ಮಾಲ್ಗಳಲ್ಲಿದ್ದ ಹಣ್ಣು-ಹಂಪಲು, ತರಕಾರಿ ಖಾಲಿ, ನಾಳೆ ಬಗ್ಗೆ ಗೊತ್ತಿಲ್ಲ!
ಬೆಂಗಳೂರು, ಮಾರ್ಚ್ 23: ಕೊರೊನಾ ವೈರಸ್ ಜನರ ದೈನಂದಿನ ಬದುಕನ್ನು ನುಂಗಿ ಹಾಕಿದೆ. ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ದಿನಗೂಲಿ ಕಾರ್ಮಿಕರ ಪರಿಸ್ಥಿತಿ ಕೇಳುವುದೇ ಬೇಡ. ಬೀದಿ ವ್ಯಾಪಾರಿಗಳು, ತಳ್ಳುವ ಗಾಡಿಯಲ್ಲಿ ತರಕಾರಿ, ಹಣ್ಣ ಹಂಪಲು ಮಾರುತ್ತಿದ್ದವರು ಮನೆಯಲ್ಲೆ ಕುಳಿತು ಯೋಚನೆ ಮಾಡುವಂತಾಗಿದೆ. ಈ ಕಡೆ ಮಾಲ್ಗಳನ್ನು ನಂಬಿ ಕೂತಿದ್ದ ಜನರಿಗೂ ಈಗ ಆತಂಕ ಕಾಡುತ್ತಿದೆ.
ಅಗತ್ಯ ವಸ್ತುಗಳನ್ನು ಪೂರೈಸುವ ಉದ್ದೇಶದಿಂದ ಕೆಲವು ಮಾಲ್ಗಳು ತೆರೆದಿರುವುದು ಬಿಟ್ಟರೆ ಉಳಿದ ಎಲ್ಲ ಮಾಲ್ಗಳು ಬಹುತೇಕ ಮುಚ್ಚಿದೆ. ಅದರಲ್ಲೂ ಡಿ-ಮಾರ್ಟ್, ಮೋರ್ ಅಂತಹ ಮಾಲ್ಗಳ ಮೇಲೆ ಹೆಚ್ಚಿನ ಜನರು ಅವಲಂಬಿತರಾಗಿದ್ದರು. ಇದೀಗ, ಅಂತವರಿಗೆ ಆತಂಕ ಮೂಡಿದೆ.
ಯಾಕಂದ್ರೆ, ಬಹುತೇಕ ಮಾಲ್ಗಳಲ್ಲಿದ್ದ ತರಕಾರಿ, ಹಣ್ಣು-ಹಂಪಲು ಖಾಲಿಯಾಗಿದೆ, ಇಷ್ಟು ದಿನ ಸಂಗ್ರಹಿಸಿದ್ದ ಎಲ್ಲವೂ ಬಹುತೇಕ ಕೊನೆಯ ಹಂತದಲ್ಲಿದೆ. ಬಹುಶಃ ಮುಂದಿನ ಸರಬರಾಜು ಆಗುವವರೆಗೂ ಮಾಲ್ಗಳಲ್ಲಿ ತರಕಾರಿ, ಹಣ್ಣು-ಹಂಪಲು ಸಿಗುವುದಿಲ್ಲವಾ ಎಂಬ ಭಯ ಹುಟ್ಟಿಕೊಂಡಿದೆ.

ಈ ಬಗ್ಗೆ ಹೊಸಕೆರೆಹಳ್ಳಿಯ ಮಾಲ್ನಲ್ಲಿ ಸಿಬ್ಬಂದಿಯೊಬ್ಬರನ್ನು ವಿಚಾರಿಸಿದಕ್ಕೆ, 'ಸದ್ಯಕ್ಕೆ ಇರುವುದನ್ನು ಮಾರಾಟ ಮಾಡುತ್ತಿದ್ದೇವೆ, ನಾಳೆ ಬಗ್ಗೆ ಗೊತ್ತಿಲ್ಲ, ಬಹುಶಃ ಸರಬರಾಜು ಆಗಬಹುದು, ನೋಡ್ಬೇಕು' ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸರಬರಾಜು ಆದರೆ ಓಕೆ. ಒಂದು ವೇಳೆ ತರಕಾರಿ, ಹಣ್ಣು ಹಂಪಲುಗಳ ಸರಬರಾಜು ಆಗಿಲ್ಲ ಅಂದ್ರೆ ಪರಿಸ್ಥಿತಿ ಏನಾಗಲಿದೆ ಎಂಬ ಸಣ್ಣದೊಂದು ಆತಂಕ ಶುರುವಾಗಿದೆ. ಇದು ಕೇವಲ ತರಕಾರಿ ಮತ್ತು ಹಣ್ಣು ಹಂಪಲುಗಳ ಕಥೆ ಅಷ್ಟೆ.












Click it and Unblock the Notifications