ಬೆಂಗಳೂರಿನ ಮಹತ್ವದ ರಸ್ತೆ ಯೋಜನೆಗೆ ಟೆಂಡರ್ ಕರೆದ ಎನ್ಹೆಚ್ಎಐ
ಬೆಂಗಳೂರು, ಸೆಪ್ಟೆಂಬರ್ 10: ಉದ್ಯಾನ ನಗರಿ ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಮಹತ್ವದ ಕೊಡಗೆ ನೀಡಲಿದೆ ಎಂದು ಅಂದಾಜಿಸಲಾದ ಬಹುನಿರೀಕ್ಷಿತ ಸ್ಯಾಟಲೈಟ್ ಟೌನ್ ವರ್ತುಲ ರಸ್ತೆ (ಎಸ್ಟಿಆರ್ಆರ್) ಯೋಜನೆಗೆ ಕೊನೆಗೂ ಚಾಲನೆ ಸಿಕ್ಕಿದೆ. 280 ಕಿ. ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ಎನ್ಹೆಚ್ಎಐ ಟೆಂಡರ್ ಕರೆದಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಹೆಚ್ಎಐ) ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಎಸ್ಟಿಆರ್ಆರ್ ಪಶ್ಚಿಮ ವಲಯದ ರಸ್ತೆ ನಿರ್ಮಾಣ ಮಾಡಲು ಸೆಪ್ಟೆಂಬರ್ 5ರಂದು 5 ಪ್ಯಾಕೇಜ್ಗಳ (144 ಕಿ. ಮೀ.) ಟೆಂಡರ್ ಕರೆದಿದ್ದು, ಯೋಜನವಾ ವೆಚ್ಚ 4,750 ಕೋಟಿಯಾಗಿದೆ.

4 ರಿಂದ 6 ಪಥವನ್ನು ಹೊಂದಿರುವ ಸಂಪೂರ್ಣ ನಿಯಂತ್ರಿತ-ಪ್ರವೇಶ ವ್ಯವಸ್ಥೆಯನ್ನು ಹೊಂದಿರುವ ಈ ಹೆದ್ದಾರಿಯು ಯಾವುದೇ ಟ್ರಾಫಿಕ್ ಸಿಗ್ನಲ್ಗಳನ್ನು ಒಳಗೊಂಡಿಲ್ಲ. ಬೆಂಗಳೂರು ಸುತ್ತಲಿನ ಉಪ ನಗರಗಳ ಮೂಲಕ ರಸ್ತೆ ಹಾದು ಹೋಗಲಿದೆ. ಇದು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.
ಹೇಗೆ ಸಾಗಲಿದೆ ಈ ರಸ್ತೆ?: ಈ ರಸ್ತೆ ದಾಬಾಸ್ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸೂಲಿಬೆಲೆ, ಹೊಸಕೋಟೆ, ಆನೇಕಲ್, ಕನಕಪುರ, ರಾಮನಗರ, ಮಾಗಡಿ ಮೂಲಕ ಸಾಗಲಿದ್ದು, ತಮಿಳುನಾಡಿನ ಹೊಸೂರಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಕರ್ನಾಟಕ ಸರ್ಕಾರದ ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ವಿಳಂಬವಾಗುತ್ತಿರುವ ಹೊತ್ತಿಗೆ ಎನ್ಹೆಚ್ಎಐ ಎಸ್ಟಿಆರ್ಆರ್ ಯೋಜನೆಗೆ ಟೆಂಡರ್ ಕರೆದಿದೆ.
