ಜಮೀರ್ ಅಹ್ಮದ್ ಗೆಸ್ಟ್ ಹೌಸ್ ಹೈಡ್ರಾಮಾ: ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ
ತುಮಕೂರು, ಜೂನ್ 10: ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬೆಂಬಲಿಗರು, ಬೆಂಗಳೂರು ಸದಾಶಿವ ನಗರದ ಗೆಸ್ಟ್ ಹೌಸ್ನಲ್ಲಿ ದಾಂಧಲೆ ನಡೆಸಿದರು ಎನ್ನುವ ಶಾಸಕ ಜಮೀರ್ ಅಹ್ಮದ್ ಖಾನ್ ಆರೋಪಕ್ಕೆ ನಿಖಿಲ್ ಪ್ರತಿಕ್ರಿಯೆ ನೀಡಿದ್ದಾರೆ.
Recommended Video
ತುಮಕೂರು ತಾಲ್ಲೂಕಿನ ಬಳಗೆರೆಯಲ್ಲಿ ಮಾತನಾಡುತ್ತಿದ್ದ ನಿಖಿಲ್, "ಒಬ್ಬ ಜನಪ್ರತಿನಿಧಿಯಾಗಿ ಮಾತನಾಡಬೇಕಾದರೆ ತೂಕವಾಗಿ ಮಾತಾಡಬೇಕು. ರಾಜಕೀಯವಾಗಿ ಯಾವ ಥರ ಬೇಕಾದರೂ ಮಾತಾಡಿ. ಎರಡು ಬಾರಿ ಸಿಎಂ ಅನ್ನೋದನ್ನು ಬೇಕಾದರೆ ಬದಿಗಿಟ್ಟು ಮಾತಾಡೋಣ" ಎಂದು ಹೇಳಿದರು.
"ಮನುಷ್ಯ, ಮನುಷ್ಯನಿಗೆ ಬೆಲೆ ಕೊಡೋದನ್ನ ಮೊದಲು ಕಲಿಯಬೇಕು. ನಿನ್ನೆ ಅವರು ಮಾಧ್ಯಮಗಳಲ್ಲಿ ಮಾತನಾಡಿದ್ದನ್ನು ಸೂಕ್ಷ್ಮವಾಗಿ ಗಮನಿಸಿದೆ. ಅವರ ಸಂಸ್ಕೃತಿ ಏನು ಅನ್ನೋದನ್ನ ಅರ್ಥ ಮಾಡಿಕೊಳ್ಳಬಹುದು. ನಮ್ಮ ನಾಯಕರು ಆ ಮನೆಗೆ ಕಾಲಿಟ್ಟು ಸುಮಾರು ಏಳೆಂಟು ವರ್ಷಗಳಾಗಿದೆ"ಎಂದು ನಿಖಿಲ್ ಸ್ಪಷ್ಟನೆಯನ್ನು ನೀಡಿದರು.
"ಮೇಖ್ರಿ ಸರ್ಕಲ್ ನಲ್ಲಿರೋ ಮನೆಯನ್ನು ಕುಮಾರಣ್ಣ ಗೆಸ್ಟ್ ಹೌಸ್ ತರ ಉಪಯೋಗಿಸುತ್ತಾ ಇದ್ದರು. ಮೂರ್ನಾಲ್ಕು ದಿನಗಳ ಹಿಂದಷ್ಟೆ ಆ ಮನೆಯನ್ನ ಕ್ಲಿಯರ್ ಮಾಡಿಸಿಕೊಡಿ ಎಂದಿದ್ದರು. ಖಾಲಿ ಇದ್ದರಿಂದ ನನ್ನ ಸುತ್ತಮುತ್ತ ಕೆಲಸ ಮಾಡೋ ಹುಡುಗರು ಅಲ್ಲಿ ವಾಸ ಇದ್ದರು"ಎಂದು ನಿಖಿಲ್ ಹೇಳಿದರು.

ನನ್ನ ಕೆಲವೊಂದಷ್ಟು ಶೂಟಿಂಗ್ ಮೆಟಿರಿಯಲ್ ಅಲ್ಲಿ ಇದ್ದವು.
"ನನ್ನ ಕೆಲವೊಂದಷ್ಟು ಶೂಟಿಂಗ್ ಮೆಟಿರೀಯಲ್ ಗಳು ಅಲ್ಲಿ ಇದ್ದವು. ಕೋವಿಡ್ ಇರೋ ಕಾರಣ ಎಲ್ಲಾ ಹುಡುಗರು ಬೀಗ ಹಾಕಿ ಊರಿಗೆ ಹೋಗಿದ್ದರು. ಬೀಗ ಹೊಡೆದು ಎಲ್ಲವನ್ನೂ ಚೆಲ್ಲಾಪಿಲ್ಲಿ ಮಾಡಿರೋದನ್ನ ನಿನ್ನೆ ನೋಡಿದೆ. ಹುಡುಗರು ಬಂದು ಕೇಳಿದ್ದಕ್ಕೆ ಮಾತುಕತೆ ಆಗಿದೆ, ದೊಡ್ಡಮಟ್ಟದ ರಂಪಾಟ ಏನು ಆಗಿಲ್ಲಾ ಎಂದು ಹೇಳಿದ್ದಾರೆ" ಎಂದು ನಿಖಿಲ್ ಹೇಳಿದರು.

