ಸಿಲಿಕಾನ್ ಸಿಟಿಯಲ್ಲಿ ದಸರಾವರೆಗೂ ನೈಟ್ ಕರ್ಫ್ಯೂ ವಿಸ್ತರಿಸಿ ಆದೇಶ
ಬೆಂಗಳೂರು, ಸೆ. 27: ರಾಜಧಾನಿ ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಮತ್ತೆ ವಿಸ್ತರಣೆ ಮಾಡಲಾಗಿದೆ. ಸೆ. 27 ಕ್ಕೆ ಅಂತ್ಯವಾಗಲಿದ್ದ ನೈಟ್ ಕರ್ಫ್ಯೂವನ್ನು ಬೆಂಗಳೂರು ನಗರ ಪೊಲೀಸ್ ಕಮೀಷನರೇಟರ್ ವ್ಯಾಪ್ತಿಯಲ್ಲಿ ಅಕ್ಟೋಬರ್ 11 ರ ವರೆಗೂ ವಿಸ್ತರಣೆ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ ಪಂತ್ ಆದೇಶ ಮಾಡಿದ್ದಾರೆ. ರಾತ್ರಿ ಹತ್ತು ಗಂಟೆಯಿಂದ ಬೆಳಗ್ಗೆ ಐದು ಗಂಟೆವರೆಗೂ ನೈಟ್ ಕರ್ಫ್ಯೂ ನಿಯಮಗಳು ಅಸ್ತಿತ್ವದಲ್ಲಿರಲಿವೆ.
ಬೆಂಗಳೂರು ನಗರದಲ್ಲಿ ರಾತ್ರಿ ಕರ್ಫ್ಯೂ ವಿಸ್ತರಣೆ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ ಪಂತ್ ಆದೇಶ ಹೊರಡಿಸಿದ್ದಾರೆ. ಕರ್ಫ್ಯೂ ವೇಳೆ ಪಾಲಿಸಬೇಕಾದ ನಿಯಮ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಸರ್ಕಾರದ ಮಾರ್ಗಸೂಚಿ ಮೇರೆಗೆ ಪರಿಷ್ಕೃತ ನೈಟ್ ಕರ್ಫ್ಯೂ ಆದೇಶವನ್ನು ಬಿಡುಗಡೆ ಮಾಡಿದ್ದಾರೆ.
ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ನಿರ್ಣಯ: ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ವಿಸ್ತರಣೆ ಮಾಡುವ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯದ ಕಾರ್ಯ ನಿರ್ವಹಣಾ ಪಡೆಯ ಅಧ್ಯಕ್ಷರು ಚರ್ಚಿಸಿ ಶಿಫಾರಸು ಮಾಡಿದ್ದಾರೆ. ಕೋವಿಡ್ ಸೋಂಕು ಹರಡುವ ಸಂಪರ್ಕ ಕೊಂಡಿ ತಪ್ಪಿಸುವ ಸಲುವಾಗಿ ಈ ನಿರ್ಬಂಧ ವಿಧಿಸಲಾಗಿದೆ. ಈ ಮೂಲಕ ಕೊರೊನಾ ಸೋಂಕು ನಿಯಂತ್ರಣಕ್ಕೆ ಕ್ರಮ ವಹಿಸಲು ಶಿಫಾರಸು ಮಾಡಲಾಗಿದೆ. ಅದರಂತೆ ಹಲವು ತಿಂಗಳಿನಿಂದಲೂ ರಾತ್ರಿ ವೇಳೆ ನೈಟ್ ಕರ್ಫ್ಯೂ ಜಾರಿಗೆ ತರಲಾಗಿದೆ.
ಆಹಾರ, ಹೋಟೆಲ್ ಸೇರಿದಂತೆ ವಿನಾಯಿತಿ ನೀಡಿರುವ ಕ್ಷೇತ್ರ ಹೊರತು ಪಡಿಸಿ ಬೇರೆ ಯಾವುದೇ ಚಟುವಟಿಕೆ ನಿರ್ವಹಣೆ ಮಾಡುವಂತಿಲ್ಲ. ಮಾಡಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶದಲ್ಲಿ ಸೂಚಿಸಿದ್ದಾರೆ.