ಈ ಸ್ಯಾಟಲೈಟ್ ಟೌನ್ ವರ್ತುಲ ರಸ್ತೆ (ಎಸ್ಟಿಆರ್ಆರ್) ಯೋಜನೆಯ ಒಟ್ಟು ವೆಚ್ಚ ಸುಮಾರು 17,000 ಕೋಟಿ. ಈ ರಸ್ತೆ ಬೈಪಾಸ್ಗಳನ್ನು ಹೊಂದಿರಲಿದ್ದು, ವಾಹನ ಸವಾರರಿಗೆ ಅನುಕೂಲವಾಗಲಿದೆ. ವಾಣಿಜ್ಯ ಮತ್ತು ಅಂತರರಾಜ್ಯ ವಾಹನಗಳು ಇದರಿಂದಾಗಿ ಬೆಂಗಳೂರು ನಗರ ಪ್ರವೇಶಿಸುವ ಅಗತ್ಯವಿಲ್ಲ. ಆದ್ದರಿಂದ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಎನ್ಹೆಚ್ಎಐ ಅಧಿಕಾರಿಗಳು ಹೇಳಿದ್ದಾರೆ.
ನೈಸ್ ರಸ್ತೆ ಮೂಲಕ ಸಾಗುವ ತಮಿಳುನಾಡು, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯದ ಲಾರಿಗಳಿಗೆ ಈ ರಸ್ತೆ ಪರ್ಯಾಯವಾಗಲಿದೆ. ಹೊಸೂರು ಪಟ್ಟಣಕ್ಕೆ ಸೇರುವ ಮೊದಲೇ ಲಾರಿಗಳು ತಿರುವು ಪಡೆದು ತುಮಕೂರು ರಸ್ತೆ, ಡಾಬಸ್ಪೇಟೆ ತಲುಪಬಹುದು.
ಹೊಸೂರು ಮತ್ತು ಮೈಸೂರು ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೂ ಈ ರಸ್ತೆ ಅನುಕೂಲವಾಗಲಿದೆ. ಬೈಪಾಸ್ ಇರಲಿದ್ದು, ಕೊಡಗು, ಮೈಸೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಅವಧಿಯೂ ಕಡಿಮೆಯಾಗಲಿದೆ.
ಈ ಯೋಜನೆಯ ಮೊದಲ ಪ್ಯಾಕೇಜ್ ನೆಲಮಂಗಲ ತಾಲೂಕಿನ ಓಬಳಾಪುರ-ಮಾಗಡಿ ತಾಲೂಕಿನ ಸೋಮಕ್ಕನಮುಟ್ಟ ತನಕ (46.30) ಕಿ. ಮೀ. ಎರಡನೇ ಪ್ಯಾಕೇಜ್ ಸೋಮಕ್ಕನಮುಟ್ಟ-ಕುಣಿಗಲ್ (32.7 ಕಿ. ಮೀ), 3ನೇ ಪ್ಯಾಕೇಜ್ ಕುಣಿಗಲ್-ಕನಕಪುರ ತಾಲೂಕಿನ ತಟ್ಟೆಕೆರೆ (33.64 ಕಿ. ಮೀ.). 4ನೇ ಪ್ಯಾಕೇಜ್ ತಟ್ಟೆಕೆರೆ-ಆನೇಕಲ್ ತಾಲೂಕಿನ ಬೆಗ್ಗನದೊಡ್ಡಿ (8.34 ಕಿ. ಮೀ) ಹೊಂದಿದೆ.
ಈ ರಸ್ತೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಮೂಲಕ ಹಾದು ಹೋಗಲಿದ್ದು, ಎಲಿವೇಟೆಡ್ ಬೈಪಾಸ್ ವಿನ್ಯಾಸಗೊಳಿಸಲಾಗಿದ್ದು, ಅರಣ್ಯ ಇಲಾಖೆ ಒಪ್ಪಿಗೆ ಇನ್ನೂ ಸಿಗಬೇಕಿದೆ. ಯೋಜನೆಯ 5ನೇ ಪ್ಯಾಕೇಜ್ ಬೆಗ್ಗೆನದೊಡ್ಡಿ- ಹೊಸುರು ತಾಲೂಕಿನ ಎಸ್.ಮುದುಗಡಪಳ್ಳಿ (23.27 ಕಿ. ಮೀ) ಇದೆ. ಅಕ್ಟೋಬರ್ ಅಂತ್ಯಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.












Click it and Unblock the Notifications