಿ ನಾಗಸಂದ್ರದಿಂದ ಹೊರಡುವ ರೈಲು ಆರ್. ವಿ. ರಸ್ತೆ ತನಕ ಮಾತ್ರ ಸಂಚಾರ ನಡೆಸಲಿದೆ. ಮೈಸೂರು ರಸ್ತೆ-ಬೈಯಪ್ಪನಹಳ್ಳಿ ನೇರಳೆ ಮಾರ್ಗದ ರೈಲು ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ.

ಯಲಚೇನಹಳ್ಳಿ ಅಂಜನಾಪುರ ನಡುವಿನ 6.29 ಮಾರ್ಗದಲ್ಲಿ ಆಗಸ್ಟ್ 28ರಂದು ರೈಲುಗಳ ಪ್ರಾಯೋಗಿಕ ಸಂಚಾರ ಆರಂಭವಾಗಿತ್ತು. ಅಕ್ಟೋಬರ್ 1ರಂದು ಸಹ ಅಧಿಕಾರಿಗಳು ಪ್ರಾಯೋಗಿಕ ಸಂಚಾರ ನಡೆಸಲಿದ್ದು, ರೈಲು ಸಂಚಾರ ಸ್ಥಗಿತವಾಗಲಿದೆ.
ಯಲಚೇನಹಳ್ಳಿ-ಅಂಜನಾಪುರ ಮಾರ್ಗ ನಮ್ಮ ಮೆಟ್ರೋ ಯೋಜನೆಯ 2ನೇ ಹಂತದ ಮೊದಲ ವಿಸ್ತರಿತ ಮಾರ್ಗವಾಗಿದೆ. ರೀಚ್ 4ಬಿ ಮಾರ್ಗದಲ್ಲಿ ನವೆಂಬರ್ನಿಂದ ವಾಣಿಜ್ಯ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
ನಿಲ್ದಾಣಗಳು : ಈ ಮಾರ್ಗ ಪೂರ್ಣಗೊಂಡ ಬಳಿಕ ನಾಗಸಂದ್ರದಿಂದ ಹೊರಡುವ ರೈಲು ಅಂಜನಾಪುರ ತನಕ ಸಂಚಾರ ನಡೆಸಲಿದೆ. ಯಲಚೇನಹಳ್ಳಿ ಬಳಿಕ ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ ಮತ್ತು ಅಂಜನಾಪುರ ನಿಲ್ದಾಣಗಳಿವೆ.












Click it and Unblock the Notifications