ಅವರ ವಸ್ತುವನ್ನು ಅವರು ವಾಪಸ್ ಕೇಳುತ್ತಿದ್ದಾರೆ
"ಅವರು ದೊಡ್ಡವರಿದ್ದಾರೆ, ಅವರ ಬಗ್ಗೆ ಮಾತನಾಡೋಕೆ ನಾನು ಇಷ್ಟಪಡಲ್ಲಾ. ಅವರ ವಸ್ತುವನ್ನು ಅವರು ವಾಪಸ್ ಕೇಳುತ್ತಿದ್ದಾರೆ, ತಪ್ಪೇನಿಲ್ಲಾ. ಈಗ ನಾವು ಅದನ್ನ ಖುಷಿ ಖುಷಿಯಾಗಿ ಕೊಡುತ್ತಿದ್ದೇವೆ. ಒಂದು ಟೈಂನಲ್ಲಿ ಅವರು ನಮ್ಮ ನಾಯಕರ ಜೊತೆ ಬಹಳ ಆತ್ಮೀಯವಾಗಿದ್ದರು " - ನಿಖಿಲ್ ಕುಮಾರಸ್ವಾಮಿ.

ನಿಖಿಲ್ ಇನ್ನೂ ಹುಡುಗ ಅನ್ನೋ ಜಮೀರ್ ಹೇಳಿಕೆ ವಿಚಾರ
"ರಾಜಕಾರಣದಲ್ಲಿ ಅವರು ಬೆಳೆಯೋದಕ್ಕೆ ನಮ್ಮ ನಾಯಕರದ್ದೂ ಕೂಡ ಕೊಡುಗೆ ಇದೆ. ನಾನಿನ್ನೂ ಹುಡುಗನೇ, ನನಗೇನು ವಯಸ್ಸಾಗಿಲ್ಲಾ, ನಾನು ಇನ್ನೂ ಚಿಕ್ಕಹುಡುಗನೇ. ನಾವು ಮಾತಾಡಬೇಕಾದರೆ ಸಮಾಜಕ್ಕೆ ಏನು ಸಂದೇಶ ಕೊಡುತ್ತೇವೆ ಅನ್ನೋದನ್ನು ಅವರು ಯೋಚನೆ ಮಾಡಬೇಕು. ಏಕವಚನದಲ್ಲಿ ಮಾತನಾಡೋದು ಎಷ್ಟರಮಟ್ಟಿಗೆ ಸರಿ ಅನ್ನೋದನ್ನು ಅವರು ಯೋಚನೆ ಮಾಡಬೇಕು." ಎಂದು ನಿಖಿಲ್ ಹೇಳಿದರು.

ಸದಾಶಿವನಗರದ ಸಿ.ವಿ.ರಾಮನ್ ರಸ್ತೆಯಲ್ಲಿರುವ ಆಸ್ತಿ
ಬೆಂಗಳೂರಿನ ಸದಾಶಿವನಗರದ ಸಿ.ವಿ.ರಾಮನ್ ರಸ್ತೆಯಲ್ಲಿರುವ ಜಮೀರ್ ಅಹ್ಮದ್ಗೆ ಸೇರಿದ ಅಪಾರ್ಟ್ಮೆಂಟ್ ಅನ್ನು ಹಿಂದೆ ಕುಮಾರಸ್ವಾಮಿ ಬಳಸಿಕೊಳ್ಳುತ್ತಿದ್ದರು. ಈಗ ನಿಖಿಲ್ ಕಡೆಯವರು ಅದನ್ನು ಬಳಸುತ್ತಿದ್ದರು. ಅಪಾರ್ಟ್ಮೆಂಟಿಗೆ ನಿಖಿಲ್ ಕಡೆಯವರು ಹೋದಾಗ, ಇದು ನಮಗೆ ಸೇರಿದ ಆಸ್ತಿ, ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ಜಮೀರ್ ಬೆಂಬಲಿಗರು ತಗಾದೆ ತೆಗೆದಿದ್ದಾರೆ. ಆಗ, ನಿಖಿಲ್ ಕಡೆಯವರು ಕೀ ಒಡೆದು ಒಳಗೆ ಹೋಗಿದ್ದಾರೆ ಎಂದು ಜಮೀರ್ ಅವರದ್ದು ಆರೋಪ.












Click it and Unblock the Notifications