ಮತ್ತಷ್ಟು ಹೊಡೆತ: ಆರ್ಥಿಕ ಚೇತರಿಕೆ ಕಾರಣ ಕೊಟ್ಟು ಬೆಳಗ್ಗೆ ವಹಿವಾಟು ನಡೆಸಲು ಅವಕಾಶ ಕೊಡಲಾಗಿದೆ. ರಾತ್ರಿ ಪಾಳಿಯಲ್ಲಿ ವಹಿವಾಟು ನಡೆಸುವರ ಮೇಲೆ ಈ ನಿರ್ಬಂಧಗಳಿಂದ ತುಂಬಾ ಪರಿಣಾಮ ಬೀರಲಿದೆ. ಬೆಳಗ್ಗೆ ವೇಳೆ ಮಾರುಕಟ್ಟೆಗಳಲ್ಲಿ ಜನ ತುಂಬಿ ತುಳುಕುತ್ತಿದ್ದಾರೆ. ಅವರಿಗೆ ಕೊರೊನಾ ಭೀತಿ ಇಲ್ಲ. ರಾತ್ರಿ ಪಾಳಿ ಕರ್ಫೂ ಹೆಸರಿನಲ್ಲಿ ಐದು ನಿಮಿಷ ತಡವಾದರೂ ಪೊಲೀಸರು ತಮ್ಮ ಮೇಲೆ ದರ್ಪ ತೋರುತ್ತಾರೆ. ಹಣ್ಣು- ತರಕಾರಿ ವ್ಯಾಪಾರಿಗಳಿಂದಲೂ ಹಣ ವಸೂಲಿ ಮಾರ್ಗಕ್ಕೆ ಈ ನೈಟ್ ಕರ್ಫೂ ಆದೇಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾನು ಹಣ್ಣಿನ ವ್ಯಾಪಾರ ಆರಂಭಿಸುವುದೇ ರಾತ್ರಿ ಏಳು ಗಂಟೆಯಿಂದ. ಪ್ರತಿ ದಿನ ಹನ್ನೊಂದು ಗಂಟೆ ರಾತ್ರಿ ವರೆಗೂ ವಹಿವಾಟು ನಡೆಸುತ್ತಿದ್ದೆ. ಆದೇಶದಲ್ಲಿ ಹತ್ತುಗಂಟೆಗೆ ನೈಟ್ ಕರ್ಫೂ ಜಾರಿ ಅಂತಿದ್ದರೂ, ಪೊಲೀಸರು ರಾತ್ರಿ 9 ಗಂಟೆಗೆ ಸೈರನ್ ಹಾಕಿಕೊಂಡು ಬರುತ್ತಾರೆ. ಬಡ ವ್ಯಾಪಾರಸ್ಥರ ಅನುಕೂಲಕ್ಕಾಗಿ ನೈಟ್ ಕರ್ಪೂ ಅವಧಿಯನ್ನು ರಾತ್ರಿ 11 ಗಂಟೆ ನಂತರ ಅನ್ವಯ ವಾಗುವಂತೆ ಆದೇಶ ಬದಲು ಮಾಡಬೇಕು ಎಂದು ಹಣ್ಣು ವ್ಯಾಪಾರಿಗಳು ಮನವಿ ಮಾಡಿದ್ದಾರೆ.
Recommended Video
ಸಂಚಾರ ಪೊಲೀಸರ ಕಾರ್ಯಾಚರಣೆ: ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ಪಾಳಿ ಕುಡಿದು ವಾಹನ ಚಾಲನೆ ಮಾಡುವರ ವಿರುದ್ಧ ದಾವೆ ಹಾಕುವ ಕಾರ್ಯಾಚರಣೆ ನಿಲ್ಲಿಸಿದ್ದರು. ಇದನ್ನೇ ದುರ್ಬಳಕೆ ಮಾಡಿಕೊಂಡಿದ್ದ ವಾಹನ ಸವಾರರಿಂದ ಅಪಘಾತ ಹೆಚ್ಚಳ ಹಿನ್ನೆಲೆಯಲ್ಲಿ ಕುಡುಕರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದೀಗ ನೈಟ್ ಕರ್ಪ್ಯೂ ವಿಸ್ತರಣೆಯಿಂದ ಪೊಲೀಸರ ನಿಗಾ ಮತ್ತಷ್ಟು ಹೆಚ್ಚಳವಾದಂತಾಗಿದೆ.